ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರ ಘೋಷಿಸಿದ ಎಚ್ಡಿ ಕುಮಾರಸ್ವಾಮಿ
ರಾಮನಗರ, ಅಕ್ಟೋಬರ್ 23: 2023ರ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಯಂತೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ, ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಐದಾರು ತಿಂಗಳು ಬಾಕಿ ಇದ್ದು, ಈಗಾಗಲೇ ಎಲ್ಲಾ ಪಕ್ಷಗಳು ಪಾದಯಾತ್ರೆಗಳ ಮೂಲಕ ಸಿದ್ಧತೆ ನಡೆಸುತ್ತಿವೆ. ಜೆಡಿಎಸ್ ನಾಯಕರು ಸಹಾ ಚುನಾವಣೆ ಅಖಾಡಕ್ಕಿಳಿಯಲು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಜೊತೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೂಡ ತಾವೂ ಸ್ಪರ್ಧಿಸುವ ಕ್ಷೇತ್ರವನ್ನು ತಿಳಿಸಿದ್ದಾರೆ. ಜೆಡಿಎಸ್ ನಾಯಕ ಚನ್ನಪಟ್ಟಣದಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಯೋಗೇಶ್ವರ್ ವಿರುದ್ಧ ಕಣಕ್ಕಿಳಿಯುವುದನ್ನು ಸ್ಪಷ್ಟಪಡಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದ ಎಚ್.ಡಿ ಕುಮಾರಸ್ವಾಮಿ
ಶನಿವಾರ ಸ್ವಕೇತ್ರ ಚನ್ನಪಟ್ಟಣದ ಜೆಡಿಎಸ್ ಪಕ್ಷದ ಕಛೇರಿ ಉದ್ಘಾಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ "ನನ್ನ ಮೇಲಿನ ಅಭಿಮಾನಕ್ಕೆ ಮಾಗಡಿ ಕ್ಷೇತ್ರ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಚನ್ನಪಟ್ಟಣದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ಕಳೆದ ಬಾರಿಯಂತೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಿಲ್ಲ'' ಎಂದು ಸ್ಪಷ್ಟಪಡಿಸಿದರು.
100 ಯೋಗೇಶ್ವರ್ ಬಂದರೂ ತಲೆ ಕೆಡಿಸಲ್ಲ
ಸರಕಾರದವರು ನನ್ನ ವಿರುದ್ದ ನಡೆಸುತ್ತಿರುವ ಹುನ್ನಾರ ನನಗೂ ಗೊತ್ತಿದೆ. ಇಂಥ ವ್ಯಕ್ತಿಗಳನ್ನು ಇನ್ನೂ ನೂರು ಜನರನ್ನು ಕಳಿಸಲಿ, ನಾನು ಹೆದರಿ ಪಲಾಯನ ಮಾಡುವ ವ್ಯಕ್ತಿ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರೇಳದೆ ಕಿಡಿ ಕಾರಿದರು.
''ಚನ್ನಪಟ್ಟಣ ಕ್ಷೇತ್ರದಲ್ಲಿ ಕೊಳಕು ಮಾಡಿ ಹಾಳು ಮಾಡಿದ್ದು ಅವರು. ಅದನ್ನೆಲ್ಲ ನಾನು ಈಗ ನಾನು ಕ್ಲೀನ್ ಮಾಡುತ್ತಿದ್ದೇನೆ. ಸಿ.ಪಿ.ಯೋಗೇಶ್ವರ್ ಅಂಬೇಡ್ಕರ್ ಭವನ ಕಟ್ಟುವುದಕ್ಕೆ ಕೂಡ ಬಿಡುತ್ತಿಲ್ಲ. ವಿನಾಕಾರಣ ಚನ್ನಪಟ್ಟಣ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಚನ್ನಪಟ್ಟಣಕ್ಕೆ ಯೋಗೇಶ್ವರ್ ಅಂತಹ 100 ಜನರನ್ನ ಕರೆದುಕೊಂಡು ಬನ್ನಿ, ನಾನು ಯಾವುದಕ್ಕೂ ತಲೆ ಕೆಡೆಸಿಕೊಳ್ಳೋದಿಲ್ಲ'' ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಎಚ್ಡಿಕೆ ಸವಾಲೆಸೆದರು.
