ಸಿಎಂ ಯಡಿಯೂರಪ್ಪ ರಾಜೀನಾಮೆ ಸದ್ದು: ಮಾಜಿ ಮಿತ್ರ ಎಚ್ಡಿಕೆ ಪ್ರತಿಕ್ರಿಯೆ
ಮಂಡ್ಯ, ಜುಲೈ 22: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ವಿಚಾರ ಕ್ಷಣದಿಂದ ಕ್ಷಣಕ್ಕೆ ತೀವ್ರ ಕುತೂಹಲ ಮೂಡಿಸುತ್ತಿದ್ದು, ಈ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಾತನಾಡಿದ್ದಾರೆ.
Recommended Video
"ಬಿಎಸ್ವೈ ರಾಜೀನಾಮೆ ವಿಚಾರ ನನಗೆ ಸಂಬಂಧಿಸಿದ ವಿಷಯ ಅಲ್ಲ, ಅದು ಬಿಜೆಪಿ ಆಂತರಿಕ ವಿಚಾರ. ಅವರ ಪಕ್ಷದ ನಿರ್ಧಾರದಲ್ಲಿ ನಾನು ಮೂಗು ತೂರಿಸುವುದು ಶೋಭೆ ತರುವುದಿಲ್ಲ,'' ಎಂದು ತಿಳಿಸಿದರು.
ಇನ್ನು ಸಿಎಂ ಬಿಎಸ್ವೈಗೆ ಮಠಾಧೀಶರ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್ಡಿಕೆ, "ಈ ವಿಚಾರಕ್ಕೆ ನಾನು ಮಹತ್ವ ಕೊಡುವುದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಭಾವನೆ ಇದೆ, ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ಭಾವನೆ ಸರಿಯೋ, ತಪ್ಪೋ ನಿರ್ಧಾರ ಜನರದ್ದು,'' ಎಂದು ಅಭಿಪ್ರಾಯಪಟ್ಟರು.

"ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ 2 ವರ್ಷಗಳಿಂದ ನಡೆಯುತ್ತಿದ್ದು, ಸದ್ಯ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ವಿಷಯಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಆದಷ್ಟು ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ,'' ಎಂದು ಬಿಜೆಪಿ ಹೈಕಮಾಂಡ್ಗೆ ಮಾಜಿ ಸಿಎಂ ಎಚ್ಡಿಕೆ ಸಲಹೆ ನೀಡಿದರು.
ಮಾತು ಮುಂದುವರೆಸಿದ ಎಚ್.ಡಿ. ಕುಮಾರಸ್ವಾಮಿ, "ಯಡಿಯೂರಪ್ಪನವರು ನಾಡಿದ್ದು ರಾಜೀನಾಮೆ ನೀಡುತ್ತಾರೆ ಎನ್ನುತ್ತಿದ್ದಾರೆ, ಅದೇನೋ ನನಗೆ ಗೊತ್ತಿಲ್ಲ. ಆದರೆ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಸಾವಿರಾರು ಕೋಟಿಗಳ ಯೋಜನೆಗೆ ಅನುಮತಿ ನೀಡುತ್ತಿದ್ದಾರೆ. ನೀರಾವರಿ ಇಲಾಖೆಯ 4 ನಿಗಮಗಳಲ್ಲಿ 12 ಸಾವಿರ ಕೋಟಿ ಯೋಜನೆಗೆ ಅನುಮತಿ ನೀಡಲಾಗುತ್ತಿದೆ.''
"ಇಂದಿನ ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪ ಅನುಮತಿ ನೀಡುತ್ತಿದ್ದಾರೆ. 12 ಸಾವಿರ ಕೋಟಿ ಯೋಜನೆಯಲ್ಲಿ ಕಾವೇರಿ ನಿಗಮಕ್ಕೆ ಕೇವಲ 1 ಸಾವಿರ ಕೋಟಿ. ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹಳೇ ಕರ್ನಾಟಕ ಭಾಗದಿಂದ ಹೋಗುತ್ತಿದೆ. ನನಗೆ ಹಳೇ ಕರ್ನಾಟಕ, ಹೊಸ ಕರ್ನಾಟಕದ ಪ್ರಶ್ನೆ ಅಲ್ಲ. ಆ ಭಾಗಕ್ಕೆ ನೀಡುವ ಆದ್ಯತೆಯನ್ನೂ ಈ ಭಾಗಕ್ಕೂ ನೀಡಿ. ಇಲ್ಲಿನ ಜನ ನಿಮಗೇನು ದ್ರೋಹ ಮಾಡಿದ್ದಾರೆ?,'' ಎಂದು ಪ್ರಶ್ನಿಸಿದರು.
"ಈ ಭಾಗಕ್ಕೆ 1 ಸಾವಿರ ಕೋಟಿ ಆ ಭಾಗಕ್ಕೆ 11 ಸಾವಿರ ಕೋಟಿ ಯೋಜನೆ ಮಾಡಲಾಗಿದೆ. ನಿಜವಾಗಲೂ ಆ ಭಾಗದ ಜನರಿಗೆ ನೀರು ಕೊಡಲು ಯೋಜನೆ ರೂಪಿಸಿದ್ದೀರಾ? ದುಡ್ಡು ಹೊಡೆಯುವ ಯೋಜನೆ ನಿಮ್ಮದು. 2 ದಿನದಲ್ಲಿ ಸಿಎಂ ಬದಲಾಗುವುದಾದರೆ ತರಾತುರಿಯಲ್ಲಿ 12 ಸಾವಿರ ಕೋಟಿ ಯೋಜನೆ ಯಾಕೆ? ಅವರಿಗೆ ದರ್ದ್ ಏನಿದೆ, ಯಾವ ಕಾರಣಕ್ಕಾಗಿ ಈ ತೀರ್ಮಾನ? ಈಗಲೂ ದುಡ್ಡು ಹೊಡೆಯಲಿಕ್ಕಾ, ರಾಜ್ಯದ ತೆರಿಗೆ ಹಣ ಲೂಟಿ ಮಾಡಲಿಕ್ಕಾ?,'' ಎಂದು ಸಿಎಂ ಬಿಎಸ್ವೈಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.












Click it and Unblock the Notifications