ಸಿಎಎ ವಿರೋಧದ ಹಿಂದೆ ಕಾಂಗ್ರೆಸ್ ಸ್ವಾರ್ಥ ಸಾಧನೆ ಅಡಗಿದೆ; ಸಿ.ಪಿ.ಯೋಗೀಶ್ವರ್
ರಾಮನಗರ, ಜನವರಿ 4: "ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷದವರು ತಮ್ಮ ಸ್ವಾರ್ಥ ಸಾಧನೆಗಾಗಿ ವಿರೋಧಿಸುತ್ತಿದ್ದಾರೆ" ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರೋಪಿಸಿದ್ದಾರೆ. ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಬಿಜೆಪಿ ಹಮ್ಮಿಕೊಂಡಿದ್ದ ಜನಾಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಬೆಳಿಗ್ಗೆ ನಗರದ ಕೆಂಪೇಗೌಡ ವೃತದಿಂದ ಪ್ರಾರಂಭವಾದ ಜನಾಂದೋಲನ ಮೆರವಣಿಗೆ ಪ್ರಮುಖ ರಸ್ತೆಗಳಾದ ಐಜೂರು ವೃತ್ತ, ಹಳೆ ಬಸ್ ನಿಲ್ದಾಣ ಮತ್ತು ಎಂ.ಜಿ.ರಸ್ತೆ ಮೂಲಕ ಸಾಗಿ ಅಂತಿಮವಾಗಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು. ಜನಾಂದೋಲನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ರಾಜ್ಯ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣಗೌಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಪಾಲ್ಗೊಂಡಿದ್ದರು.
"ಲೋಕಸಭಾ ಚುನಾವಾಣೆಯ ಪೂರ್ವದಲ್ಲೇ ಬಿಜೆಪಿ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆವು, ಈಗ ಅದನ್ನು ಅನುಷ್ಠಾನ ಮಾಡಿದ್ದೇವೆ. ಇದರಿಂದ ದೇಶದ ಯಾವುದೇ ನಾಗರಿಕನಿಗೆ ತೊಂದರೆಯಿಲ್ಲ, ಹೊರದೇಶದಿಂದ ಬರುವ ಅಲ್ಪಸಂಖ್ಯಾತರಿಗೆ ಇದರಿಂದ ಅನುಕೂಲವಾಗಲಿದೆ. ಸಂಸತ್ತಿನ ಎರಡು ಸದನಗಳಲ್ಲಿ ಅಂಗೀಕಾರವಾಗಿರುವ ಕಾಯ್ದೆ ಬಗ್ಗೆ ತಪ್ಪು ತಿಳಿವಳಿಕೆಯನ್ನು ಜನರಲ್ಲಿ ತುಂಬಿ ಅಶಾಂತಿ ಮೂಡಿಸಲು ಕಾಂಗ್ರೆಸ್ ಹುನ್ನಾರ ನಡೆಸಿದೆ" ಎಂದು ದೂರಿದರು.

"ಜನರಿಗೆ ಅರಿವು ಮೂಡಿಸುವ ಸಲುವಾಗಿ ಕಾಂಗ್ರೆಸ್ ವಿರುದ್ಧ ಬೀದಿಗಿಳಿದಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನ ಚಾಳಿ ಮುಂದುವರೆಸಿದರೆ, ಕಾಂಗ್ರೆಸ್ ವಿರುದ್ಧ ಉಗ್ರ ರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.












Click it and Unblock the Notifications