ಸಂಪೂರ್ಣ ಸರ್ಕಾರ ನಡೆಸುವ ಸವಾಲು ಸ್ವೀಕರಿಸಿದ್ದೇನೆ- ಎಚ್.ಡಿ ಕುಮಾರಸ್ವಾಮಿ
ತಹಶೀಲ್ದಾರ್ಗೆ ಎಚ್ಚರಿಕೆ ನೀಡಿದ ಎಚ್ಡಿಕೆ
ಚನ್ನಪಟ್ಟಣ ತಹಶೀಲ್ದಾರ್ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ "ನನ್ನ ಕ್ಷೇತ್ರದಲ್ಲಿ ಬಂದು ಆತ ಆಟವಾಡುತ್ತಿದ್ದಾರೆ. ಮುಂದಿನ ಆರು ತಿಂಗಳ ಬಳಿಕ ಆತ ಎಲ್ಲಿರುತ್ತರೆ ಎನ್ನುವುದು ಗೊತ್ತಿದೆ. ನಮ್ಮ ಕುಟುಂಬದಲ್ಲಿ ಇಂಥವರನ್ನು ಲಕ್ಷಾಂತರ ಜನರನ್ನು ನೋಡಿದ್ದೇವೆ. ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಲೂಟಿ ಹೊಡೆಯುತ್ತಿದ್ದಾರೆ. ಕೆಲ ಕಳ್ಳರ ಜೊತೆ ಸೇರಿ ಆ ತಹಶೀಲ್ದಾರ್ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.
ಚನ್ನಪಟ್ಟಣ ಜನರೇ ನಮ್ಮನ್ನ ಗೆಲ್ಲಿಸುತ್ತಾರೆ
ನಾನು ಯಾರಿಗೋ ಹೆದರಿ ರಾಮನಗರ ಬಿಟ್ಟು ಹೋಗುವ ಮಗ ಅಲ್ಲ. ನಾನು ದೇವೇಗೌಡರ ಕುಟುಂಬದಲ್ಲಿ ಹುಟ್ಟಿರೋದು. ಎಲ್ಲದಕ್ಕೂ ಹೋರಾಟ ಮಾಡುವ ಶಕ್ತಿ ನಮ್ಮ ಅಪ್ಪ ನನಗೆ ಕೊಟ್ಟಿದ್ದಾರೆ. ನಾನು ಚನ್ನಪಟ್ಟಣದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ರಾಜ್ಯದ 120ಕ್ಕೂ ಹೆಚ್ಚು ಕಡೆ ನಾನು ಸಂಚಾರ ಮಾಡಬೇಕು. ನನ್ನ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸುತ್ತಾರೆ ಎಂದು ರಾಜಕೀಯ ವಿರೋಧಿಗಳಿಗೆ ಎಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಸರಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ
ಸರಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪೋಷಕರಿಂದ 100 ರೂ ಚಂದಾ ವಸೂಲಿಗೆ ಮುಂದಾಗಿದ್ದ ಸರಕಾರದ ಕ್ರಮವನ್ನು ಎಚ್.ಡಿ.ಕುಮಾರಸ್ವಾಮಿ ಖಂಡಿಸಿ ಇದು ಸರಕಾರದ ದಿವಾವಳಿತನ. ಸರಕಾರಿ ಶಾಲೆಗಳು ಸೂರುತ್ತಿವೆ, ಅವುಗಳಿಗೆ ಸರಿಯಾದ ವ್ಯವಸ್ಥೆ ಮಾಡುವ ಯೋಗ್ಯತೆ ಸರಕಾರಕ್ಕೆ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲ ಆದರೆ ಪೋಷಕರಿಂದ ಚಂದಾ ವಸೂಲಿ ಮಾಡುವುದು ಸರ್ಕಾರದ ದಿವಾಳಿತನ ಎಂದು ಟೀಕಿಸಿದರು.
ಸರಕಾರಿ ಶಾಲೆಯ ಮಕ್ಕಳ ಪೋಷಕರಿಂದ ಚಂದಾ ವಸೂಲಿಗೆ ಹೊರಡಿಸಿದ್ದ ಸುತ್ತೊಲೆ ವಾಪಸ್ಸು ಪಡೆದು, ತಕ್ಷಣವೇ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನು ಚಂದಾ ವಸೂಲಿ ಸುತ್ತೋಲೆ ವಿರುದ್ಧ ವಿಪಕ್ಷಗಳು ಹಾಗೂ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ವಾಪಾಸ್ ತೆಗೆದುಕೊಂಡಿದೆ.
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತರ ಘಟದ ಅಧ್ಯಕ್ಷ ಸೈಯ್ಯದ್ ಫಾಜಿಲ್ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.