ರಾಮನಗರದ ಸಾರ್ವಜನಿಕರಿಗೆ ಮನವಿ ಮಾಡಿದ ಅರಣ್ಯ ಇಲಾಖೆ
ರಾಮನಗರ, ಮೇ 16: ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಕೊಟ್ಟಗಾಣಹಳ್ಳಿಯಲ್ಲಿ 62 ವರ್ಷದ ಮಹಿಳೆ ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ವತಿಯಿಂದ ಮಾನವ ಪ್ರಾಣಹಾನಿ ಘಟನೆಗಳು ನಡೆದ ಸ್ಥಳದ ಸುತ್ತಮುತ್ತ ಕ್ಯಾಮರಾ ಟ್ರ್ಯಾಪ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಸದರಿ ಪ್ರದೇಶದಲ್ಲಿ ಬೋನುಗಳನ್ನು ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕಾಡಂಚಿನ ಗ್ರಾಮಗಳಲ್ಲಿ ಇಲಾಖಾ ಕ್ಷೇತ್ರಾಧಿಕಾರಿಗಳು ಹಗಲು-ರಾತ್ರಿ ಈಗಾಗಲೇ ಗಸ್ತು ತಿರುಗುವಂತೆ ಸೂಚಿಸಲಾಗಿದೆ. ಚಿರತೆ ಹಾವಳಿ ತಡೆಗಟ್ಟಲು ರಚಿಸಲಾಗಿರುವ ""ವನ್ಯಪ್ರಾಣಿ ಹಿಮ್ಮೆಟ್ಟಿಸುವ ತಂಡ'' ಕಾರ್ಯಾಚರಣೆಯು ತೀವ್ರ ಪ್ರಗತಿಯಲ್ಲಿದ್ದು, ಚಿರತೆಯನ್ನು ಸೆರೆ ಹಿಡಿಯುವವರೆಗೂ ಸಾರ್ವಜನಿಕರು ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕೋರಲಾಗಿದೆ.

1) ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ಒಂಟಿಯಾಗಿ ಓಡಾಡಬಾರದು. ಗುಂಪಾಗಿ ಓಡಾಡಬಹುದು ಮತ್ತು ಸಂಜೆ ೬ ರ ನಂತರ ಮನೆ ಸೇರಬೇಕು.
2) ಯಾವುದೇ ಕಾರಣಕ್ಕೂ ಬಯಲು ಬಹಿರ್ದೆಸೆಗೆ ಹೋಗಬಾರದು.
3) ಚಿರತೆಯು ಕಂಡಲ್ಲಿ ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಿ ಗದ್ದಲ ಮಾಡಬಾರದು. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು.

4) ದನಗಳನ್ನು ಮೇಯಿಸಲು ಮತ್ತು ಹೊಲಕ್ಕೆ ಹೋದಾಘ ಬಯಲು ಪ್ರದೇಶದಲ್ಲಿ ಕುಳಿತುಕೊಳ್ಳಬೇಕು. ಪೊದೆಗಳ ಬಳಿ ಒಂಟಿಯಾಗಿ ಕೂರಬಾರದು. ಚಿರತೆಯ ಬಗ್ಗೆ ಸದಾ ಕಾಲ ಎಚ್ಚರಿಕೆಯಿಂದಿರಬೇಕು.
5) ಸಂಜೆ ೬ ರ ನಂತರ ಸಾಕು ಪ್ರಾಣಿಗಳನ್ನು ಮನೆಯ ಅಥವಾ ಕೊಟ್ಟಿಗೆಯಲ್ಲಿ ಕೂಡಿ ಹಾಕಬೇಕು.
6) ಸಾಕು ಪ್ರಾಣಿಯನ್ನು ಚಿರತೆ ಹತ್ಯೆ ಮಾಡಿದಲ್ಲಿ ಅದನ್ನು ಮುಟ್ಟಬಾರದು ಮತ್ತು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು.
7) ಚಿರತೆಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಸಂಖ್ಯೆಗೆ ಕೂಡಲೇ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಅರಣ್ಯ ಇಲಾಖೆ ಸಹಾಯವಾಣಿ: 1926
ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ ವಿಭಾಗ, ರಾಮನಗರ: 9448381927












Click it and Unblock the Notifications