"ಸಿಡಿ ಪ್ರಕರಣದ ಮಹಾನ್ ನಾಯಕ ಯಾರು? ಕುತೂಹಲ ನನಗೂ ಇದೆ''
ರಾಮನಗರ, ಮಾರ್ಚ್ 15: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ಮಹಾನ್ ನಾಯಕ ಯಾರು ಎಂದು ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
Recommended Video
ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, ಈ ಸಿಡಿ ಪ್ರಕರಣ ಸಾರ್ವಜನಿಕರಿಗೆ ನಗೆಪಾಟಲಿಗೆ ಪರಿವರ್ತನೆಯಾಗುತ್ತಿದೆ. ಯಾವುದೋ ಲಿಂಕ್ ತೆಗೆದುಕೊಂಡು ಧಾರಾವಾಹಿ ಮುಂದುವರೆಸಿದ ರೀತಿ ಇದೆ ಎಂದರು.
ಅಂತಿಮವಾಗಿ ಇದು ಯಾರಿಗೆ ಸುತ್ತಿಹಾಕಿಕೊಳ್ಳಲಿದೆ ಎಂದು ಕಾಯುತ್ತಿದ್ದೇನೆ. ರಾಜಕೀಯವಾಗಿ ನಮ್ಮ ಕುಟುಂಬದಲ್ಲಿ ಇಂತಹ ವಿಷಯಗಳ ಬಗ್ಗೆ ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡಿಲ್ಲ. ಇದು ಅವರ ವೈಯಕ್ತಿಕ ವಿಚಾರಗಳು, ಜನರ ಸಮಸ್ಯೆಗಳ ಬಗ್ಗೆ ದೊಡ್ಡ ಸವಾಲುಗಳಿವೆ. ಅದರ ಬಗ್ಗೆ ಗಮನ ಕೊಡಬೇಕೆ ಹೊರತು ಈ ರೀತಿಯ ಘಟನೆಗಳಿಂದ ನಮಗೆ ವೈಯಕ್ತಿಕ ಲಾಭ ಪಡೆಯಬೇಕು ಎಂಬ ಸಣ್ಣತನಕ್ಕೆ ನಾವು ಇಳಿಯುವುದಿಲ್ಲ ಎಂದು ತಿಳಿಸಿದರು.

ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ
ಈ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ ಹಿನ್ನೆಲೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್ಡಿಕೆ, ""ಯಾಕೆ ಅವರ ಹೆಸರು ತಂದುಕೊಂಡರೋ ಎಂಬುದು ಗೊತ್ತಿಲ್ಲ. ಯಾರಾದರೂ ಹೇಳಿದ್ದಾರಾ, ಅವರೇ ಮಾಡಿದ್ದಾರೆ ಎಂದು ಗೊತ್ತಿಲ್ಲ'' ಎಂದು ಹೇಳಿದರು. ರಮೇಶ್ ಜಾರಕಿಹೊಳಿ ಹೇಳಿದ್ದಾರಾ ಅಥವಾ ಮಾಧ್ಯಮದವರು ಏನಾದರೂ ಹೇಳಿದರಾ? ಯಾಕೆ ಅವರೇ ಊಹೆ ಮಾಡಿಕೊಂಡರೋ ಗೊತ್ತಿಲ್ಲವೆಂದು ರಾಮನಗರದಲ್ಲಿ ಮಾಜಿ ಸಿಎಂ ಎಚ್ಡಿಕೆ ಉತ್ತರಿಸಿದರು.

ಜೆಡಿಎಸ್ ಪಕ್ಷಕ್ಕೆ ಹಿನ್ನಡೆ
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೆಸರೇಳದೆ ಟಾಂಗ್ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ""ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿದ ಪರಿಣಾಮ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ರಾಮನಗರ ಜಿಲ್ಲೆಯಲ್ಲಿಯೂ ಹಿನ್ನಡೆಯಾಗಿದ್ದು, ರಾಮನಗರದಲ್ಲಿ ನಾನು, ನಮ್ಮ ತಂದೆ ಬಂದಾಗ ಕಾಂಗ್ರೆಸ್ ನವರು ಮನೆ ಸೇರಿದ್ದರು'' ಎಂದು ವ್ಯಂಗ್ಯವಾಡಿದರು.

ರಾಮನಗರದ ನನ್ನ ಭದ್ರಕೋಟೆ
ರಾಮನಗರದ ನನ್ನ ಭದ್ರಕೋಟೆಯ ಫೌಂಡೇಶನ್ ಅನ್ನು ಅಲುಗಾಡಿಸಲು ಪ್ರಾರಂಭ ಮಾಡಿದ್ದಾರೆ. ಚಿತ್ರದುರ್ಗದ ಮದಕರಿನಾಯಕನ ಕೋಟೆಗೆ ಹೈದರಾಲಿ ಸೈನಿಕರು ಕಿಂಡಿಯಲ್ಲಿ ನುಗ್ಗಿದ್ದರು. ಅದೇ ರೀತಿ ರಾಮನಗರದಲ್ಲಿ ಕಾಂಗ್ರೆಸ್ ನವರು ನನ್ನ ಕೋಟೆಗೆ ನುಗ್ಗಿದ್ದಾರೆ, ಅದು ಪ್ರಾರಂಭವಾಗಿದೆ. ಆದರೆ ನಾನು ಹೋರಾಟ ಮಾಡುತ್ತೇನೆ, ರಾಮನಗರದಲ್ಲಿ ನನಗೆ ಭಯವಿಲ್ಲ'' ಎಂದು ಕಿಡಿಕಾರಿದರು.

ಕಾರ್ಯಕರ್ತರನ್ನು ಅಲುಗಾಡಿಸಲು ಸಾಧ್ಯವಿಲ್ಲ
""ಮೈತ್ರಿ ಸರ್ಕಾರದಿಂದ ರೈತರ ಸಾಲಮನ್ನಾ ಮಾಡಿದೆ. ರೈತರಿಗೆ ಕೊಟ್ಟ ಮಾತನ್ನು ನಾನು ಉಳಿಸಿಕೊಂಡಿದ್ದೇನೆ, ಆ ಬಗ್ಗೆ ಸಮಾಧಾನವಿದೆ. ನನ್ನ ಪಕ್ಷದ ಯಾವ ಮುಖಂಡ, ಶಾಸಕರನ್ನು ಸೆಳೆದರೂ ಪರವಾಗಿಲ್ಲ. ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಅಲುಗಾಡಿಸಲು ಸಾಧ್ಯವಿಲ್ಲ''ವೆಂದು ಎಚ್ಚರಿಕೆ ನೀಡಿದರು. ಬೇರೆ ಪಕ್ಷದವರು ನಮ್ಮ ದೊಡ್ಡ ನಾಯಕರನ್ನು ಸೆಳೆಯಬಹುದು, ಆದರೆ ನಾಯಕರನ್ನು ಬೆಳೆಸೋರು ಕಾರ್ಯಕರ್ತರು. ಇನ್ನೂ ಎಷ್ಟೇ ಜನರು ಹೋದರೂ ಜೆಡಿಎಸ್ ಬಲವಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧ ರಾಮನಗರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.












Click it and Unblock the Notifications