ಡಿ.18ರ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ!
ರಾಮನಗರ, ಡಿಸೆಂಬರ್. 12 : 'ಕಾಂಗ್ರೆಸ್ನ 10ಕ್ಕೂ ಹೆಚ್ಚು ಮತ್ತು ಜೆಡಿಎಸ್ನ 8 ಶಾಸಕರು ಬಿಜೆಪಿ ಸೇರಲಿದ್ದಾರೆ' ಎಂದು ಚನ್ನಪಟ್ಟಣ ಶಾಸಕರ ಸಿ.ಪಿ.ಯೋಗೇಶ್ವರ ಹೊಸ ಬಾಂಬ್ ಸಿಡಿಸಿದರು.
ಮಂಗಳವಾರ ರಾಮನಗರ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ನ ಶಾಸಕರು ಬಿಜೆಪಿಗೆ ಸೇರಲಿದ್ದಾರೆ' ಎಂದರು.

'ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹಿಂದಿನಿಂದಲೂ ಹೊಂದಾಣಿಕೆ ರಾಜಕಾರಣ ಮಾಡುತ್ತಾ ಬಂದಿವೆ. ಇದೀಗ ರಾಜ್ಯಕ್ಕೂ ಸಹ ಅದು ವ್ಯಾಪಿಸಿದೆ. ಹಾಗಾಗಿಯೇ ಜೆಡಿಎಸ್ ಕನಕಪುರದಲ್ಲಿ ಡಿಕೆಶಿ ವಿರುದ್ದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ' ಎಂದರು ದೂರಿದರು.
'ಕಾಂಗ್ರೆಸ್ ಸಹ ರಾಮನಗರದಲ್ಲಿ ಕುಮಾರಸ್ವಾಮಿ ವಿರುದ್ಧ ಡಮ್ಮಿ ಅಭ್ಯರ್ಥಿಗಳನ್ನು ಹಿಂದಿನಿಂದಲೂ ಹಾಕುತ್ತಿದ್ದಾರೆ. ಇದರಿಂದಾಗಿಯೇ ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ಇಬ್ಬರು ಕೂಡ ನಿರಾಯಸವಾಗಿ ಗೆಲ್ಲುತ್ತಿದ್ದಾರೆ' ಎಂದು ಆರೋಪಿಸಿದರು.
'ಜೆಡಿಎಸ್ ಪಕ್ಷದಿಂದ ಅಪ್ಪ-ಮಗ ಮತ್ತು ಮೂಮ್ಮಗ ಹಾಗೂ ಡಿಕೆಶಿ ಸಹೋದರರು ಈ 5 ಮಂದಿ ತಾಲೂಕಿನಲ್ಲಿ ನನ್ನ ವಿರುದ್ಧ ಏನೇ ತಂತ್ರ ಪ್ರತಿತಂತ್ರ ನಡೆಸಿದರೂ ತಾಲೂಕಿನ ಜನರು ನನ್ನನ್ನು ಗೆಲ್ಲಿಸುತ್ತಾರೆ' ಎಂದು ಯೋಗೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
'ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯಲಿವೆ. ಅದರಲ್ಲೂ ಸಮ್ಮಿಶ್ರ ಸರ್ಕಾರ ಬಂದರೆ ಅಧಿಕಾರ ಹಂಚಿಕೆ ಮಾಡಿಕೊಳ್ಳುವ ಕುರಿತು ಮಾತುಕತೆಗಳು ನಡೆಯಲಿವೆ' ಎಂದು ಹೇಳಿದರು.
ಡಿಸೆಂಬರ್ 14ರಂದು ಗುಜರಾತ್ನಲ್ಲಿ 2ನೇ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 18ರಂದು ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications