ಅಭ್ಯರ್ಥಿ ಘೋಷಣೆ ಬಗ್ಗೆ ಕಾಂಗ್ರೆಸ್ನಲ್ಲೇ ಗೊಂದಲ, ನಾವು ಸರಿಯಾಗಿದ್ದೇವೆ: ಚನ್ನಪಟ್ಟಣದಲ್ಲಿ ಎಚ್ಡಿಕೆ ಹೇಳಿಕೆ
ರಾಮನಗರ, ನವೆಂಬರ್ 17: ಈಗಾಗಲೇ ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಗೆ ತಯಾರಿಗಳು ನಡೆಯುತ್ತಿವೆ. ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು ಜನರ ಮನಸನ್ನು ತಮ್ಮತ್ತ ಸೆಳೆಯುವಲ್ಲಿ ಮುಂದಾಗಿದ್ದಾರೆ. ಹಾಗೆಯೇ ಕೋಲಾರದಿಂದ ಸಿಎಂ ಇಬ್ರಾಹಿಂ ಸ್ಪರ್ಧೆಗೆ ಒತ್ತಡ ವಿಚಾರವಾಗಿ ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಈಗಾಗಲೇ ಕೋಲಾರದಲ್ಲಿ ನಮ್ಮ ಅಭ್ಯರ್ಥಿಯನ್ನು ಗುರುತಿಸಿದ್ದೇವೆ. ಕಾಂಗ್ರೆಸ್ ರೀತಿ ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದರು.
ಕೋಲಾರದಲ್ಲಿ 6 ತಿಂಗಳ ಹಿಂದೆಯೇ ನಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ. ಶ್ರೀನಾಥ್ ಎಂಬ ಅಭ್ಯರ್ಥಿ ಘೋಷಣೆ ಮಾಡಿದ್ದು, ಅವರೇ ಸ್ಪರ್ಧೆ ಮಾಡುತ್ತಾರೆ. ನಾಳೆ ಮೊದಲನೇ ಹಂತದ ಪಟ್ಟಿ ಬಿಡುಗಡೆ ಮಾಡುತ್ತೇವೆ. ಮುಳಬಾಗಿಲಿನಲ್ಲಿ ಪಂಚರತ್ನ ರಥಯಾತ್ರೆ ಪ್ರಾರಂಭ ಆಗಲಿದೆ.
ಸಿದ್ದರಾಮಯ್ಯ ಕೋಲಾರ ಪ್ರವಾಸ ಠುಸ್ ಪಟಾಕಿ!
ನವೆಂಬರ್ 1ರಿಂದಲೇ ಪಂಚರತ್ನ ರಥಯಾತ್ರೆ ಪ್ರಾರಂಭ ಆಗಬೇಕಿತ್ತು. ಆದರೆ ಮಳೆಯಿಂದಾಗಿ ಪಂಚರತ್ನ ಯಾತ್ರೆ ರದ್ದಾಗಿತ್ತು. ಇದೀಗ ಮತ್ತೆ ನಾಳೆಯಿಂದ ಯಾತ್ರೆಯನ್ನು ಪ್ರಾರಂಭ ಮಾಡುತ್ತೇವೆ. ಆದರೆ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೂ ಅಂತಾ ನಾವು ಕಾರ್ಯಕ್ರಮವನ್ನು ಮಾಡುತ್ತಿಲ್ಲ. ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಕ್ಕಿಂತ ಮುಂಚೆಯೇ ಪಂಚರತ್ನ ಯಾತ್ರೆ ಘೋಷಣೆ ಆಗಿತ್ತು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾಧ್ಯಮದವರ ವಿರುದ್ಧ ಎಚ್ಡಿಕೆ ಸಿಟ್ಟಾಗಿದ್ಯಾಕೆ?
123 ಕ್ಷೇತ್ರಗಳ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ಸರ್ಕಾರ ಯಾರು ರಚನೆ ಮಾಡುತ್ತಾರೆ ಅನ್ನುವುದು ವಿಧಿಲಿಖಿತವಾಗಿದೆ ಎಂದರು. ಮುಂದಿನ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಆಗ ಎಲ್ಲ ಅಕ್ರಮಗಳನ್ನೂ ಬಯಲಿಗೆಳೆದು ಕ್ರಮ ಕೈಗೊಳ್ಳುವೆವು. ಎಂತಹದ್ದೇ ದುಷ್ಟ ಶಕ್ತಿಗಳು ಇದ್ದರೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ರಾಜಿ ಇಲ್ಲದೇ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ ಎಂದು ಗುಡುಗಿದರು. ಸಿದ್ದರಾಮಯ್ಯ ಗೆಲುವಿನ ವಿಚಾರವಾಗಿ ಪ್ರತಿಕ್ರಿಸಿ, ಸಿದ್ದರಾಮಯ್ಯ ನನ್ನಿಂದ ಗೆದ್ದಿದ್ದಾರೆ ಎಂದು ನಾನು ಎಲ್ಲಿ ಹೇಳಿದ್ದೇನೆ? ಎರಡು ಬಾರಿ ನಾನು ರಾಜಕೀಯವಾಗಿ ತೆಗೆದುಕೊಂಡ ನಿರ್ಣಯ ತಪ್ಪಾಗಿದೆ ಎಂದಿದ್ದೇನೆ ಅಷ್ಟೇ. ನಾನು ಅವರನ್ನು ಗೆಲ್ಲಿಸಿದ್ದೇನೆ ಎಂದು ಹೇಳಿಲ್ಲ. ಕೆಲವು ಮಾಧ್ಯಮಗಳು ರಾಜಕೀಯ ಜನ್ಮ ಕೊಟ್ಟೆ ಎಂದಿವೆ. ನಾನು ಕೊಟ್ಟ ಹೇಳಿಕೆ ವಿಡಿಯೋ ನಿಮ್ಮ ಬಳಿಯೇ ಇದ್ದು, ಅದರಲ್ಲಿ ನಾನು ಏನು ಹೇಳಿದ್ದೇನೆ ತೆಗೆಯಿರಿ. ಎರಡು ಬಾರಿ ಚುನಾವಣೆ ಪ್ರಕ್ರಿಯೆಯಲ್ಲಿ ತಪ್ಪು ಮಾಡಿಕೊಂಡೆ. ಇದರಿಂದಾಗಿ ಅವರಿಗೆ ಅನುಕೂಲ ಆಯಿತು ಅಂದಿದ್ದೇನೆ ಅಷ್ಟೇ ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದರು.