ಬಿಜೆಪಿ ಜೊತೆ ಮೈತ್ರಿ ವಿಚಾರ: ಓವರ್ ಟು ಎಚ್.ಡಿ.ಕುಮಾರಸ್ವಾಮಿ
ರಾಮನಗರ, ಮಾರ್ಚ್ 7: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, "ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಅವರ ಜತೆ ಕೈಜೋಡಿಸಲಿ? ರಾಜ್ಯಕ್ಕೆ ಬಿಜೆಪಿ ಕೊಟ್ಟ ಕೊಡುಗೆ ಏನು? ಮುಂದಿನ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುತ್ತೇವೆ. ಕಾಂಗ್ರೆಸ್, ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆಯುತ್ತೇವೆ. ಅವರಿಗಿಂತ ಜೆಡಿಎಸ್ ಪಕ್ಷ ಒಂದು ಕೈ ಮೇಲುಗೈ ಸಾಧಿಸುತ್ತದೆ" ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದರು.
ಬಿಜೆಪಿ ಜತೆ ಮೈತ್ರಿ ವಿಚಾರದ ಬಗ್ಗೆ ಮಾತನಾಡುತ್ತಾ, ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ ಎಂದ ಹೇಳಿರುವ ಕುಮಾರಸ್ವಾಮಿ, ಜೆಡಿಎಸ್ ವಿರುದ್ಧ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸುಳ್ಳು ಹರಡುತ್ತಿವೆ ಎಂದು ಆರೋಪ ಮಾಡಿದರು.
"ರಾಜ್ಯದಲ್ಲಿ ಚುನಾವಣೆ ವಾತಾವರಣ ನಿರ್ಮಾಣ ಆಗುತ್ತಿದೆ. ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಹೊಂದಾಣಿಕೆ ಪ್ರಶ್ನೆ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಈ ರೀತಿಯ ಸುದ್ದಿ ಹರಡಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿ ಮಾಡಲು ಈ ಸುದ್ದಿ ಹರಡಿಸುತ್ತಿವೆ" ಎಂದು ಖಾರವಾಗಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ನಾನು ರೈಟು, ಲೆಫ್ಟು ಇಲ್ಲ. ಸ್ಟ್ರೈಟ್ ಎನ್ನುವುದು ನಮ್ಮ ನಿಲುವು
"ನಿನ್ನೆ ದಿನ ಕಲಬುರ್ಗಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ರೈಟು, ಲೆಫ್ಟು ಇಲ್ಲ. ಸ್ಟ್ರೈಟ್ ಎನ್ನುವುದು ನಮ್ಮ ನಿಲುವು ಎಂದು. ಹೀಗಾಗಿ ಹೊಂದಾಣಿಕೆ ಪ್ರಶ್ನೆ ಇಲ್ಲ. ಹೊಂದಾಣಿಕೆ ಸಲುವಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಮೇಕೆದಾಟು ಪಾದಯಾತ್ರೆ ಮಾಡಿ 1000 ರು. ಹಣದ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರು, ಕೇಂದ್ರ ಜಲ ಸಂಪನ್ಮೂಲ ಸಚಿವರ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ? ಆ ಪಾದಯಾತ್ರೆಯ ಹಣೆಬರಹ ಎಲ್ಲಿಗೆ ಬಂದಿದೆ ಈಗ ಅನ್ನುವುದು ಎಲ್ಲರಿಗೂ ಗೊತ್ತಾಗಿದೆ. ಹತ್ತು ದಿನಗಳ ಕಾಲ ಭರ್ಜರಿ ಮೃಷ್ಟಾನ್ನ ಭೋಜನ, ಭೂರಿ ಭೋಜನ ತಿಂದು ಪಾದಯಾತ್ರೆ ಮಾಡಿದ್ದೇ ಇವರ ಸಾಧನೆ" ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ತಗೊಂಡು ಏನು ಮಾಡುತ್ತಾರೆ?
"ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ತಗೊಂಡು ಏನು ಮಾಡುತ್ತಾರೆ? ಈ ಸಾವಿರ ಕೋಟಿಯಲ್ಲಿ ಕೆಲಸ ಮಾಡಲು ಸಾಧ್ಯವೇ? ನಾಳೆ ಬೆಳಗ್ಗೆಯೇ ಮೇಕೆದಾಟು ಯೋಜನೆ ಕೆಲಸ ಆರಂಭವಾಗುತ್ತದಾ? ಎರಡು ರಾಷ್ಟ್ರೀಯ ಪಕ್ಷಗಳು ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿವೆ. ಜನರಿಗೆ ಮಕ್ಮಲ್ ಟೋಪಿ ಹಾಕುವುದು ಮತ್ತು ನೀರಾವರಿ ವಿಷಯದಲ್ಲಿ ಮೂರು ನಾಮ ಹಾಕಿರುವ ಕೆಲಸವನ್ನಷ್ಟೇ ಇವರು ಮಾಡಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಚರ್ಚೆ ಮಾಡುತ್ತೇನೆ. ಇನ್ನೂ 15 ದಿನಗಳ ಕಾಲ ಸಮಯವಿದೆ, ನನಗೆ ತಾಳ್ಮೆ ಇದೆ. ಮಕ್ಕಳಿಗಾಗಿ ಇಂದು ಬಂದಿದ್ದೇನೆ, ನನ್ನ ಕ್ಷೇತ್ರ ನನಗೆ ಮುಖ್ಯ" ಎಂದು ಕುಮಾರಸ್ವಾಮಿ ಹೇಳಿದರು.

ಶಾಲೆ ಕಟ್ಟಡವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಿದ್ದೇನೆ
"ವಿಧಾನಸಭಾ ಕಲಾಪ ಇದ್ದರೂ ಮಕ್ಕಳಿಗಾಗಿ ಬಂದಿದ್ದೇನೆ. ಶಾಲೆ ಕಟ್ಟಡವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಯಾರೂ ನಾಟಕ ಮಾಡುವುದು ಬೇಡ. ಕೆಲವರು ಚನ್ನಪಟ್ಟಣದಲ್ಲಿ ಚೆನ್ನಾಗಿ ನಾಟಕ ಆಡುತ್ತಿದ್ದಾರೆ. ಅವರು ಯಾರು ಎನ್ನುವುದು ಜನರಿಗೆ ಗೊತ್ತಿದೆ. ಯಾರಿಂದಲೂ ಚನ್ನಪಟ್ಟಣ ಜನತೆ ದಾರಿ ತಪ್ಪಿಸಲು ಆಗಲ್ಲ ಬ್ರಹ್ಮಣೀಪುರದಲ್ಲಿ ಯಾರೋ ಒಬ್ಬರು ಎಂಜಿನಿಯರ್ ರನ್ನು ಕರೆದುಕೊಂಡು ಹೋಗಿದ್ದರು. ನಾನು ಈಗಾಗಲೇ ಕಾವೇರಿ ನೀರಾವರಿ ನಿಗಮದಿಂದ ಹೊಸದಾಗಿ 53 ಕೋಟಿ ಅನುದಾನ ಸೇರಿದಂತೆ 100 ಕೋಟಿ ವೆಚ್ಚದಲ್ಲಿ ನಿಗಮದ ಕೆಲ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತು ಕೊಟ್ಟಿದ್ದೇನೆ" ಎಂದು ಕುಮಾರಸ್ವಾಮಿ ಹೇಳಿದರು.
Recommended Video

ಚನ್ನಪಟ್ಟಣ ಕ್ಷೇತ್ರದ ಕೆಲಸ ನಾನು ಮಾತ್ರ ಮಾಡುತ್ತಿದ್ದೇನೆ
"ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಜವಾಬ್ದಾರಿ ನಿರ್ವಹಣೆ ಮಾಡಿದ್ದೇನೆ. ಆದರೆ ಇಲ್ಲಿ ಎಂಎಲ್ಸಿ ಬರೀ ಕೆರೆ ವೀಕ್ಷಣೆಗೆ ನಿಂತಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಕೆಲಸ ನಾನು ಮಾತ್ರ ಮಾಡುತ್ತಿದ್ದೇನೆ. ಅವರು ಪಾಪ ಸ್ಕೋಪ್ ತೆಗೆದುಕೊಳ್ಳಲು ಹೊರಟಿದ್ದಾರೆ. ಎಂಪಿ ಏನು ಕೊಟ್ಟರು? ಈ ಹಿಂದೆ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಹಲವು ಹಳ್ಳಿಗಳಲ್ಲಿ ಅನಾಹುತ ಆಯಿತು. ರೈತರು ಬೆಳೆದ ಬೆಳೆಗಳು ಹಾನಿಗೆ ಒಳಗಾಗಿತ್ತು. ನಾನು ಬರುವ ಸುದ್ದಿ ತಿಳಿದು ಲೋಕಸಭಾ ಸದಸ್ಯರು ಕೂಡ ಬಂದಿದ್ದರು. ಅವರು ಬಂದು ಜನರಿಗೆ ಏನು ಕೊಟ್ಟರು" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.












Click it and Unblock the Notifications