ಪ್ರವಾಸಿ ತಾಣವನ್ನಾಗಿ ಮಂಚನಬೆಲೆ ಅಭಿವೃದ್ಧಿ: ಡಿಸಿಎಂ ಅಶ್ವಥ್ ನಾರಾಯಣ
ರಾಮನಗರ, ಆಗಸ್ಟ್ 28: ರಾಮನಗರ ಜಿಲ್ಲೆಯ ಮಂಚನಬೆಲೆ ಜಲಾಶಯವನ್ನು ಪ್ರವಾಸಿ ತಾಣವನ್ನಾಗಿಸುವ ದೃಷ್ಠಿಯಿಂದ ಇಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ನಿರ್ಮಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ಇಂದು ತಿಳಿಸಿದರು.
Recommended Video
ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿರುವ ಮಂಚನಬೆಲೆ ಜಲಾಶಯವು ತುಂಬಿರುವ ಹಿನ್ನೆಲೆಯಲ್ಲಿ ಇಲ್ಲಿ ಬಾಗಿನ ಸಮರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಮನರಂಜನಾ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಲಾಗುವುದು. ದೋಣಿ ವಿಹಾರ ಸೇರಿದಂತೆ ಹಲವು ಬಗೆಯ ಮನರಂಜನೆಯ ಥೀಮ್ ಗಳನ್ನು ಒಳಗೊಂಡಿರುವ ಪಾರ್ಕ್ ಅನ್ನು ನಿರ್ಮಿಸಲು ಒತ್ತು ನೀಡಲಾಗುವುದು ಎಂದು ಹೇಳಿದರು.
ಕೊರೊನಾ ಸೋಂಕಿನಿಂದ ಡಿಕೆಶಿ ಗುಣಮುಖರಾಗಲಿ ಎಂದು ವಿಶೇಷ ಪೂಜೆ
ಜನರಿಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳಲಿದೆ
ಬೆಂಗಳೂರಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯ ಮಾಗಡಿಯ ಮಂಚನಬೆಲೆಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ನಿರ್ಮಿಸುವುದರಿಂದ ಎರಡೂ ನಗರಗಳ ಜನತೆಗೆ ವಾರಾಂತ್ಯದಲ್ಲಿ ಉತ್ತಮ ಮನರಂಜನಾ ಪಾರ್ಕ್ ಲಭ್ಯವಾಗುವುದಲ್ಲದೆ, ಇದರಿಂದ ಅನೇಕ ಜನರಿಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳಲಿದೆ. ಉತ್ತಮ ರಸ್ತೆಗಳು ಸಹ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಿವರಿಸಿದರು.
ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು
ಜಾಗತಿಕ ದರ್ಜೆಗೆ ಅನುಗುಣವಾಗಿ ಈ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ನಿರ್ಮಿಸಲಾಗುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಪಾರ್ಕ್ ಅನ್ನು ನಿರ್ಮಿಸುವ ಬಗ್ಗೆ ಅತ್ಯುತ್ತಮ ಸಂಸ್ಥೆಗಳ ಮೂಲಕ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು. ಯೋಜನೆಗೆ ಅನುಮೋದನೆ ಪಡೆದುಕೊಂಡ ಬಳಿಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಮಂಚನಬೆಲೆ ಜಲಾಶಯಕ್ಕೆ ಬಾಗಿನ ಸಮರ್ಪಣೆ
ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ಸೇರಿದಂತೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು, ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ನಾರಾಯಣ ಗೌಡ ಮತ್ತು ಸಂಸದ ಡಿ.ಕೆ. ಸುರೇಶ್ ಹಾಗೂ ಮಾಗಡಿ ಶಾಸಕ ಎ. ಮಂಜುನಾಥ್ ಸೇರಿದಂತೆ ಇನ್ನಿತರರು ಮಂಚನಬೆಲೆ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿದರು.
ಆಹ್ವಾನಿತರು ಒಟ್ಟಿಗೆ ದೋಣಿ ವಿಹಾರ ಮಾಡಿದರು
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ರಾಮನಗರ ಜಿಲ್ಲಾ ಪಂಚಯಿತಿ ಸಿಇಒ ಇಕ್ರಂ, ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ ವಿಜಯ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು. ಬಾಗಿನ ಸಮರ್ಪಣೆಯ ನಂತರ ಜಲಾಶಯದಲ್ಲಿ ಎಲ್ಲಾ ಆಹ್ವಾನಿತರು ಒಟ್ಟಿಗೆ ದೋಣಿ ವಿಹಾರ ಮಾಡಿದರು.