ರಾಮನಗರ ನಂತರ ಕನಕಪುರದಲ್ಲೂ ರೌದ್ರತೆ ಮೆರೆದ ವರುಣ
ರಾಮನಗರ, ಆಗಸ್ಟ್ 30: ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ತನ್ನ ರೌದ್ರತೆ ಮೆರದ ಮಳೆರಾಯ ಇದೀಗ ಕನಕಪುರದಲ್ಲೂ ತನ್ನ ಪ್ರತಾಪ ಮೆರೆದಿದೆ. ಮಳೆಯ ಆರ್ಭಟಕ್ಕೆ, ದೇವಾಲಯ, ವಸತಿ ಪ್ರದೇಶ ಹಾಗೂ ಅಂಗಡಿಗಳಿಗೆ ಜಲಾವೃತಗೊಂಡಿದ್ದು, ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದೆ.
ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಹಾರೋಹಳ್ಳಿ ಚೌಡೇಶ್ವರಿ ದೇವಸ್ಥಾನ, ಮರಳವಾಡಿ ರಸ್ತೆ, ಬಸ್ ನಿಲ್ದಾಣ, ಬ್ರಾಹ್ಮಣರ ಬೀದಿ ಸೇರಿದಂತೆ ಬಹುತೇಕ ಬಡಾವಣೆಗಳ ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ ಪರಿಣಾಮ ಜನರು ಇಡೀ ರಾತ್ರಿ ಜಾಗರಾಣೆ ಮಾಡಿದ್ದಾರೆ.
ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಪ್ರದೇಶಗಳಿಗೆ ಕನಕಪುರ ತಹಶಿಲ್ದಾರ್ ವಿ.ಆರ್.ವಿಶ್ವನಾಥ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಯಾರು ಕೂಡ ಇದುವರೆಗೂ ಬಾರದಿರುವುದನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹ ಪೀಡಿತ ಪ್ರದೇಶಗಳ ಬೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ ತಹಶೀಲ್ದಾರ್, ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಪ್ರತಿಭಟನೆ ನಿರತರಿಗೆ ಭರವಸೆ ನೀಡಿದರು.

ಪಟ್ಟಣ ಪಂಚಾಯತಿ ಕಾರ್ಯವೈಖರಿಗೆ ಆಕ್ರೋಶ
ಕಳೆದ ಸುಮಾರು 30 ವರ್ಷಗಳ ನಂತರ ಚುಳಕನಕೆರೆ ತುಂಬಿ ಹರಿಯುತ್ತಿದ್ದು, ಹಾರೋಹಳ್ಳಿ ಬಡಾವಣೆಯ ನಿವಾಸಿಗಳಿಗೆ ತುಂಬಾ ತೊಂದರೆಯಾಗಿದೆ. ಪಟ್ಟಣ ಪಂಚಾಯಿತಿಯ ಅವೈಜ್ಞಾನಿಕ ನಿರ್ವಹಣೆಯಿಂದ ಕಸದ ರಾಶಿಗಳು ಚಲ್ಲಾಪಿಲ್ಲಿಯಾಗಿ ರಸ್ತೆ ತುಂಬೆಲ್ಲ ಚದುರಿ ಹೋಗಿದ್ದು ಗಬ್ಬು ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂಥ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಎಂದು ರಾಮನಗರ ಚನ್ನಪಟ್ಟಣ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಚ್.ಎಸ್.ಮುರಳಿಧರ್ ಆಗ್ರಹಿಸಿದರು.

ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಹಾನಿ
ಆನೇಕಲ್ ಮುಖ್ಯ ರಸ್ತೆಯಲ್ಲಿ ಸುಮಾರು ಐವತ್ತಕ್ಕೂ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಹಾರ ಧಾನ್ಯಗಳು ಹಾಳಾಗಿದೆ. ಕನಕಪುರ ಮುಖ್ಯ ರಸ್ತೆಯಲ್ಲಿರುವ ಮಂಜುನಾಥ ಕಲ್ಯಾಣ ಮಂಟಪ, ಅಕ್ಕ ಪಕ್ಕದಲ್ಲಿರುವ ಖಾಸಗಿ ಲೇಔಟ್ಗಳು ನೀರಿನಿಂದ ತುಂಬಿ ಜಲಾವೃತಗೊಂಡಿವೆ. ಸಾರ್ವಜನಿಕ ಆಸ್ಪತ್ರೆಗೆ ನೀರು ನುಗ್ಗಿದ್ದು ರೋಗಿಗಳು ರಾತ್ರಿಯಿಡಿ ನಿದ್ರೆ ಇಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದರು ಪಟ್ಟಣ ಪಂಚಾಯತಿ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ ಎಂದು ಬಡಾವಣೆಯ ನಿವಾಸಿಗಳು, ಸಾರ್ವಜನಿಕರು ಆರೋಪಿಸಿದರು.

