ಬಿರಿಯಾನಿ, ಬಾಳೇಕಾಯಿ ಬಜ್ಜಿ..ಇದೇ ಮೇಕೆದಾಟು ಪಾದಯಾತ್ರೆ: ಎಚ್ಡಿಕೆ ವ್ಯಂಗ್ಯ
ರಾಮನಗರ, ಫೆ 19: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆಯ ಮುಂದುವರಿದ ಭಾಗ ಸದ್ಯದಲ್ಲೇ ಆರಂಭವಾಗಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಯಾತ್ರೆಯ ಬಗ್ಗೆ ಲೇವಡಿಯನ್ನು ಮಾಡಿದ್ದಾರೆ.
"ನೀರಾವರಿ ಯೋಜನೆಗಳಿಗೆ ವಾರ್ಷಿಕ ಆರು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುತ್ತಿದೆ. ಇದರಲ್ಲಿ ಅರ್ಧಕರ್ಧ ಗುತ್ತಿಗೆದಾರರಿಗೆ ಇನ್ನು ಅರ್ಧ ಇವರ ಜೇಬಿಗೆ ಹೋಗುತ್ತದೆ. ಇದು ಸದ್ಯ ರಾಜ್ಯದಲ್ಲಿ ನಡೆಯುತ್ತಿರುವಂತಹ ಪರಿಸ್ಥಿತಿ. ಇಂತಹ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಲು ನಾನು ಸಿದ್ದತೆ ಮಾಡಿಕೊಂಡಿದ್ದೆ" ಎಂದು ಕುಮಾರಸ್ವಾಮಿ ಹೇಳಿದರು.
"ಮೇಕೆದಾಟು ಪಾದಯಾತ್ರೆಯಿಂದ ಸಮಸ್ಯೆ ಬಗೆಹರಿಯುತ್ತೆ ಎನ್ನುವುದಾದರೆ ನಾನು ಕೂಡಾ ಕಾಂಗ್ರೆಸ್ ನಾಯಕರ ಜೊತೆ ಪಾದಯಾತ್ರೆ ಮಾಡಲು ಸಿದ್ದ. ನನ್ನ ಕರ್ಮಭೂಮಿಯಲ್ಲಿ ಯಾತ್ರೆ ನಡೆಸಿದರೆ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎನ್ನುವುದಾದರೆ ಅದು ಅವರ ಭ್ರಮೆ"ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.

"ರಾಮನಗರದ ಜನತೆಯ ಪ್ರೀತಿ ಇರುವವರೆಗೆ ಇವರು ಯಾರೂ ನನ್ನನ್ನು ಅಲ್ಲಾಡಿಸಲು ಆಗುವುದಿಲ್ಲ. ಇಂತಹ ಹತ್ತು ಪಾದಯಾತ್ರೆಯನ್ನು ಮಾಡಿದರೂ, ಇಲ್ಲಿನ ಜನ ನನ್ನ ಕೈಬಿಡುವುದಿಲ್ಲ"ಎನ್ನುವ ಭರವಸೆಯ ಮಾತನ್ನು ಕುಮಾರಸ್ವಾಮಿ ಆಡಿದರು.
"ಜನರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಪಾದಯಾತ್ರೆ ಮಾಡಿದರೆ ಓಕೆ, ದಿನಾ ಬಿರಿಯಾನಿ ಊಟ, ಎರಡು ಗಂಟೆಗೊಮ್ಮೆ ಬಾಳೇಕಾಯಿ ಬಜ್ಜಿ, ಜ್ಯೂಸ್ ಕುಡಿದುಕೊಂಡು, ಇದ್ಯಾವ ಯಾತ್ರೆ"ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
"ಮಂಡ್ಯದಲ್ಲಿ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಬೇಡಿ ಎಂದು ಹೇಳಿದ್ದೆ. ಹಿಜಾಬ್, ಗಿಜಾಬ್ ಸಂಬಂಧವಿಲ್ಲ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂದಿದ್ದೆ. ಆಡು ಭಾಷೆಯಲ್ಲಿ ಹಿಜಾಬ್, ಗಿಜಾಬ್ ಎಂದಿದ್ದೆ. ಅದಕ್ಕೆ ಹಿಜಾಬ್ ಬಗ್ಗೆ ಕುಮಾರಸ್ವಾಮಿ ಲೇವಡಿ ಮಾಡಿದರು ಎಂದು ಬಿಂಬಿಸಲಾಗುತ್ತಿದೆ" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು.
"ಎಲ್ಲಾ ಜಾತಿ, ಧರ್ಮಗಳನ್ನು ಗೌರವಿಸುವವನು ನಾನು, ಯಾವುದೇ ಸಮಾಜಕ್ಕೆ ಅಪಚಾರ ಮಾಡುವವನು ನಾನಲ್ಲ. ಇಂತಹ ಜನರ ಜೊತೆಗೆ ಎಚ್ಚರಿಕೆಯಿಂದ ಇರಬೇಕೆಂದು ನಾನು ಎಲ್ಲರಲ್ಲಿ ಮನವಿ ಮಾಡುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications