ರಾಮನಗರ ಪ್ರವಾಸ ಮಾಡಿದ ಸಿಎಂ, ಖುದ್ದು ಅಹವಾಲು ಸ್ವೀಕಾರ
ರಾಮನಗರ, ಆಗಸ್ಟ್.30: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬುಧವಾರ ತವರು ಜಿಲ್ಲೆ ರಾಮನಗರದಲ್ಲಿ ದಿನವಿಡೀ ಪ್ರವಾಸ ನಡೆಸಿದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಅಧಿಕಾರಿಗಳ ಮೂಲಕ ಪರಿಹಾರ ಕೊಡಿಸುವ ಕೆಲಸವನ್ನೂ ಸಹ ಮಾಡಿದರು.
ಎಚ್ ಡಿಕೆ ಸಾಗುವ ಮಾರ್ಗದ ಗ್ರಾಮಗಳ ಮಧ್ಯೆ ಕೂಡ ಎಚ್.ಡಿ.ಕೆ. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದು ವಿಶೇಷವಾಗಿತ್ತು . ಬೆಳಗ್ಗೆಯಿಂದ ಸಂಜೆಯವರೆಗೆ ಕುಮಾರಸ್ವಾಮಿ ಅವರು ನಾಲ್ಕು ಹೋಬಳಿಗಳಲ್ಲಿ ಪ್ರವಾಸ ನಡೆಸಿದರು.
ಮೈತ್ರಿ ಸರ್ಕಾರಕ್ಕೆ ಶತದಿನ:ಬೆಳಗ್ಗೆದ್ದು ಯಾರ್ಯಾರ ನೆನೆದರು ಎಚ್ಡಿಕೆ?
ಬೆಳಗ್ಗೆ 11 ಗಂಟೆಗೆ ಮೈಸೂರಿನಿಂದ ರಾಮನಗರಕ್ಕೆ ಆಗಮಿಸಿದ ಎಚ್ ಡಿಕೆ ರಾಮನಗರ ತಾಲೂಕಿನ ಕೈಲಾಂಚ ಗ್ರಾಮದಲ್ಲಿ ಪೊಲೀಸರಿಂದ ಗೌರವ ರಕ್ಷೆ ಪಡೆದರು. ಸಿ.ಎಂ ವೇದಿಕೆ ಬಳಿ ಬರುತ್ತಿದಂತೆ ಜನರ ಬಳಿ ತೆರಳಿ ಅಹವಾಲು ಸ್ವೀಕರಿಸಿದರು.
ನೇರವಾಗಿ ಸಾರ್ವಜನಿಕರ ಬಳಿಯೇ ತೆರಳಿದ ಸಿಎಂ ಜನರ ಕುಂದು ಕೊರತೆ ಪರಿಶೀಲನೆ ಹಾಗೂ ಅಹವಾಲು ಸ್ವೀಕರಿಸಿದರು. ಜನರಿಂದ ಅಹವಾಲು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸ್ಥಳದಲ್ಲೆ ಸಮಸ್ಯೆಗೆ ಪರಿಹಾರ ಕೊಡಿಸಿದರು.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತ ತಮ್ಮ ಮೇಲೆ ಫೋನ್ ಕದ್ದಾಲಿಕೆ ಆರೋಪ ಮಾಡಿದ ಬಿ.ಎಸ್.ಯಡಿಯೂರಪ್ಪಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದರು.
ಲೇವಾದೇವಿದಾರರ ವಿರುದ್ಧ ಸರ್ಕಾರದ ಕೆಂಗಣ್ಣು: ಸಿಎಂ ಖಡಕ್ ಆದೇಶ
ಗುರುವಾರ ಸಮ್ಮಿಶ್ರ ಸರ್ಕಾರ ನೂರು ದಿನ ಪೂರೈಸಲಿದೆ. ನೂತನವಾಗಿ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಸೆಪ್ಟೆಂಬರ್ ತಿಂಗಳಿಂದ ಅವುಗಳನ್ನು ಜಾರಿಗೆ ತರಲು ಕ್ರಮ ತೆಗೆದುಕೊಳ್ಳಲಾಗುವುದು. ಸಮಯ ವ್ಯರ್ಥ ಮಾಡದೇ ರಾಜ್ಯದ ಅಭಿವೃದ್ಧಿಗೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.
ಸಮ್ಮಿಶ್ರ ಸರ್ಕಾರಕ್ಕೆ ಆಯಸ್ಸು ಕಮ್ಮಿ ಎಂದು ಬಿಜೆಪಿ ಮಾಡಿದ ಆರೋಪಕ್ಕೆ ಪ್ರತಿಕ್ರಯಿಸಿದ ಅವರು ಬಿಜೆಪಿಯವರು ಅದೇ ಗುಂಗಿನಲ್ಲಿಯೇ ಇರಲಿ. ದಿನನಿತ್ಯ ಚಟುವಟಿಕೆ ಇದ್ದ ಹಾಗೆ ಇದೆ. ವಿಶೇಷತೆ ಏನು ಇಲ್ಲ. ಸರ್ಕಾರ ಸುಭದ್ರವಾಗಿದೆ ಐದು ವರ್ಷಗಳ ಕಾಲ ಪೂರೈಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಾರೆ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬರುವ ಹಿನ್ನಲೆಯಲ್ಲಿ ಕ್ಷೇತ್ರದಾದ್ಯಂತ ಸಿಎಂ ಪ್ರವಾಸ ನಡೆಸಿದರು. ಕೈಲಾಂಚ ಸುಗ್ಗನಹಳ್ಳಿ, ಹಾರೋಹಳ್ಳಿ ಹಾಗೂ ಮರಳವಾಡಿ ವ್ಯಾಪ್ತಿಗಳಲ್ಲಿ ಬೆಳಗ್ಗೆಯಿಂದ ದಿನವಿಡೀ ಪ್ರವಾಸ ನಡೆಸಿ ಜನರ ಅಹವಾಲು ಸ್ವೀಕರಿಸಿದರು. ಸಿ.ಎಂ ಆಗಮನದ ಹಿನ್ನಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.