ನಾವೆಲ್ಲಾ ಕಳ್ಳರೇ..ಒಪ್ಕೊತೀವಿ, ದೇವೇಗೌಡರು ದುಡ್ಡು ತಿಂದಿಲ್ಲ ಎಂದು ಪ್ರಮಾಣ ಮಾಡ್ತಾರಾ.?- ಕಾಂಗ್ರೆಸ್ ಶಾಸಕ
ರಾಮನಗರ, ಅಕ್ಟೋಬರ್ 27: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವರು ಐದು ತಿಂಗಳಿಂದ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎನ್ನುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದ್ದು, ಏಯ್..ತೂ..ಅವರ ಬಾಲಿಷ ಹೇಳಿಕೆಗೆ ಉತ್ತರ ಕೊಡಲ್ಲ. ಮಾಜಿ ಸಿಎಂ ಆಗಿ ಚಿಲ್ಲರೆ ತರ ಮಾತನಾಡುತ್ತಾರೆ ಎಂದು ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಸರಿಯಾಗಿ ತೂಕವಾಗಿ ಮಾತನಾಡಲು ಹೇಳಿ.
ದೇವೇಗೌಡರನ್ನು ಕರೆಸಿ ಆಣೆ ಮಾಡಿಸುತ್ತಾರಾ ಕೇಳಿ. ದೇವೇಗೌಡರು ದುಡ್ಡು ತಿಂದಿಲ್ಲ ಅಂತ ಬಂದು ಪ್ರಮಾಣ ಮಾಡ್ತಾರಾ.? ಎರಡು ಬಾರಿ ಸಿಎಂ ಆದವರು ಸಮಯೋಚಿತವಾಗಿ ಮಾತನಾಡಬೇಕು ಎಂದಿದ್ದಾರೆ.

ಸರಿ ನಾವು ಕಳ್ಳರೇ, ಒಪ್ಪಿಕೊಳ್ಳುತ್ತೇವೆ. ನಾವೆಲ್ಲಾ ತಿಂದಿದ್ದೇವೆ. ಹಾಗಿದ್ದರೆ ನಾನು ಸತ್ಯಹರಿಶ್ಚಂದ್ರ, ನಾವೇನು ತಿಂದಿಲ್ಲ ಅಂತ ಕುಮಾರಸ್ವಾಮಿ ಬಂದು ಆಣೆ ಮಾಡಿ. ನೀವ್ ಬಂದು ಆಣೆ ಮಾಡಿ ಅಂದರೆ ಅವರನ್ನು ಕರೆಯಿರಿ, ಇವರನ್ನು ಕರೆಯಿರಿ ಎನ್ನುವುದಲ್ಲ. ನೀವು ಮೋದಿ ಕರೆಯಿರಿ ಅಂದರೆ ಕರೆಯೋಕಾಗುತ್ತಾ.? ಒಬ್ಬ ಮಾಜಿ ಮುಖ್ಯಮಂತ್ರಿ ಈ ರೀತಿ ಮಾತನಾಡಬಾರದು ಎಂದು ಹೇಳಿದರು.
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಮರುನಾಮಕರಣ ವಿಚಾರವಾಗಿ ಮಾತನಾಡಿದ ಮಾಗಡಿ ಶಾಸಕ ಹೆಚ್. ಸಿ.ಬಾಲಕೃಷ್ಣ ಮರುನಾಮಕರಣ ಮಾಡಿದ್ರೆ ಏನಾಗುತ್ತದೆ..? ಬೇಡ ಎಂದು ಉಪವಾಸ ಮಾಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಸುಮ್ಮನೆ ಏನೇನೋ ಮಾತನಾಡುತ್ತಾರೆ ಬಿಡಿ ಎಂದು ಹೇಳಿದ್ದಾರೆ.

ಮಾಗಡಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ
ಇನ್ನು ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಇಂದು ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಗಡಿ ತಾಲೂಕಿನ ಶಿವಕುಮಾರ ಸ್ವಾಮೀಜಿ ಆಡಿಟೋರಿಯಂನಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಸಿ ಬಾಲಕೃಷ್ಣ, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಸೇರಿದಂತೆ ಅಧಿಕಾರಗಳು ಭಾಗಿಯಾಗಿದ್ದಾರೆ.












Click it and Unblock the Notifications