ಜಾನಪದ ಲೋಕದಲ್ಲಿ ಮೇಳೈಸಿದ ಗ್ರಾಮೀಣ ಆಟಗಳ ವೈಭವ
ರಾಮನಗರ, ಡಿಸೆಂಬರ್ 25 : ಹಿಂದಿನ ಕಾಲದಲ್ಲಿ ಕುಂಟೆಬಿಲ್ಲೆ, ಲಗೋರಿ, ಚಿನ್ನಿದಾಂಡು, ಚೌಕಬಾರ ಎಂಬ ಗ್ರಾಮೀಣ ಕ್ರೀಡೆಗಳನ್ನ ಮಕ್ಕಳು ಸೇರಿದಂತೆ ದೊಡ್ಡವರು ಕೂಡ ಆಟ ಆಡುತ್ತಿದ್ದರು.
ಆದರೆ ಕಾಲ ಬದಲಾದಂತೆ ಕ್ರಿಕೆಟ್, ವಾಲಿಬಾಲ್, ಟೆನ್ನಿಸ್ ಹೀಗೆ ವಿದೇಶಿ ಕ್ರೀಡೆಗಳು ಹೆಚ್ಚು ಜನ ಮನ್ನಣೆ ಪಡೆದು ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದ್ದಾರೆ.
ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಸಾಂಸ್ಕೃತಿಕ ತವರು ಎಂಬ ಖ್ಯಾತಿ ಪಡೆದಿರುವ ಜಾನಪದ ಲೋಕದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನ ಆಯೋಜನೆ ಮಾಡಲಾಗಿತ್ತು. ಕಳೆದ ಹತ್ತು ವರ್ಷಗಳಿಂದಲೂ ಕೂಡ ನಡೆಸಿಕೊಂಡು ಬರುತ್ತಿರುವ ಈ ಕ್ರೀಡಾಕೂಟಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದಲೂ ಕೂಡ ಸ್ಪರ್ಧಾಳುಗಳು ಭಾಗವಹಿಸಿದರು.
ಗ್ರಾಮೀಣ ಕ್ರೀಡೆಗಳ ಕೂಟ
ಕ್ರೀಡಾಕೂಟದಲ್ಲಿ ವಿಶೇಷವಾಗಿ ಗ್ರಾಮೀಣ ಕ್ರೀಡೆಗಳಾದ ಕುಂಟೆಬಿಲ್ಲೆ, ಚಿನ್ನಿದಾಂಡು, ಲಗೋರಿ ಸೇರಿದಂತೆ ಚೌಕಬಾರ ಹೀಗೆ ಹತ್ತು ಹಲವು ಕ್ರೀಡೆಗಳನ್ನ ಆಯೋಜನೆ ಮಾಡಲಾಗಿತ್ತು.
ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ
ಇನ್ನು ಈಗಿನ ಕಾಲದಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ, ಹಾಗಾಗಿ ಜಾನಪದ ಪರಿಷತ್ ವತಿಯಿಂದ ಪ್ರತಿವರ್ಷವೂ ಕೂಡ ಈ ಕಾರ್ಯಕ್ರಮವನ್ನ ನಡೆಸುತ್ತಿದ್ದೇವೆಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ತಿಮ್ಮೇಗೌಡ ತಿಳಿಸಿದರು.
ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ತಾಲ್ಲೂಕುಗಳಿಂದಲೂ ಕೂಡ ಈ ಕ್ರೀಡಾಕೂಟಕ್ಕೆ ಆಗಮಿಸಿದ್ದ ಸ್ಪರ್ಧಾಳುಗಳು ಗ್ರಾಮೀಣ ಭಾಗದ ನೆಚ್ಚಿನ ಕ್ರೀಡೆಗಳನ್ನ ಆಡುವ ಮೂಲಕ ಸಂತಸಪಟ್ಟರು.
ಜಾನಪದ ಲೋಕದಲ್ಲಿ ಆಯೋಜನೆ
ಇನ್ನು ಮಿಂಚಿಮರೆಯಾಗಿದ್ದ ಗ್ರಾಮೀಣ ಸೊಗಡಿನ ಆಟಗಳನ್ನ ಜಾನಪದ ಲೋಕದಲ್ಲಿ ಆಯೋಜನೆ ಮಾಡಿರುವುದು ನಿಜಕ್ಕೂ ಖುಷಿಯಾಗುತ್ತಿದೆ ಎಂದು ಕ್ರೀಡಾಕೂಟಕ್ಕೆ ಆಗಮಿಸಿದ್ದ ವಿದ್ಯಾರ್ಥಿನಿಯರು ಅಭಿಪ್ರಾಯಪಟ್ಟರು.
ಇದು ನಿಜಕ್ಕೂ ಸಂತಸದ ವಿಚಾರ
ಒಟ್ಟಾರೆ, ಮೊಬೈಲ್ಗಳಲ್ಲಿನ ಗೇಮ್ ಆಪ್ಗಳಲ್ಲೆ ಎಲ್ಲಾ ಆಟಗಳನ್ನ ಆಡುವ ಈ ಕಾಲದಲ್ಲಿ ಗ್ರಾಮಾಂತರ ಭಾಗದ ದೇಶಿಕ್ರೀಡೆಗಳನ್ನ ಯುವಪೀಳಿಗೆಗೆ ಪರಿಚಯಿಸುತ್ತಿರುವುದು ಮಾತ್ರ ನಿಜಕ್ಕೂ ಸಂತಸದ ವಿಚಾರ. ಮುಂದಿನ ದಿನಗಳಲ್ಲೂ ಕೂಡ ಇಂತಹ ಗ್ರಾಮೀಣ ಕ್ರೀಡಾಕೂಟದ ಸ್ಪರ್ಧೆಗಳು ಹೆಚ್ಚಾಗಿ ನಡೆಯಲಿ ಎಂಬುದೆ ನಮ್ಮ ಆಶಯ.