'ಮೈತ್ರಿ ಮಾಡಿಕೊಳ್ಳದಿದ್ದರೂ ರಾಮನಗರದಲ್ಲಿ ಜೆಡಿಎಸ್ಗೆ ಗೆಲುವು'
Recommended Video

ರಾಮನಗರ, ಅಕ್ಟೋಬರ್ 23 : 'ರಾಮನಗರ ಉಪ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ. ಅದರ ಅವಶ್ಯಕತೆಯೂ ಅವರಿಗೆ ಇಲ್ಲ ಎನಿಸುತ್ತದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹೇಳುವ ಸ್ಥಿತಿಯಲ್ಲಿ ಇಲ್ಲ. ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳಿದ್ದೇನೆ' ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ರಾಮನಗರದಲ್ಲಿ ಮಾತನಾಡಿದ ಬಾಲಕೃಷ್ಣ ಅವರು ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 'ನಾನು ಬಿಜೆಪಿ ಸೇರಲಿದ್ದೇನೆ ಎಂಬ ಸುದ್ದಿ ಸುಳ್ಳು. ನಾನು ಎಲ್ಲಿಯೂ ಹಾಗೆ ಹೇಳಿಲ್ಲ' ಎಂದು ಸ್ಪಷ್ಟಪಡಿಸಿದರು.
ನವೆಂಬರ್ 3ರಂದು ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಬಿಜೆಪಿಯಿಂದ ಎಲ್.ಚಂದ್ರಶೇಖರ್ ಅವರು ಕಣದಲ್ಲಿದ್ದಾರೆ.
ರಾಮನಗರ ಕ್ಷೇತ್ರ ಪಕ್ಕದಲ್ಲೇ ಇದ್ದರೂ ಮಾಗಡಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಎಚ್.ಸಿ.ಬಾಲಕೃಷ್ಣ ಅವರು ಪ್ರಚಾರಕ್ಕೆ ತೆರಳುತ್ತಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್ನಿಂದ ಅಮಾನತುಗೊಂಡಿದ್ದ ಬಾಲಕೃಷ್ಣ ಕಾಂಗ್ರೆಸ್ ಸೇರಿದ್ದರು....

ಮತ್ತೊಬ್ಬರ ಅವಶ್ಯಕತೆ ಇಲ್ಲ
'ರಾಮನಗರ ಉಪ ಚುನಾವಣೆ ಗೆಲ್ಲಲು ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬಕ್ಕೆ ಮತ್ತೊಬ್ಬರ ಅಗತ್ಯವಿಲ್ಲ. ಇಲ್ಲಿನ ಜನರೇ ಎದ್ದು ಅವರ ಪರವಾಗಿ ಕುಣಿಯುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿದ್ದರೂ ಅವರು ಗೆಲ್ಲುತ್ತಿದ್ದರು' ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಎಚ್.ಡಿ.ಬಾಲಕೃಷ್ಣ ಹೇಳಿದರು.

ಪ್ರಚಾರಕ್ಕೆ ಕರೆದಿಲ್ಲ
'ರಾಮನಗರ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ನಾನು ಹೋಗುತ್ತಿಲ್ಲ. ಪ್ರಚಾರಕ್ಕೆ ನನ್ನನ್ನು ಯಾರೂ ಕರೆದಿಲ್ಲ. ಅವರ ಅವಶ್ಯಕತೆಯೂ ಅವರಿಗೆ ಇಲ್ಲ ಎಂದು ಎನಿಸುತ್ತದೆ. ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ನಾನು ಏನೂ ಹೇಳುವುದಿಲ್ಲ. ವೈಯಕ್ತಿಕ ಅಭಿಪ್ರಾಯ ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ಅದನ್ನು ಪಕ್ಷದ ವೇದಿಕೆಯಲ್ಲಿಯೇ ತಿಳಿಸಿದ್ದೇನೆ' ಎಂದು ಬಾಲಕೃಷ್ಣ ಹೇಳಿದರು.

ಲೋಕಸಭೆಗೆ ಸ್ಪರ್ಧೆ ಇಲ್ಲ
ಬಾಲಕೃಷ್ಣ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯನ್ನು ಬಾಲಕೃಷ್ಣ ಅವರು ತಳ್ಳಿಹಾಕಿದರು.
'ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರ ಸುಳ್ಳು. ಈ ರೀತಿಯ ಯಾವುದೇ ಚರ್ಚೆ ನಡೆದಿಲ್ಲ' ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.

ಬಿಜೆಪಿ ಸೇರುವುದಿಲ್ಲ
'ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಶಾಸಕರು ಬಿಜೆಪಿಗೆ ಹೋಗಲಿದ್ದಾರೆ ಎಂಬುದೆಲ್ಲ ಸುಳ್ಳು. ನಾವೆಲ್ಲ ಎಲ್ಲಿಯೂ ಆ ರೀತಿ ಹೇಳಿಲ್ಲ. ನಾನು ಹಿಂದೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದೆ. ನನ್ನನ್ನು ಹಿಂದಿನಿಂದಲೂ ಆ ಪಕ್ಷದವರು ಸಂಪರ್ಕಿಸುತ್ತಿದ್ದಾರೆ. ಆದರೆ, ಪದೇ ಪದೇ ಪಕ್ಷ ಬದಲಾವಣೆ ಮಾಡುವುದು ಗೌರವ ತರುವ ವಿಚಾರವಲ್ಲ' ಎಂದು ಬಾಲಕೃಷ್ಣ ತಿಳಿಸಿದರು.

2018ರ ಚುನಾವಣೆ ಸೋಲು
ಜೆಡಿಎಸ್ನಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಿದ್ದ ಎಚ್.ಸಿ.ಬಾಲಕೃಷ್ಣ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಜೆಡಿಎಸ್ನ ಎ.ಮಂಜುನಾಥ್ ಅವರು 119492 ಮತಗಳನ್ನು ಪಡೆದು ಮಾಗಡಿಯಲ್ಲಿ ಜಯಗಳಿಸಿದ್ದರು. ಬಾಲಕೃಷ್ಣ ಅವರು 68067 ಮತಗಳನ್ನು ಪಡೆದು 2ನೇ ಸ್ಥಾನ ಪಡೆದಿದ್ದರು.











Click it and Unblock the Notifications