ಬೆಳೆಹಾನಿ; ಪರಿಹಾರ ಹೆಚ್ಚಿಸಲು ಅನಿತಾ ಕುಮಾರಸ್ವಾಮಿ ಆಗ್ರಹ
ರಾಮನಗರ, ನವೆಂಬರ್ 25; ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸುರಿದ ಮಳೆಯಿಂದ ರಾಮನಗರ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಹಾನಿಗೊಳಗಾಗಿರುವ ರೈತರ ರಾಗಿ ಹೊಲ, ನೆಲಕ್ಕುರಳಿದ ಮನೆಗಳನ್ನು ಶಾಸಕಿ ಅನಿತಾ ಕುಮಾರಸ್ವಾಮಿ ವೀಕ್ಷಣೆ ಮಾಡಿದರು.
ಗುರುವಾರ ಶಾಸಕರು ವಿಭೂತಿಕೆರೆ, ಅಂಜನಾಪುರ, ಬನ್ನಿಕುಪ್ಪೆ, ತೆಂಗಿನಕಲ್ಲು, ಕೈಲಾಂಚ, ರೇವಣಸಿದ್ದೇಶ್ವರಬೆಟ್ಟ, ಕಸಬಾ ಹೋಬಳಿಯ ಬಿಳಗುಂಬ, ತಿಬ್ಬೇಗೌಡನದೊಡ್ಡಿ, ಬೆಜ್ಜರಹಳ್ಳಿಕಟ್ಡೆ, ಪಾದರಹಳ್ಳಿ, ಅಂಜನಾಪುರ , ಹಳ್ಳಿಮಾಳ, ಅರ್ಚಕರಹಳ್ಳಿ ಹಾಗೂ ಕನಕಪುರ ತಾಲೂಕಿನ ಪಡುವಣಗೆರೆ, ಬನವಾಸಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿದರು. ಬೆಳೆ ನಷ್ಟಕ್ಕೊಳಗಾಗಿದ್ದ ರೈತರಿಗೆ ಧೈರ್ಯ ಹೇಳಿದರು. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.
"ಕಳೆದ 15 ದಿನಗಳಿಂದ ಸುರಿದ ಮಹಾ ಮಳೆಗೆ ಜಿಲ್ಲೆಯಲ್ಲಿ ರಾಗಿ, ಭತ್ತ, ತೊಗರಿ ಮತ್ತು ಜೋಳ ಸೇರಿದಂತೆ ಹಲವಾರು ಬೆಳೆ, ತರಕಾರಿ ಬೆಳೆಗಳು ನೀರು ಪಾಲಾಗಿವೆ. ಆಕಾಲಿಕ ಮಳೆ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಹಾ ಮಳೆಯಿಂದ ರೈತರ ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ" ಎಂದು ಅನಿತಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ರಾಮನಗರ: ಅಕಾಲಿಕ ಮಳೆಗೆ ನಲುಗಿದ ರೈತರು, 27 ಕೋಟಿ ರೂ. ಮೌಲ್ಯದ ಬೆಳೆ ನಷ್ಟ
ರಾಗಿ ತೆನೆಗಳಲ್ಲಿ ಮೊಳಕೆ ಒಡೆದು ಪೈರು ಬಂದಿರುವುದನ್ನು ರೈತರು ತೋರಿಸಿದರು. ಜಾನುವಾರು ಮೇವಿಗೆ ತೊಂದರೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಜೀವನಾಧಾರಕ್ಕೆ ಬೆಳೆದ ಫಸಲು ಕೈಸೇರದೆ ಆಹಾರ ಪದಾರ್ಥಗಳ ಕೊರತೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ರಾಮನಗರ; ಭಾರೀ ಮಳೆ, ಜೀವ ಕಳೆ ಪಡೆದ ಕಣ್ವ ನದಿ
ಈಗಾಗಲೇ ಕೃಷಿ ಇಲಾಖೆ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳಲ್ಲಿ ಮಾತನಾಡಿದ್ದೇನೆ ಯಾವುದೇ ರೈತರಿಗೆ ತೊಂದರೆ ಆಗದಂತೆ ಬೆಳೆ ಹಾನಿಯ ಸಂಪೂರ್ಣ ಸಮೀಕ್ಷೆ ನಡೆಸಿ ಬೆಳೆ ಹಾನಿಯ ವರದಿ ಸರ್ಕಾರಕ್ಕೆ ಬಹುಬೇಗನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಸೂಚಿಸಿದರು.
ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ
ಮನೆ ಕಳೆದು ಕೊಂಡಿರುವವರನ್ನು ಪಟ್ಟಿ ಮಾಡಿ ಅವರಿಗೆ ಸರ್ಕಾರದ ನೆರವು ನೀಡಬೇಕೆಂದು ಸಂಭಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ತಿಳಿಸಿದರು. ಮಳೆಯಿಂದ ಹಾನಿಯಾದ ರೈತರ ಬೆಳೆಗಳಿಗೆ ಸರ್ಕಾರ ಪರಿಹಾರ ಕೊಡಿಸುವ ಭರವಸೆ ನೀಡಿದ್ದು, ಹೆಚ್ಚಿನ ರೀತಿಯಲ್ಲಿ ವೈಜ್ಞಾನಿಕ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಯಾವುದೇ ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಮೊಳಕೆ ಒಡೆದ ರಾಗಿ; ಇದೇ ಸಂದರ್ಭದಲ್ಲಿ ಅಂಜನಾಪುರ ಗ್ರಾಮದಲ್ಲಿ ನಾಗರಾಜು ಎಂಬ ರೈತರು ರಾಗಿ ತೆನೆಗಳಲ್ಲಿ ಮೊಳಕೆ ಬಂದಿರುವುದನ್ನು ತೋರಿಸಿ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಬೇಕು. ಸರ್ಕಾರ ಕಡಿಮೆ ಪರಿಹಾರ ನೀಡುತ್ತದೆ ಎಂದು ತನ್ನ ಅಳಲು ತೋಡಿಕೊಂಡರು.
ಸರ್ಕಾರದ ನೀಡುವ ಪರಿಹಾರ ಹಣ ರೈತರ ಉಳುಮೆ ಖರ್ಚಿಗೂ ಅದು ಸಾಕಾಗುವುದಿಲ್ಲ. ಅದ್ದರಿಂದ ಸರ್ಕಾರದೊಂದಿಗೆ ಚರ್ಚೆಮಾಡಿ ರೈತನಿಗೆ ಹೆಚ್ಚಿನ ವೈಜ್ಞಾನಿಕ ಪರಿಹಾರ ಕೊಡಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಆನೆ ದಾಳಿ ತಪ್ಪಿಸಲು ಮನವಿ; ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜನಾಪುರ, ಚನ್ನಮಾನಹಳ್ಳಿ, ಚಿಕ್ಕೇನಹಳ್ಳಿ, ದೇವರದೊಡ್ಡಿ ಭಾಗಗಳಲ್ಲಿ ಕಳೆದ 20 ದಿನಗಳಿಂದ ಆನೆಗಳ ಕಾಟ ವಿಪರೀತವಾಗಿದ್ದು ರೈತರ ಬೆಳೆದ ಫಸಲು ಆನೆಗಳ ದಾಳಿಯಿಂದ ನಾಶವಾಗುತ್ತಿದೆ. ಆನೆ ದಾಳಿಗೆ ಹಾಳಾದ ಬೆಳೆಗೆ ಅರಣ್ಯ ಇಲಾಖೆ ವೈಜ್ಞಾನಿಕ ಪರಿಹಾರ ನೀಡುತ್ತಿಲ್ಲ ಕೂಡಲೇ ಅರಣ್ಯಾಧಿಕಾರಿಗಳಿಗೆ ರೈತರ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವಂತೆ ತಿಳಿಸಬೇಕು ಎಂದು ಚಿಕ್ಕೇನಹಳ್ಳಿ ಗ್ರಾಮದ ರೈತ ಬೈರಶೆಟ್ಟಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ, "ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ರೈತರ ಬೆಳೆ ನಷ್ಟಕ್ಕೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಆಗಿರುವ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಆನೆಗಳನ್ನು ಅವುಗಳ ಸ್ವಸ್ಥಾನ ಸೇರಿಸಲು ಕಾರ್ಯಾಚರಣೆ ಮಾಡಬೇಕು" ಎಂದು ಸೂಚಿಸಿದರು.
ಪರಿಹಾರ ಹೆಚ್ಚಳಕ್ಕೆ ಒತ್ತಾಯ; ಬೆಳೆ ಹಾನಿಗೆ ಸರ್ಕಾರದ ಕಡೆಯಿಂದ ಸೂಕ್ತ ಪರಿಹಾರ ಕೊಡಿಸುತ್ತೇನೆ. ಈಗ ಹೆಕ್ಟೆರ್ಗೆ 6800 ರೂ. ಸರ್ಕಾರ ನೀಡುತ್ತಿದೆ. ಆದರೆ ಸರ್ಕಾರದ ಪರಿಹಾರ ವೈಜ್ಞಾನಿಕವಾಗಿಲ್ಲ. ರಾಗಿ ಬೆಳೆ ಸಂಪೂರ್ಣ ಹಳಾಗಿದೆ, ರಾಗಿ ಫಸಲು ಜಮೀನಿನಲ್ಲೇ ಮೊಳಕೆ ಒಡೆದಿದೆ ಅಲ್ಲದೇ ಹುಲ್ಲು ಕೂಡ ರೈತನಿಗೆ ಸಿಗುತ್ತಿಲ್ಲ ಹಾಗಾಗಿ ಸರ್ಕಾರ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಶಾಸಕಿ ಅನಿತಾ ಕುಮಾರಸ್ವಾಮಿ ಆಗ್ರಹಿಸಿದರು.
ಈ ಸಂಬಂಧ ಎಚ್. ಡಿ. ಕುಮಾರಸ್ವಾಮಿ ಜೊತೆ ಚರ್ಚಿಸಿ ಅವರೊಟ್ಟಿಗೆ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ. ಕೆಲವೆಡೆ ಮನೆಗಳು ಹಾನಿಯಾಗಿರುವುದನ್ನು ಗಮನಿಸಿದ್ದೇನೆ. ಅವರಿಗೂ ಪರಿಹಾರ ನೀಡಲು ಸೂಚಿಸಿಸಿದ್ದೇನೆ.
ಮಳೆ ಹಾನಿ ಕುರಿತು ಪ್ರತಿ ಪಂಚಾಯತಿ ಮಟ್ಟದಲ್ಲೂ ಸರ್ವೆ ಕಾರ್ಯ ನಡೆಯುತ್ತಿದೆ. ಸೂಕ್ತ ಮಾಹಿತಿಯನ್ನು ಸರ್ಕಾರಕ್ಕೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.
Recommended Video