ರಾಮನಗರ ಜಿಲ್ಲೆಯಲ್ಲಿ ಮತ್ತೆ ಪುಂಡಾನೆಗಳ ಅಟ್ಟಹಾಸ; ಅನ್ನದಾತ ಕಂಗಾಲು
ರಾಮನಗರ, ಅಕ್ಟೋಬರ್, 11: ಈ ಹಿಂದೆ ಜಿಲ್ಲೆಯಲ್ಲಿ ಹಾವಳಿ ಎಬ್ಬಿಸಿದ್ದ ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದರು. ಮತ್ತೆ ಇದೀಗ ಪುಂಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ರಾತ್ರಿ ರೈತರ ಜಮೀನುಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ಭತ್ತ, ಮಾವು, ಬಾಳೆ, ತೆಂಗು ಸೇರಿದಂತೆ ಅಪಾರ ಪ್ರಮಾಣದ ಬೆಳೆಯನ್ನು ನಾಶ ಮಾಡಿವೆ.
ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳ ವ್ಯಾಪ್ತಿಯ ಜಮೀನುಗಳ ಮೇಲೆ ದಾಳಿ ಮುಂದುವರೆಸಿವೆ. ರಾಮನಗರ ತಾಲೂಕಿನ ಕುಂಬಾಪುರ ಗ್ರಾಮದ ರಮೇಶ್ ಹಾಗೂ ಪಾರ್ಥ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿ ಬೆಳೆಗಳನ್ನು ಸರ್ವನಾಶ ಮಾಡಿವೆ. ಅಗಷ್ಟ್ ತಿಂಗಳಿನಲ್ಲಿ ಐದು ಸಾಕಾನೆಗಳನ್ನು ಬಳಸಿಕೊಂಡು ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಸ್ಥಳಾಂತರ ಮಾಡಿತ್ತು. ಬಳಿಕ ಪುಂಡಾನೆಗಳ ತೊಂದರೆಯಿದ ಮುಕ್ತಿ ಸಿಗುತ್ತದೆ ಎಂದು ನಂಬಿದ್ದ ರೈತರಿಗೆ ಮತ್ತೆ ಆತಂಕ ಉಂಟಾಗಿದೆ. ತೆಂಗಿನಕಲ್ಲು ಅರಣ್ಯ ಹಾಗೂ ಕಬ್ಬಾಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುಂಡಾನೆ ಸೆರೆಯ ನಂತರ ಮತ್ತೆ ಕಾಡಾನೆ ದಾಳಿ ಸರ್ವೇ ಸಾಮಾನ್ಯ ಆಗಿದೆ.
ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿದ್ದೇಕೆ? ಚನ್ನಪಟ್ಟಣ ಪೊಲೀಸರಿಗೆ ನಿಖಿಲ್ ಪ್ರಶ್ನೆ
ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳ ಹಾವಳಿ
ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಕಾಡನೆ ದಾಳಿ ನಡೆಯುತ್ತಲೇ ಇದೆ. ಆದರೂ ಕಾಡಾನೆಗಳ ದಾಳಿಯನ್ನು ತಡೆಗಟ್ಟುವಲ್ಲಿ ಆರಣ್ಯ ಇಲಾಖೆ ವಿಫಲವಾಗಿದೆ. ಕಾವೇರಿ ವನ್ಯಜೀವಿ ವಲಯದಿಂದ ವಲಸೆ ಬಂದಿರುವ ಸುಮಾರು 25ಕ್ಕೂ ಹೆಚ್ಚು ಆನೆಗಳು 4-5 ಹಿಂಡುಗಳಾಗಿ ತೆಂಗಿನಕಲ್ಲು ಅರಣ್ಯ ಪ್ರದೇಶ ಮತ್ತು ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಅಲ್ಲದೆ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನೆಲ್ಲ ಸರ್ವನಾಶ ಮಾಡಲು ಮುಂದಾಗಿವೆ. ಆನೆ ದಾಳಿ ನಡೆದಾಗ ಬರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳ ಮಹಜರು ನಡೆಸಿ ಪರಿಹಾರ ಕೊಡಿಸುವುದಾಗಿ ಹೇಳುತ್ತಾರೆ. ಆದರೆ, ಯಾವುದೇ ಪರಿಹಾರವನ್ನು ಕೊಡಿಸದೇ ಕಾಣೆ ಆಗುತ್ತಾರೆ. ಮತ್ತೆ ಕಾಡನೆಗಳ ದಾಳಿಯಿಂದ ಬೆಳೆ ಹಾನಿ ಅಥವಾ ಪ್ರಾಣ ಹಾನಿಯಂತಹ ಘಟನೆಗಳು ನಡೆದಾಗ ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸುತ್ತಾರೆ ಎಂದು ರೈತರು ಕಿಡಿಕಾರಿದ್ದಾರೆ.
