ಐತಿಹಾಸಿಕ ಕೆಂಗಲ್ ದನಗಳ ಜಾತ್ರೆ ಕೋವಿಡ್ 3ನೇ ಅಲೆಗೆ ಬಲಿ
ರಾಮನಗರ, ಜನವರಿ 11; ಐತಿಹಾಸಿಕ ಹಾಗೂ ವರ್ಷದ ಮೊದಲ ದನಗಳ ಜಾತ್ರೆ ಎಂದೇ ಖ್ಯಾತಿ ಪಡೆದಿದ್ದ ಕೆಂಗಲ್ ದನಗಳ ಜಾತ್ರೆ ಕೋವಿಡ್ ಮೂರನೇ ಅಲೆ ಭೀತಿಗೆ ಬಲಿಯಾಗಿದೆ. ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ದನಗಳ ಜಾತ್ರೆ ನಿಷೇಧಿಸಿದೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಯ್ಯನಗುಡಿ ಜಾತ್ರೆ ಎಂದೇ ಖ್ಯಾತವಾಗಿದ್ದ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರೆಯನ್ನು ಕೋವಿಡ್ ಮೂರನೇ ಅಲೆ ಮತ್ತು ಓಮಿಕ್ರಾನ್ ಭೀತಿಯಿಂದ ರದ್ದು ಮಾಡಲಾಗಿದೆ. ಇದರಿಂದ ರೈತರು ಬೇಸರಗೊಂಡಿದ್ದಾರೆ.
ಕೋವಿಡ್ ಹರಡುವಿಕೆ ತಡೆಯಲು ಕರ್ನಾಟಕ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು ದೇವಾಲಯಗಳ ಜಾತ್ರೆ, ಉತ್ಸವ ರದ್ದುಗೊಳಿಸಿದೆ. ಇದರಿಂದಾಗಿ ದನಗಳ ಜಾತ್ರೆಗೆ ಸಹ ಜಿಲ್ಲಾಡಳಿತ ತಡೆ ಹಾಕಿದೆ. ಕೆಂಗಲ್ ಜಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಸೇರಿದಂತೆ ಹಲವರಿಗೆ ಕೋವಿಡ್ ಸೋಂಕು ತಗುಲಿದೆ. ಅಲ್ಲದೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ಕಾರಣದಿಂದಾಗಿ ಜಾತ್ರೆಯನ್ನು ರದ್ದು ಮಾಡಲಾಗಿದೆ ಜೊತೆಗೆ ದನಗಳ ಜಾತ್ರೆ ಅಂಗವಾಗಿ ನಡೆಯುತ್ತಿದ್ದ ದೇವಾಲಯದ ಧಾರ್ಮಿಕ ಆಚರಣೆಗಳಾದ ರಥೋತ್ಸವ ಹಾಗೂ ಪೂಜೆಗೂ ಸಹ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ರಾಮನಗರ ಮತ್ತು ಚನ್ನಪಟ್ಟಣ ಮಧ್ಯದಲ್ಲಿರುವ ಕೆಂಗಲ್ ದೇವಾಲಯದ ಬಳಿ ನಡೆಯುವ ದನಗಳ ಜಾತ್ರೆಯನ್ನು ಅಯ್ಯನ ಗುಡಿ ಜಾತ್ರೆ ಎಂದು ಕರೆಯಲಾಗುತ್ತದೆ. ಕೆಂಗಲ್ ದನಗಳ ಜಾತ್ರೆಯಲ್ಲಿ ರಾಸುಗಳನ್ನು ಮಾರಲು ಹಾಗೂ ಖರೀದಿ ಮಾಡಲು ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಜನರು ಆಗಮಿಸುತ್ತಿದ್ದರು.
ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ರೈತರಲ್ಲದೇ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದಿಂದಲೂ ಈ ಜಾತ್ರೆಗೆ ರೈತರು ಬಂದು ರಾಸುಗಳನ್ನು ಖರೀದಿ ಮಾಡುತ್ತಿದ್ದರು.
ಹಳ್ಳಿಕಾರ್ ಜಾತಿಯ ಎತ್ತು ಮತ್ತು ಹಸುಗಳು ವ್ಯವಸಾಯ ಮಾಡಲು ಯೋಗ್ಯವೆಂದು ಗುರುತಿಸಿಕೊಂಡಿವೆ. ಅದ್ದರಿಂದ ಸುತ್ತಮುತ್ತಲ ಜಿಲ್ಲೆಗಳ ರೈತರಲ್ಲದೇ ಹೊರ ರಾಜ್ಯದ ರೈತರು ಕೆಂಗಲ್ ಜಾತ್ರೆಗೆಯನ್ನು ರಾಸುಗಳ ಖರೀದಿಗೆ ಆಶ್ರಯಿಸಿದ್ದರು.
ಹೊರ ರಾಜ್ಯದಿಂದ ಬರುತ್ತಿದ್ದ ರೈತರು ತಾವು ಖರೀದಿ ಮಾಡಿದ ರಾಸುಗಳನ್ನು ಗೂಡ್ಸ್ ರೈಲುಗಳ ಮೂಲಕ ಸಾಗಾಟ ಮಾಡುತ್ತಿದ್ದರು. ಆದರೆ ದನಗಳ ಜಾತ್ರೆ ರದ್ದಾಗಿರುವುದರಿಂದ ಈ ಬಾರಿ ರಾಸುಗಳ ಗೊರಸಿನ ಸಪ್ಪಳ ಕೇಳದಂತಾಗಿದೆ.
Recommended Video
ರಾಮನಗರದಲ್ಲಿ ಸೋಮವಾರ 8 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 86 ಆಗಿದೆ.