ಇದು ನಿಮ್ಮಿಂದ ಸಾಧ್ಯವೇ? ಕುಮಾರಸ್ವಾಮಿ ಎಂದು ಪ್ರಶ್ನಿಸಿದ ಎಚ್.ಸಿ ಬಾಲಕೃಷ್ಣ
ರಾಮನಗರ, ನವೆಂಬರ್22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 123 ಸ್ಥಾನ ಗೆಲ್ಲದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಘೋಷಣೆ ಮಾಡಿದ್ದೀರಿ..? ಇದು ನಿಮ್ಮಿಂದ ಸಾಧ್ಯವೇ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಮುಖಂಡ ಎಚ್.ಸಿ ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಎಚ್.ಸಿ ಬಾಲಕೃಷ್ಣ ಒಂದು ಕಾಲದಲ್ಲಿ ಕುಮಾರಸ್ವಾಮಿ ಅವರ ಆಪ್ತರಾಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಎಚ್.ಸಿ ಬಾಲಕೃಷ್ಣ ಗುರುತಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಜೆಡಿಎಸ್ನಲ್ಲಿ ಬಂಡಾಯ ಸಾರಿ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಬೇಕು: ಸಿಎಂ ಬಸವರಾಜ ಬೊಮ್ಮಾಯಿ
ಇದೀಗ ಜೆಡಿಎಸ್ ತೊರೆದಿದ್ದ ಎಚ್ಡಿಕೆ ಗೆಳೆಯರು ಮತ್ತೆ ಜೆಡಿಎಸ್ಗೆ ಸೇರುತ್ತಾರೆ ಎಂದು ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ , ತಮ್ಮ ಹಳೆಯ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸುವ ಮೂಲಕ ತಾವು ಮತ್ತೆ ಜೆಡಿಎಸ್ ಸೇರುವ ವಿಚಾರವನ್ನು ಪರೋಕ್ಷವಾಗಿ ಅಲ್ಲಗಳೆದಿದ್ದಾರೆ.
ಹೆಚ್ಡಿಕೆ ಉನ್ನತ ನಾಯಕನಾಗಿ ಪ್ರಾಮಾಣಿಕವಾಗಿ ಮಾತನಾಡಬೇಕು
ಬಿಡದಿ ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬಾಲಕೃಷ್ಣ, ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಕಳೆದ ಬಾರಿಯೂ ಕೂಡ ಇದೇ ಘೋಷಣೆ ಮಾಡಿದ್ದರು. ನಾನು ಅವರಿಗೆ ಮನವಿ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿಯಾಗಿ ಒಂದು ಪಕ್ಷದ ಉನ್ನತ ನಾಯಕನಾಗಿ ಪ್ರಾಮಾಣಿಕವಾಗಿ ಮಾತನಾಡಬೇಕು. ಜೆಡಿಎಸ್ ಪಕ್ಷವು 123 ಸ್ಥಾನಗಳನ್ನು ಗೆಲ್ಲದಿದ್ದರೆ ಪಕ್ಷ ವಿಸರ್ಜಿಸುವುದಾಗಿ ಹೇಳುತ್ತೀದ್ದೀರಿ. ನಿಮ್ಮಿಂದ ಇದು ಸಾಧ್ಯವೇ..? ಸುಮ್ಮನೆ ಸುಳ್ಳು ಹೇಳಬಾರದು ಎಂದು ಲೇವಡಿ ಮಾಡಿದರು.
ಟಿಆರ್ಎಸ್ ಶಾಸಕರ ಖರೀದಿ ಪ್ರಕರಣ: ಬಿಜೆಪಿ ಮುಖಂಡ ಬಿಎಲ್ ಸಂತೋಷ್ಗೆ ಲುಕ್ಔಟ್ ನೋಟಿಸ್
ನಾನು ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಲ್ಲ
ನಾನು ನಾಲ್ಕು ಬಾರಿ ಶಾಸಕನಾಗಿದ್ದೆ. ಆದರೆ, ನಮ್ಮ ಪಕ್ಷದ ಆಡಳಿತ ಇಲ್ಲದ ಕಾರಣಕ್ಕೆ ವಿಶೇಷ ಅನುದಾನ ತರಲು ಸಾಧ್ಯವಾಗಲಿಲ್ಲ. ನಾನು ಕೂಡ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಬಹುದಿತ್ತು. ಆದರೆ, ನನಗೆ ಅದು ಸರಿ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡೆ. ಕಾಂಗ್ರೆಸ್ ಸೇರಿದ ನಂತರ 9 ತಿಂಗಳಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಯುಜಿಡಿ, ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆ ಮಂಜೂರು ಮಾಡಿಸಿದ್ದೇನೆ ಎಂದರು
ಶಾಸಕ ಎ.ಮಂಜುನಾಥ್ಗೆ ಉತ್ತರ ಕುಮಾರ ಎಂದ ಎಚ್.ಸಿ.ಬಾಲಕೃಷ್ಣ
ನಾನು ಕಾಂಗ್ರೆಸ್ ಅಡಳಿತ ಅವಧಿಯಲ್ಲಿ ಮಂಜೂರು ಮಾಡಿಸಿರುವ ಅಭಿವೃದ್ಧಿ ಕಾಮಾಗಾರಿಗಳ ಬಗ್ಗೆ ದಾಖಲೆ ಸಮೇತ ಸಾಬೀತುಪಡಿಸುತ್ತೇನೆ. ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ಯೋಜನೆಗಳನ್ನು ನಾನೇ ಮಾಡಿದ್ದು ಎಂದು ಹೇಳಿಕೊಳ್ಳುವ ನೀವು, ದಾಖಲೆ ಸಮೇತ ಸಾಬೀತುಪಡಿಸಿ, ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಹಾಲಿ ಶಾಸಕ ಎ.ಮಂಜುನಾಥ್ ಅವರಿಗೆ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಎಂದು ಸವಾಲು ಹಾಕಿದರು.
ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಬಹಿರಂಗ ಚರ್ಚೆಗೆ ಕರೆದರೆ ನೀವು ಫಲಾಯನ ಮಾಡುತ್ತೀರಿ. ನೀವು ಉತ್ತರ ಕುಮಾರ, ಮುಖಾಮುಖಿ ಚರ್ಚೆ ಮಾಡುವುದು ನಿಮ್ಮಿಂದ ಸಾಧ್ಯವಿಲ್ಲ. ವಿವಿಧ ಶೀರ್ಷಿಕೆಗಳ ಅಡಿಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಬಗ್ಗೆ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರಿ. ಜನರ ಕಿವಿಗೆ ಹೂವಿಡುವ ಕೆಲಸ ಮಾಡುವುದನ್ನು ನೀವು ಬಿಡಬೇಕು. ಜನರನ್ನು ದಡ್ಡರೆಂದು ಭಾವಿಸಿದರೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎ.ಮಂಜುನಾಥ್ ವಿರುದ್ಧ ಕಿಡಿ ಕಾರಿದರು.
ನಾನು ಹೊಟ್ಟೆಪಾಡಿನ ರಾಜಕಾರಣಿ ಅಲ್ಲ
ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಜೈಲಿಗೆ ಹೋಗುತ್ತಾರೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ ನೀಡುತ್ತಾರೆ. ಪಾಪ ಅವರಿಗೆ ಗೊತ್ತಿಲ್ಲ ಇನ್ನು ಕೆಲವೇ ದಿನಗಳಲ್ಲಿ ಅವರೇ ಜೈಲಿಗೆ ಹೋಗಲಿದ್ದಾರೆ. ನಾನು ಹೊಟ್ಟೆಪಾಡಿನ ರಾಜಕಾರಣಿ ಅಲ್ಲ, ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ನಾಲಿಗೆ ಮೇಲೆ ಹಿಡಿತವಿರಲಿ. ಬೆಂಗಾವಲಿಗೆ ಪೊಲೀಸರು ಇದ್ದಾರೆಂದು ಬಾಯಿಗೆ ಬಂದಂತೆ ಮಾತನಾಡಬಹುದು ಎಂದುಕೊಂಡಿದ್ದೀರಿ.
ಅಧಿಕಾರ ಯಾರಿಗೂ ಶಾಶ್ವತವಲ್ಲ. ಕಾಲ ಎಲ್ಲವನ್ನೂ ನಿರ್ಣಯಿಸಲಿದೆ. ನೀನೇನು ಸತ್ಯ ಹರಿಶ್ಚಂದ್ರ ಅಲ್ಲ, ಉತ್ತು, ಬಿತ್ತು, ಬೆಳೆ ಬೆಳೆದು ಸಂಪಾದನೆ ಮಾಡಿಲ್ಲ. ಬಿಬಿಎಂಪಿ ಲೂಟಿ ಮಾಡಿಯೇ ಸಂಪಾದನೆ ಮಾಡಿರುವುದು. ನೀನು ಒಂದು ಬಾರಿ ಸಚಿವ ಆಗಿರುವುದಕ್ಕೆ ಇಷ್ಟೆಲ್ಲಾ ಮಾತನಾಡುತ್ತೀರಿ. ನಮ್ಮ ನಾಯಕರು ಎಷ್ಟು ಬಾರಿ ಮಂತ್ರಿಯಾಗಿದ್ದಾರೆ ಎಂಬುದನ್ನು ಯೋಚಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.