ಒತ್ತುವರಿ ತೆರವು: ₹300 ಬಾಡಿಗೆ, ಸಾವಿರಾರು ತಳ್ಳುಗಾಡಿ; ಬೆಂಗಳೂರಿನಲ್ಲಿ ಹೊಸ ದಂಧೆ ನಡೀತಿದೆ! ಕರವೇ
ಬೆಂಗಳೂರು: ರಾಜಧಾನಿ ಬೆಂಗಳೂರನ್ನು ವಿಶ್ವಮಟ್ಟದ ನಗರವಾಗಿಸಲು, ಇಲ್ಲಿನ ಸಂಚಾರ ಸಮಸ್ಯೆ ಬಗೆಹರಿಸುವ ಸಲುವಾಗಿ ರಾಜ್ಯ ಸರ್ಕಾರ ಪಾದಾಚಾರಿ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿದ್ದಾರೆ. ಇದನ್ನು ಬೆಂಬಲಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಇದೀಗ ಮತ್ತೊಂದು ಮಹತ್ವದ ದಂಧೆಯನ್ನು ಬೆಳಕಿಗೆ ತಂದಿದೆ. ಬೆಂಗಳೂರಿನಲ್ಲಿರುವ ಸಾವಿರಾರು ರಸ್ತೆ ಬದಿ ಅಂಗಡಿಗಳಿಗೆ ಉತ್ತರ ಪ್ರದೇಶದ ಮಾಲೀಕತ್ವ ಇದೆ. ಇದೊಂದು ದಂಧೆಯಾಗಿ ಮಾರ್ಪಟ್ಟಿದೆ ಎಂದು ತಿಳಿಸಿದೆ.
ಕೇಳಲು ಆಶ್ಚರ್ಯ ಅನ್ನಿಸಿದರೂ ಇದು ಸತ್ಯ. ದುಡಿಯಲು ಬೇರೆ ಬೇರೆ ಕಡೆಯಿಂದ ಬೆಂಗಳೂರಿಗೆ ಬರುವವರಲ್ಲಿ ನೌಕರರು, ಗಾರೆ ಕೆಲಸದ ಕಾರ್ಮಿಕರು, ಇನ್ನಿತರ ಕಾರ್ಖಾನೆ ಸಿಬ್ಬಂದಿ, ಅಂಗಡಿ ಮುಂಗಟ್ಟುಗಳಿಗೆ ತೆರಳುವವರು ಇದ್ದಾರೆ. ಬಾಡಿಗೆ ಹಿಡಿದು ಸಣ್ಣ ಪುಟ್ಟ ಹೋಟೆಲ್ ನಡೆಸುವವರು ಇದ್ದಾರೆ. ಈ ಪೈಕಿ ಐಸ್ ಕ್ರೀಂ, ಪಾನಿಪುರಿಯಂತಹ ಅಂಗಡಿಗಳು, ಅವುಗಳನ್ನು ನಡೆಸುವ ಬೇರೆ ರಾಜ್ಯಗಳ ಜನರೇ ಹೆಚ್ಚಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ತಳ್ಳುಗಾಡಿಗಳನ್ನು ಬಾಡಿಗೆ ನೀಡಲಾಗುತ್ತದೆ. ಅವೆಲ್ಲವುಗಳಿಗೆ ಉತ್ತರ ಪ್ರದೇಶ ಮೂಲದ ಒಬ್ಬ ವ್ಯಕ್ತಿಯೇ ಮಾಲೀಕನಾಗಿದ್ದಾನೆ. ಅವರದ್ದು ಒಂದು ದಂಧೆಯ ಜಾಲ ಹೆಣೆದುಕೊಂಡಿದ್ದಾರೆ ಎಂದು ಕರವೇ ನಾರಾಯಣಗೌಡರು ದೂರಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಒತ್ತುವರಿ ತೆರವನ್ನು ಬೆಂಬಲಿಸಿದ್ದಾರೆ.

