ಎಚ್.ಎಂ.ರೇವಣ್ಣ ಚನ್ನಪಟ್ಟಣ ಸ್ಪರ್ಧೆ ಕಾರಣ ಬಿಚ್ಚಿಟ್ಟ ದೇವೇಗೌಡರು
ರಾಮನಗರ, ಏಪ್ರಿಲ್ 12: ಎಚ್.ಡಿ.ಕುಮಾರಸ್ವಾಮಿ ಅವರು ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ. ಅದರಲ್ಲಿ ನನಗೆ ಸಂಶಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮತ್ತು ಬೆಂಬಲಿಗರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನಕಪುರದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದಾಗ ನನ್ನ ವಿರುದ್ಧ ಘಟಾನುಘಟಿ ನಾಯಕರೇ ಇಳಿದಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದ ನಾಯಕರು ನಿಲ್ಲಿಸಿದರು. ಬಿಜೆಪಿ ನಾಯಕರು ಶಿವಮೊಗ್ಗದಿಂದ ಈಶ್ವರಪ್ಪ ಅವರನ್ನು ಕರೆತಂದು ನಿಲ್ಲಿಸಿದರು ಅಂತಿಮವಾಗಿ ಚುನಾವಣೆಯಲ್ಲಿ ನಾನೇ ಜಯ ಗಳಿಸಿದೆ ಎಂದರು.
ಚನ್ನಪಟ್ಟಣದಿಂದ ಕಾಂಗ್ರೆಸ್ ಟಿಕೆಟ್ ಎಚ್ಚೆಂ ರೇವಣ್ಣಂಗೆ!
ಚನ್ನಪಟ್ಟಣದಲ್ಲಿ ಎಚ್.ಎಂ.ರೇವಣ್ಣ ಅವರನ್ನು ಬೇಕಾದರೂ ನಿಲ್ಲಿಸಲಿ. ಅಲ್ಲಿ ಜೆಡಿಎಸ್ ಸದೃಢವಾಗಿದೆ. ಅಲ್ಲಿನ ಕಾರ್ಯಕರ್ತರು ಎಲ್ಲ ಸೇರಿ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯಾಗಿ ಮಾಡಿಕೊಂಡಿದ್ದಾರೆ. ಯಾವುದೇ ಸಂಶಯವಿಲ್ಲದೇ ಎರಡೂ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಅವರು ಗೆಲುತ್ತಾರೆ ಎಂದು ಹೇಳಿದರು.
ಚನ್ನಪಟ್ಟಣದಿಂದ ಎಚ್.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗೌಡರು, ಅಹಿಂದ ಮುಖಂಡರು ನಮ್ಮ ಪಕ್ಷದಲ್ಲೂ ಇದ್ದಾರೆ. ಅದೇ ರೀತಿ ಚನ್ನಪಟ್ಟಣದಲ್ಲಿ ಇದ್ದಾರೆ. ನಾವು ಯಾರಿಗೂ ಅನ್ಯಾಯ ಅಥವಾ ಮೋಸ ಮಾಡಿಲ್ಲ್. ಎಲ್ಲ ವರ್ಗಕ್ಕೂ ಮೀಸಲಾತಿ ಕೊಟ್ಟವನು ನಾನೇ. ಇಲ್ಲೇ ಇದ್ದೇನೆ ಎಂದು ದೇವೇಗೌಡ ಹೇಳಿದರು.