ಡಿಕೆಶಿ ತಾಯಿ ಭೇಟಿ ಮಾಡಿ ಧೈರ್ಯ ತುಂಬಿದ ಕುಮಾರಸ್ವಾಮಿ
Recommended Video
ಕನಕಪುರ, ಸೆಪ್ಟೆಂಬರ್ 06: ಡಿ.ಕೆ.ಶಿವಕುಮಾರ್ ಅವರು ಇ.ಡಿ (ಜಾರಿ ನಿರ್ದೇಶನಾಲಯ)ಯಿಂದ ಬಂಧನವಾಗಿರುವ ಹಿನ್ನೆಲೆಯಲ್ಲಿ ಇಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಭೇಟಿಯಾಗಿ ಧೈರ್ಯ ಹೇಳಿದರು.
ರಾಮನಗರ ಜಿಲ್ಲೆ ಕನಕಪುರದ ಕೋಡಿಹಳ್ಳಿ ಗ್ರಾಮದಲ್ಲಿನ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿದ್ದ ಕುಮಾರಸ್ವಾಮಿ ಅಲ್ಲಿಯೇ ಗೌರಮ್ಮ ಅವರನ್ನು ಭೇಟಿ ಆದರು. ಕುಮಾರಸ್ವಾಮಿ ಅವರನ್ನು ಕಂಡೊಡನೆ ಕಣ್ಣೀರು ಸುರಿಸಿದ ಗೌರಮ್ಮನವರು, ಕೈಮುಗಿದು ದೈನ್ಯತೆಯಿಂದ ಕುಮಾರಸ್ವಾಮಿ ಅವರನ್ನು ಎದುರಾದರು.
ಗೌರಮ್ಮ ಅವರ ಕಾಲಿಗೆ ನಮಸ್ಕರಿಸಿದ ಕುಮಾರಸ್ವಾಮಿ ಬಹು ಸಮಯ ಅವರಿಗೆ ಸಾಂತ್ವನ ಹೇಳಿದರು. 'ಧೈರ್ಯದಿಂದಿರಿ, ನಿಮ್ಮ ಮಗ ಎಲ್ಲವನ್ನೂ ಎದುರಿಸುವ ಧೈರ್ಯ ಇರುವವನು ಎಲ್ಲವನ್ನೂ ಎದುರಿಸಿ ಹೊರಗೆ ಬರುತ್ತಾರೆ' ಎಂದು ಗೌರಮ್ಮ ಅವರಿಗೆ ಧೈರ್ಯ ತುಂಬಿದರು.
ಕೈಮುಗಿದುಕೊಂಡು, ಅಳುತ್ತಲೇ ಮಾತನಾಡಿದ ಗೌರಮ್ಮ ಅವರು, 'ನನ್ನ ಮಕ್ಕಳಿಗೆ ಹಿಂಸೆ ಕೊಡುತ್ತಿದ್ದಾರೆ. ಒಬ್ಬನನ್ನಾದರೂ ಕರೆದುಕೊಂಡು ಬಿಡೋಣ ಅಂತ ಪ್ರಯತ್ನ ಮಾಡುತ್ತಲೇ ಇದ್ದಾರೆ' ಎಂದು ಅವರು ಹೇಳಿದರು.

ಒಂದು ತಿಂಗಳ ಒಳಗಾಗಿ ಎಲ್ಲ ಸರಿಹೋಗುತ್ತೆ: ಎಚ್ಡಿಕೆ
'ನೀವು ಧೈರ್ಯವಾಗಿರಿ, ಹದಿನೈದು ದಿನ ಒಂದು ತಿಂಗಳು ಸ್ವಲ್ಪ ಕಷ್ಟ ಆದರೆ ನೀವು ಹೆದರುವುದು ಬೇಡ, ನಮಗೆ ಎಲ್ಲ ಗೊತ್ತಿದೆ. ನಿಮ್ಮ ಮಗ ನನ್ನ ಹತ್ತಿರ ಮಾತನಾಡಿದ್ದಾರೆ, ಆವಾಗ ಎಲ್ಲ ವಿಷಯ (ಐಟಿ ದಾಳಿ ಬಗ್ಗೆ) ಹೇಳಿದ್ದರು. ಅವರಿಗೆ ಏನೂ ಆಗುವುದಿಲ್ಲ ಆರಾಮವಾಗಿ ಹೊರಗೆ ಬರುತ್ತಾರೆ' ಎಂದು ಹೇಳಿದರು.

ಡಿಕೆಶಿ ಮಕ್ಕಳಿಗೂ ಪಾಪ ತೊಂದರೆ ಆಗ್ತಿದೆ: ಕುಮಾರಸ್ವಾಮಿ
'ಮಕ್ಕಳಿಗೂ (ಡಿಕೆ.ಶಿವಕುಮಾರ್ ಮಕ್ಕಳಿಗೆ) ಹಿಂಸೆ ಆಗ್ತಿದೆ ಆದರೆ ಇದೆಲ್ಲಾ ಹೆಚ್ಚು ದಿನ ಇಲ್ಲ ಎಲ್ಲಾ ಸರಿ ಹೋಗುತ್ತೆ. ನನ್ನ ಪತ್ನಿಯನ್ನು (ಅನಿತಾ ಕುಮಾರಸ್ವಾಮಿ) ಅವರನ್ನು ಆ ಮನೆಗೆ (ಸದಾಶಿವನಗರದ ಡಿಕೆಶಿ ನಿವಾಸ)ಕ್ಕೆ ಕಳುಹಿಸಿದ್ದೆ, ಮಕ್ಕಳನ್ನೂ ಸೊಸೆಯನ್ನೂ ಮಾತನಾಡಿಸಿಕೊಂಡು ಬಂದಿದ್ದಾರೆ' ಎಂದು ಕುಮಾರಸ್ವಾಮಿ ಅವರು ಗೌರಮ್ಮ ಅವರಿಗೆ ಹೇಳಿದರು.

ಡಿಕೆಶಿ ತಾಯಿ ಕಣ್ಣೀರು ಕುತಂತ್ರಿಗಳ ಸುಮ್ಮನೆ ಬಿಡಲ್ಲ: ಎಚ್ಡಿಕೆ
ಅಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 'ಡಿ.ಕೆ.ಶಿವಕುಮಾರ್ ಅವರ ತಾಯಿಯವರು ಹಾಕಿರುವ ಕಣ್ಣೀರು ಕುತಂತ್ರ ಮಾಡಿದವರ ಬಲಿ ಪಡೆಯುತ್ತದೆ' ಎಂದು ಹೇಳಿದರು.

ಇಡಿಗೆ ಸಹಕಾರ ಕೊಟ್ಟಿದ್ದರೂ ಬಂಧಿಸಿದ್ದಾರೆ: ಡಿಕೆ ಶಿವಕುಮಾರ್
'ಇ.ಡಿ ಅವರು ಕರೆದಾಗೆಲ್ಲಾ ಡಿಕೆಶಿ ಹೋಗಿದ್ದಾರೆ. ನಾಲ್ಕು ದಿನಗಳ ಕಾಲ ಸತತವಾಗಿ ವಿಚಾರಣೆ ನಡೆಸಿದ್ದಾರೆ ಆದರೂ ಅವರನ್ನು ಬಂಧಿಸಲಾಗಿದೆ, ಕಾಲ ಚಕ್ರ ತಿರುತ್ತದೆ, ಇದೇ ಗತಿ ಕುತಂತ್ರ ಮಾಡಿದವರಿಗೂ ಬರುತ್ತದೆ' ಎಂದು ಕುಮಾರಸ್ವಾಮಿ ಹೇಳಿದರು.

'ಎಲ್ಲ ಸರ್ಕಾರಗಳು ಐಟಿ, ಸಿಬಿಐ ದುರ್ಬಳಕೆ ಮಾಡಿಕೊಂಡಿವೆ'
ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಿಬಿಐ, ಐಟಿ ಇವುಗಳನ್ನು ದುರ್ಬಳಕೆ ಮಾಡಿಕೊಂಡಿವೆ. ಆದರೆ ಬಿಜೆಪಿಯು ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂದು ಕುಮಾರಸ್ವಾಮಿ ಹೇಳಿದರು.

'ಬಿಜೆಪಿಯವರು ಕೋಟ್ಯಂತರ ಖರ್ಚು ಮಾಡಿ ಆಪರೇಷನ್ ಕಮಲ ಮಾಡಿದ್ದಾರೆ'
ಬಿಜೆಪಿಯವರು ದೇಶದೆಲ್ಲೆಡೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಪರೇಷನ್ ಕಮಲ ಮಾಡಿದ್ದಾರೆ. ಒಬ್ಬೊಬ್ಬ ಶಾಸಕರಿಗೆ ಮೂವತ್ತು ಕೋಟಿ, ನಲವತ್ತು ಕೋಟಿ ಹಣ ನೀಡಿದ್ದಾರೆ ಅವರ ಮೇಲೆ ಕ್ರಮವಿಲ್ಲ ಏಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.












Click it and Unblock the Notifications