ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿ ಮಾಡುವುದು ಅಸಾಧ್ಯ
ರಾಮನಗರ, ಜನವರಿ 11; "ಯಾವುದೇ ಕಾರಣಕ್ಕೂ ಕಾಂಗ್ರೆಸ್ನಿಂದ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಸಾಧ್ಯವೇ ಇಲ್ಲ. ಬಿಜೆಪಿಯವರೇ ಈ ಯೋಜನೆ ಜಾರಿ ಮಾಡುತ್ತೇವೆ" ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಹೇಳಿದರು.
ಮಂಗಳವಾರ ರಾಮನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿದೆ. ತಮಿಳುನಾಡಿನ ನೀರನ್ನು ನಾವು ಬಳಸುತ್ತಿಲ್ಲ. ಪ್ರತಿಯೊಂದಕ್ಕೂ ಸ್ಪಷ್ಟತೆ ಇದೆ" ಎಂದರು.
"ನಮ್ಮ ನಾಡಿನ ನೆಲ, ಜಲದ ವಿಚಾರವಾಗಿ ಬಿಜೆಪಿ ಸ್ಪಷ್ಟವಾಗಿ ನಾಡಿನ ಹಿತಕಾಯಲು ಬದ್ಧವಾಗಿದೆ. ಸಮಾಜ ಮುಖ್ಯ ಎಂಬ ನೆಲಗಟ್ಟಿನಲ್ಲಿ ಕೆಲಸ ಮಾಡುತ್ತಿರುವುವವರು ನಾವುಗಳು. ಅಧಿಕಾರಕ್ಕೋಸ್ಕರ ಏನನ್ನು ಬೇಕಾದರೂ ಮಾಡುವವರು ನಾವಲ್ಲ" ಎಂದು ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಟಾಂಗ್ ನೀಡಿದರು.

"2008ರಿಂದ ಕಾವೇರಿ ಪಾತ್ರದಲ್ಲಿ ಎಲ್ಲ ರೀತಿಯ ನೀರಾವರಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಂದು ಬಸವರಾಜ ಬೊಮ್ಮಾಯಿ ನಮ್ಮ ಪಕ್ಷದಿಂದ ನೀರಾವರಿ ಸಚಿವರಾಗಿದ್ದರು. ಚನ್ನಪಟ್ಟಣದಲ್ಲಿ ಇಗ್ಗಲೂರು ಡ್ಯಾಂನಿಂದ ಲಿಫ್ಟ್ ಇರಿಗೇಷನ್ ಮಾಡಿ ತೋರಿಸಿದ್ದು ಬಿಜೆಪಿ" ಎಂದರು.
"ಮೇಕೆದಾಟು ಸಂಬಂಧ ಹಸಿರು ನ್ಯಾಯಾಪೀಠದಿಂದ ಅನುಮತಿಯನ್ನು ಪಡೆಯಲಾಗಿದೆ. ಮುಳುಗಡೆಯಾಗಲಿರುವ 5 ಸಾವಿರ ಹೆಕ್ಟೇರ್ಗೆ ಪ್ರತಿಯಾಗಿ 7.5 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀಡಲು ಭೂಮಿ ಗುರುತಿಸಲಾಗಿದೆ. ಕಾವೇರಿ ನೀರಾವರಿ ನಿಗಮ, ಪರಿಸರ ಇಲಾಖೆ ಹಾಗೂ ಸುಪ್ರೀಂಕೋರ್ಟ್ನಿಂದ ಅನುಮತಿ ಪಡೆಯುವ ಕೆಲಸ ಮಾತ್ರ ಬಾಕಿ ಇದೆ" ಎಂದು ಹೇಳಿದರು.
6 ವರ್ಷ ತೆಗೆದುಕೊಂಡ ಕಾಂಗ್ರೆಸ್; "ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಡಿಪಿಆರ್ ತಯಾರಾಗಿರಲಿಲ್ಲ. 2013 ರಲ್ಲೇ ಕಾಂಗ್ರೆಸ್ ಡಿಪಿಆರ್ ಸಿದ್ದಪಡಿಸಿದ್ದರೆ ಈ ಸಮಸ್ಯೆಗಳೇ ಬರುತ್ತಿಲ್ಲ. ಗೆಜೆಟ್ ಮಾಡಲು ಆರು ವರ್ಷ ಸಮಯ ಪಡೆದಿದ್ದಾರೆ. ಕಾವೇರಿ ನೀರಾವಾರಿ ನಿಗಮದ ಬಳಿಕ ಈ ಆಟಗಳೆಲ್ಲ ನಡೆಯುತ್ತಿದೆ. ಅವರ ಕ್ಷೇತ್ರದಲ್ಲೇ 2016 ರಿಂದ 7 ಏತ ನೀರಾವರಿ ಯೋಜನೆ ನಡೆಯುತ್ತಿದೆ. ಆದರೆ, ಈ ವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ನಾವು ಕೇವಲ ಎರಡು ವರ್ಷದಲ್ಲಿ ಚನ್ನಪಟ್ಟಣದಲ್ಲಿ ಏತ ನೀರಾವರಿ ಯೋಜನೆ ಮಾಡಿ ನೀರನ್ನು ಹರಿಸಿದ್ದೇವೆ" ಎಂದು ಸಿ. ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
"ಮೇಕೆದಾಟು ವಿಚಾರ ನ್ಯಾಯಾಲಯದಲ್ಲಿದೆ. ಈ ವೇಳೆ ಹೋರಾಟ ಮಾಡುವುದು ತಪ್ಪು. ನಮ್ಮ ಕಾಲದಲ್ಲೇ ಮೇಕೆದಾಟು ಯೋಜನೆ ಜಾರಿಯಾಗಲಿದೆ ಎಂಬ ಭಯಕ್ಕೆ ಈ ಯೋಜನೆ ಮಾಡುವುದೆ ಬೇಡ ಎಂದು ಕಾಂಗ್ರೆಸ್ ಪಾದಯಾತ್ರೆ ಶುರು ಮಾಡಿದೆ. ಇದು ಡಿಕೆಶಿ ಸಹೋದರರ ಶೋ. ಜಿಲ್ಲೆಯನ್ನು ಲೂಟಿ ಮಾಡುವುದು ಇವರ ಕೆಲಸ" ಎಂದು ಟೀಕಿಸಿದರು.
"ಹಾದಿಬೀದಿಯಲ್ಲಿ ಜನರಿಗೆ ರೋಗ ಹರಡಿಸಿಕೊಂಡು ಓಡಾಡುತ್ತಿರುವವರು ಇವರು. ಪಾದರಾಯನಪುರದ ಗಲಾಟೆ ವೇಳೆ ರಾಮನಗರ ಜೈಲಿಗೆ ಆರೋಪಿಗಳನ್ನು ಕರೆತಂದ ವೇಳೆ, ಇಡೀ ಜಿಲ್ಲೆಗೆ ಕೋವಿಡ್ ಹಬ್ಬಿಸಿದ್ದು ಬಿಜೆಪಿ ಎಂದರು. ಈಗ ಕಾಂಗ್ರೆಸ್ ಏನು ಮಾಡುತ್ತಿದೆ?" ಎಂದು ಸಚಿವರು ಪ್ರಶ್ನಿಸಿದರು.
ಪ್ರತಿಷ್ಠೆಗೆ ಕಾರಣವಾದ ಯೋಜನೆ; ಮೇಕೆದಾಟು ಯೋಜನೆ ಕರ್ನಾಟಕದಲ್ಲಿ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ. ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮೇಕೆದಾಟುವಿನಿಂದ ಬೆಂಗಳೂರು ತನಕ ಪಾದಯಾತ್ರೆ ಆರಂಭಿಸಿದೆ. ಮಂಗಳವಾರ ಪಾದಯಾತ್ರೆಗೆ 3ನೇ ದಿನಕ್ಕೆ ಕಾಲಿಟ್ಟಿದೆ.
ಮಂಗಳವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಪಾದಯಾತ್ರೆ ಹತ್ತಿಕ್ಕಲು ಕೊರೊನಾ ಇದೆ, ನಿಯಮ ಪಾಲನೆ ಮಾಡಿಲ್ಲ ಎಂದು ನಾನು ಸೇರಿದಂತೆ ಪಕ್ಷದ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆಲ್ಲ ನಾವು ಹೆದರಲ್ಲ, ಹೀಗೆ ಕೇಸ್ ಹಾಕಿ ನಮ್ಮನ್ನು ಹೆದರಿಸಬಹುದು ಎಂದಕೊಂಡರೆ ಬಿಜೆಪಿಯವರಂತ ಮೂರ್ಖರು ಯಾರೂ ಇಲ್ಲ" ಎಂದು ಸರ್ಕಾರಕ್ಕೆ ಟಾಂಗ್ ನೀಡಿದರು.












Click it and Unblock the Notifications