ಸಾಕಾನೆಗಳನ್ನು ಬಳಸಿ ಪುಂಡಾನೆಗಳ ಸೆರೆ
ರೈತರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ ಹೆಚ್ಚು ಹಾವಳಿ ಮಾಡುತ್ತಿದ್ದ ಎರಡು ಪುಂಡಾನೆಗಳನ್ನು ಸಾಕಾನೆ ಬಳಸಿ ಸೆರೆ ಹಿಡಿಯುವ ಕಾರ್ಯಚರಣೆ ಪ್ರಾರಂಭಿಸಿತ್ತು. ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯ ಬಿ.ವಿ.ಹಳ್ಳಿ ಗ್ರಾಮದ ಬಳಿ ಆಗಸ್ಟ್ 14ರಂದು 35 ವರ್ಷದ ಪುಂಡಾನೆಯನ್ನು ಸೆರೆ ಹಿಡಿದ್ದಿದ್ದರು. ನಾಲ್ಕು ದಿನಗಳ ನಂತರ ರಾಮನಗರ ತಾಲೂಕಿನ ಕಾಡನಕುಪ್ಪೆ ಗ್ರಾಮದ ಬಳಿ 19 ವರ್ಷದ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಲ್ಲಿ ಅರಣ್ಯ ಇಲಾಖೆ ಯಶಸ್ವಿ ಆಗಿತ್ತು.
ಬಿ.ವಿ.ಹಳ್ಳಿ ಗ್ರಾಮಸ್ಥರಿಂದ ಆರೋಪ
ಅದರೆ ಅರಣ್ಯ ಇಲಾಖೆ ಸೆರೆಯಿಡಿದಿರುವ ಎರಡನೇ ಆನೆ ಇನ್ನೂ ಮರಿ ಆಗಿತ್ತು. ಅರಣ್ಯ ಇಲಾಖೆ ಕಾರ್ಯಚರಣೆ ತ್ವರಿತವಾಗಿ ಮುಗಿಸಲು ಕೈಗೆ ಸಿಕ್ಕ ಆನೆಯನ್ನೇ ಸೆರೆಯಿಡಿದು ಪುಂಡಾನೆ ಎಂದು ನಂಬಿಸಲು ಮುಂದಾಗಿದ್ದಾರೆ ಎಂದು ಬಿ.ವಿ.ಹಳ್ಳಿ ಗ್ರಾಮಸ್ಥರ ಆರೋಪಿಸಿ ಪ್ರತಿಭಟನೆ ನಡೆಸಿದ್ದರು.
ಅರಣ್ಯ ಇಲಾಖೆ ಅಧಿಕಾರಿ ಹೇಳಿದ್ದೇನು?
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ ಸರ್ಕಾರದ ಒಪ್ಪಿಗೆ ಮೇರೆಗೆ ಮೂರನೇ ಪುಂಡಾನೆ ಸೆರೆಗೆ ಮುಂದಾಗಿದೆ. ನಾಳೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಿವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿತ್ತು. ಆದರೆ ಎರಡು ತಿಂಗಳು ಕಳೆಯುತ್ತಾ ಬಂದರೂ ಕೂಡ ಪುಂಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಇನ್ನು ಪ್ರಾರಂಭಿಸಿಲ್ಲ. ಹಾಗಾಗಿ ಮತ್ತೆ ಆನೆ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಯೆ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು, ದಸರಾ ಆಚರಣೆಯಲ್ಲಿ ಸಾಕಾನೆಗಳು ಭಾಗವಹಿಸಿದ ಹಿನ್ನೆಲೆಯಲ್ಲಿ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲು ಸಾಧ್ಯಯವಾಗಿಲ್ಲ. ಇದೀಗ ದಸರಾ ಮುಗಿದಿದ್ದು, ಸಾಕಾನೆಗಳು ತಮ್ಮ ತಮ್ಮ ಕ್ಯಾಂಪ್ಗಳಿಗೆ ತೆರಳಿವೆ. ಸದ್ಯದಲ್ಲೇ ಸಾಕಾನೆಗಳನ್ನು ಕರೆ ತಂದು ರೈತರಿಗೆ ಹೆಚ್ಚು ಉಪಟಳ ನೀಡುತ್ತಿರುವ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.