300 ರೂ.ನಂತೆ 4000 ಅಂಗಡಿಗಳು ಬಾಡಿಗೆಗೆ; ಹೊಸ ದಂಧೆ
ನಗರದ ಅನೇಕ ವ್ಯಾಪಾರಿಗಳು, ಕೆಲವು ಸಂಘಟನೆಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಪಾದಚಾರಿ ಒತ್ತುವರಿ ತೆರವನ್ನು ವಿರೋಧಿಸುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿರುವ ಸುಮಾರು 4000 ಅಂಗಡಿಗಳಿಗೆ ಒಬ್ಬನೇ ಮಾಲೀಕನಿದ್ದಾನೆ. ಪ್ರತಿ ಅಂಗಡಿಗೆ ದಿನಕ್ಕೂ 300 ರೂಪಾಯಿಯಂತೆ ಬಾಡಿಗೆ ಪಡೆಯುತ್ತಾರೆ. ಅವೆಲ್ಲ ಅಂಗಡಿಗಳು ರಸ್ತೆ ಬದಿಯೇ ಇರುತ್ತವೆ ಎಂದು ಕರವೇ ನಾರಾಯಣಗೌಡರು ಹೇಳುವ ಮೂಲಕ ಸರ್ಕಾರದ ತೆರವು ಕ್ರಮ ಸರಿಯಾಗಿದೆ ಎಂದು ವಿವರಿಸಿದ್ದಾರೆ.
ಪ್ರತಿ ವ್ಯಾಪಾರಕ್ಕೊಬ್ಬ ಬೇರೆ ರಾಜ್ಯದ ವ್ಯಕ್ತಿ ಮಾಲೀಕ
ಯುಪಿ ಮೂಲದ ವ್ಯಕ್ತಿಯ ವಾಹನಗಳನ್ನು ದಿನಕ್ಕೂ 300 ರೂಪಾಯಿ ಯಂತೆ ಬಾಡಿಗೆ ಪಡೆಯುತ್ತಾರೆ. ಪ್ರತಿ ಅಂಗಡಿ ವ್ಯಾಪಾರದಲ್ಲಿ ಬಿಹಾರಿ, ಯುಪಿ, ಹರಿಯಾಣ ವ್ಯಕ್ತಿಗಳೇ ಇರುತ್ತಾರೆ. ಅವರು ರಸ್ತೆಬದಿ ಎಲ್ಲೆಂದರಲ್ಲಿ ಅಂಗಡಿಇಟ್ಟಿದ್ದಾರೆ. ಇದೆಲ್ಲವೊಂದು ಬೆಂಗಳೂರಿನಲ್ಲಿ ಒಂದು ದಂಧೆಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.
ಒತ್ತುವರಿ ತೆರವು ಬೇಡ್ವಾ? ಕರವೇ ಪ್ರಶ್ನೆ
ಇವರುಗಳ ಪಾದಾಚಾರಿಗಳ ಜಾಗ ಒತ್ತುವರಿ ಆಗುತ್ತಿದೆ. ರಸ್ತೆ ವ್ಯಾಪಾರದಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ಅಪಾಘಾತಗಳು, ಅಹಿಕರ ಘಟನೆಗಳು ಹೆಚ್ಚಾಗುತ್ತಿವೆ. ಈಗ ಹೇಳಿ ಇಂತಹ ಪಾದಾಚಾರಿ ಒತ್ತುವರಿ ತೆರವು ಬೇಡವಾ? ಎಂದು ಜನರನ್ನು ಕರವೇ ನಾರಾಯಣಗೌಡರು ಪ್ರಶ್ನಿಸಿದ್ದಾರೆ.
ಒತ್ತುವರಿ ತೆರವು ಮಾಡುತ್ತಿರುವ ನಿಮ್ಮ ನಡೆ ಸರಿಯಾಗಿದೆ ಎಂದು ಇತ್ತೀಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಕರವೇ ನಾರಾಯಣಗೌಡರು ಬೆಂಬಲ ವ್ಯಕ್ತಪಡಿಸಿದ್ದರು. ಒಟ್ಟಾರೆ ಬೆಂಗಳೂರಿನ ಶೇ. 10-20ರಷ್ಟು ರಸ್ತೆಗಳಲ್ಲಿ ಮಾತ್ರವೇ ಒತ್ತುವರಿ ತೆರವು ಮಾಡಲಾಗುತ್ತಿದೆ. ಯಾರಿಗೂ ಹೆದರದೇ ನೀವು ತೆರವು ಕಾರ್ಯ ಮುಂದುವರಿಸಿ ಎಂದು ತಿಳಿಸಿದ್ದಾರೆ.













Click it and Unblock the Notifications