7 ಕಾಳಜಿ ಕೇಂದ್ರ ಸ್ಥಾಪನೆ
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ 259 ಹೆಕ್ಟೇರ್ ಕೃಷಿ ಬೆಳೆ (ರಾಗಿ, ಭತ್ತ, ತೊಗರಿ, ಮುಸ್ಕಿನ ಜೋಳ) ನಾಶವಾಗಿದ್ದರೆ, 221 ಹೆಕ್ಟೇರ್ ತೋಟಗಾರಿಕೆ ಬೆಳೆಗಳು (ಮುಖ್ಯವಾಗಿ ವಿಲೆದೆಲೆ, ತೆಂಗು, ಅಡಿಕೆ, ಬಾಳೆ, ತರಕಾರಿ ಬೀನ್ಸ್ ಟಮೋಟೋ, ಹೂ, ಹೀರೇಕಾಯಿ) ನೀರು ಪಾಲಾಗಿವೆ. ರಾಮನಗರದಲ್ಲಿ 177 ರೇಷ್ಮೆ ರೀಲಿಂಗ್ ಘಟಕಗಳಿಗೆ ಹಾನಿಯುಂಟಾಗಿದೆ.
ಮಳೆಯಿಂದ ಮನೆಕಳೆದು ಕೊಂಡಿರುವವರಾಗಿ ಹಾಗೂ ಸ್ಥಳಾಂತರಗೊಂಡಿರುವವರಿಗಾಗಿ 7 ಕೇಂದ್ರ ಕಾಳಜಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ 925 ಜನರು ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ.

ಭರ್ತಿಯಾದ ಮತ್ತು ಹಾನಿಗೊಳಗಾದ ಕೆರೆಗಳು
ಧಾರಾಕಾರ ಮಳೆಯಿಂದಾಗಿ ಸಣ್ಣ ನೀರಾವರಿ ಇಲಾಖೆಯ 102 ಕೆರೆ ಭರ್ತಿಯಾಗಿದ್ದರೆ, 81 ಕರೆ ಕೋಡಿ ಬಿದ್ದಿವೆ. ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ 1322 ಕೆರೆಗಳಿದ್ದು, ಎಲ್ಲವೂ ಭರ್ತಿಯಾಗಿವೆ. 2 ಕೆರೆ ಏರಿಗಳು ಹೊಡೆದಿದ್ದು, 30 ಕೆರೆಗಳಲ್ಲಿ ಸ್ವಲ್ಪ ಮಟ್ಟಿನ ಬಿರುಕು ಕಾಣಿಸಿಕೊಂಡಿದೆ.
ಇದಲ್ಲದೆ ಸುಮಾರು 178 ವಿದ್ಯುತ್ ಕಂಬಗಳು ಧರೆಗುರುಳಿದಿವೆ. 55 ಟಿಸಿಗಳಿಗೆ ಹಾನಿಯಾಗಿದೆ. 98 km ರಾಜ್ಯ ಹೆದ್ದಾರಿ, 29km ಜಿಲ್ಲಾ ರಸ್ತೆ , 20 ಸೇತುವೆಗಳು
315km ಗ್ರಾಮಗಳ ರಸ್ತೆಗಳು ಹಾನಿಗೊಳಗಾಗಿವೆ. ಕಳೆದ ಮೂರು ದಿನಗಳಲ್ಲಿ 222 ಮನೆಗಳು ಹಾನಿಗೊಳಗಾದರೆ. 3863 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣಗಳು ದಾಖಲಾಗಿವೆ. ಭಾರಿ ಮಳೆಗೆ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ತಲಾ ಒಬ್ಬರು ಮೃತಟ್ಟಿದ್ದಾರೆ.












Click it and Unblock the Notifications