ಉಚಿತ ಅಕ್ಕಿ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ- ಕುಮಾರಸ್ವಾಮಿ
ರಾಮನಗರ, ಜೂನ್ 28: ಚುನಾವಣೆಗೆ ಮೊದಲು ಕಾಂಗ್ರೆಸ್ ನೀಡಿದ್ದ ಉಚಿತ 10 ಕೆ.ಜಿ ಅಕ್ಕಿ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 5 ಕೆಜಿ ಅಕ್ಕಿ, ಉಳಿದ 5 ಕೆಜಿ ಅಕ್ಕಿ ಬದಲು ಹಣ ನೀಡಲು ಮುಂದಾಗಿರುವ ಸರ್ಕಾರದ ನಡೆಯನ್ನು ಅಕ್ಕಿ ಕೊಡ್ತಾರೋ, ದುಡ್ಡು ಕೊಡ್ತಾರೋ ಅದು ಅವರ ಹಣೆಬರಹ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ನಂತರ ಮಾತನಾಡಿದ ಅವರು, ಅಕ್ಕಿ ಕೊಡ್ತಾರೋ, ದುಡ್ಡು ಕೊಡ್ತಾರೋ ಅದು ಅವರ ಹಣೆಬರಹ. ಯಾವ ರೀತಿ ಮಾಡಬೇಕು ಅಂತ ಅವರೇ ತೀರ್ಮಾನ ಮಾಡಲಿ ಎಂದರು.

ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಮತ ಪಡೆಯಲು ತರಾತುರಿಯಲ್ಲಿ ಉಚಿತ ಗ್ಯಾರಂಟಿ ಘೋಷಣೆ ಮಾಡಿದ್ದರು. ಇದು ಅವರು ಮಾಡಿಕೊಂಡಿರೋ ಯಡವಟ್ಟು. ಮುಂದಾಗುವ ಅನಾಹುತಗಳ ಬಗ್ಗೆ ಯೋಚನೆ ಮಾಡದೆ ಘೋಷಣೆ ಮಾಡಿದ ಕಾರಣ ಯೋಜನೆ ಅನುಷ್ಠಾನಕ್ಕೆ ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ಸರ್ಕಾರ ಜನರಿಗೆ 5ಕೆ.ಜಿ ಅಕ್ಕಿ ವಿತರಿಸುವ ಬದಲು ಹಣ ಕೊಡೊದಾದ್ರೆ ಯಾವ ರೀತಿ ಕೊಡುತ್ತೀರಿ. ಯಾವ ರೀತಿ ಹಣ ತಲುಪಿಸುತ್ತೀರಿ. ಅದು ಮಧ್ಯವರ್ತಿಗಳ ಕೈ ಸೇರಲ್ವಾ.? ಸರ್ಕಾರ ಯೋಜನೆಯನ್ನು ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಯಾವ ರೀತಿಯಲ್ಲಿ ಅನುಷ್ಠಾನ ಮಾಡುತ್ತಾರೆ ಎಂಬುದನ್ನು ನೋಡೋಣ, ಇದರ ಸಾಧಕ ಬಾಧಕಗಳ ಬಗ್ಗೆ ಮುಂದೆ ಮಾತನಾಡುತ್ತೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ನೀಡಿರುವ ಅಕ್ಕಿ ಗ್ಯಾರಂಟಿ ಯೋಜನೆಗೆ ಅವಶ್ಯಕತೆ ಇರುವ ಸುಮಾರು 20 ಸಾವಿರ ಲೋಡ್ ಅಕ್ಕಿ ಕೊಡಲು ರಾಜ್ಯದ ಗಿರಣಿ ಮಾಲೀಕರು ಸಿದ್ಧರಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಅಕ್ಕಿ ಮಿಲ್ ಮಾಲೀಕರೊಂದಿಗೆ ಮಾತುಕತೆ ನಡೆಸುವ ಕಮಿಟ್ಮೆಂಟ್ ಇಲ್ಲ. ಉಚಿತ ಅಕ್ಕಿ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ. ನನ್ನ ಪ್ರಕಾರ ಯೋಜನೆಗೆ ಹಣ ಒದಗಿಸಲು ಏನೂ ಸಮಸ್ಯೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣ ಎಲ್ಲಿಂದ ತರುತ್ತಾರೆ? ಬಿಜೆಪಿ ಪಕ್ಷದವರು ಎನು ಬೇಕಾದರೂ ಹೇಳಬಹುದು. ನಾನು ಹಿಂದೆ ರೈತ ಸಾಲಮನ್ನಾ ಮಾಡಿದಾಗ ದರೋಡೆ ಮಾಡಿ ಕೊಟ್ನಾ ಎಂದಿದ್ದರು. ಜನರ ದುಡ್ಡನ್ನೇ ಅವರಿಗೆ ಕೊಟ್ಟಿದ್ದೇನೆ. ರಾಜ್ಯದ ಯಾವುದೇ ಯೋಜನೆಗೂ ಹಣದ ಕೊರತೆ ಇಲ್ಲ. ಸರಿಯಾಗಿ ಮ್ಯಾನೇಜ್ಮೆಂಟ್ ಮಾಡಬೇಕು ಅಷ್ಟೇ ಎಂದರು.












Click it and Unblock the Notifications