ಮಾಂಸದೂಟ ಸವಿದು ಶಿವರಾತ್ರಿ ಆಚರಿಸುವ ಗ್ರಾಮಸ್ಥರು!
ರಾಮನಗರ, ಮಾರ್ಚ್ 12; ಮಹಾ ಶಿವರಾತ್ರಿ ಹಬ್ಬವನ್ನು ಉಪವಾಸ, ಜಾಗರಣೆ ಮಾಡಿ ಸಂಭ್ರಮ, ಸಡಗರ, ಭಕ್ತಿಯಿಂದ ಆಚರಿಸಲಾಗುತ್ತದೆ. ಅನೇಕ ಬೆಳಗ್ಗೆ, ಸಂಜೆ ದೇವಾಲಯಗಳಿಗೆ ಭೇಟಿ ಕೊಟ್ಟು ಉಪವಾಸವಿದ್ದು, ಜಾಗರಣೆ ಮಾಡಿ ಹಬ್ಬವನ್ನು ಮಾಡುತ್ತಾರೆ.
ಇಲ್ಲೊಂದು ಗ್ರಾಮದಲ್ಲಿ ಶಿವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಗ್ರಾಮದಲ್ಲಿರುವ ದೇವಾಲಯದ ಆವಣರದಲ್ಲಿ ಮಾಂಸದೂಟ ಮಾಡಿ, ಎಲ್ಲರೂ ಒಟ್ಟಿಗೆ ಕುಳಿತು ಮಾಂಸಾಹಾರ ಸವಿದ ನಂತರ, ಇಡೀ ರಾತ್ರಿ ಶಿವನ್ನು ಆರಾಧಿಸುತ್ತಾ ಹಬ್ಬವನ್ನು ಆಚರಿಸುತ್ತಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇವಾಲಯದಲ್ಲಿ ಹಬ್ಬದ ದಿನದಂದು ಭಕ್ತರೆಲ್ಲಾ ಸೇರಿ ಮಾಂಸದೂಟ ತಯಾರು ಮಾಡಿ, ದೇವಾಲಯದ ಬಳಿಯೇ ಪ್ರಸಾದವನ್ನು ಸವಿಯುತ್ತಾರೆ.
ಸುಮಾರು 70 ಗ್ರಾಮಗಳಲ್ಲಿನ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ, ತಂದು ಬಲಿಕೊಟ್ಟು ಅಲ್ಲಿಯೇ ಪ್ರಸಾದ ತಯಾರು ಮಾಡುತ್ತಾರೆ. ಆನಂತರ ದೇವರಿಗೆ ಪ್ರಸಾದ ಸಮರ್ಪಣೆ ಮಾಡಿ, ಬಳಿಕ ತಾವು ಸವಿದು ಇಡೀ ರಾತ್ರಿ ಎಚ್ಚರಾವಾಗಿದ್ದು ಶಿವರಾತ್ರಿ ಆಚರಣೆ ಮಾಡುತ್ತಾರೆ.

300 ಕೋಳಿಗಳ ಸಮರ್ಪಣೆ
ಈ ಬಾರಿಯ ಶಿವರಾತ್ರಿಯಂದು ಸುಮಾರು 300 ಕೋಳಿಗಳನ್ನು ಹಬ್ಬಕ್ಕೆಂದು ಸಮರ್ಪಣೆ ಮಾಡಿದ್ದಾರೆ. ಸುಮಾರು ಮೂರು ಸಾವಿರ ಭಕ್ತರು ಒಟ್ಟಿಗೆ ಕುಳಿತು ಮಾಂಸ ಪ್ರಸಾದವನ್ನು ಸೇವಿಸಿದರು. ಬಳಿಕ ಎಲ್ಲಾ ಒಟ್ಟಾಗಿ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಿದರು.

ಹರಕೆ ಕಟ್ಟಿಕೊಳ್ಳುವ ಭಕ್ತರು
ಶಿವರಾತ್ರಿಯಂದು ಮಾಂಸದೂಟ ಮಾಡುವ ಪದ್ಧತಿ ಕಳೆದ 8 ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ದೇವಾಲಯಕ್ಕೆ ಬರುವ ಭಕ್ತರು ತಮ್ಮ ಕಷ್ಟ ಕಾರ್ಪಣ್ಯ ದೂರವಾಗಲಿ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಇಷ್ಠಾರ್ಥಗಳು ನೆರೆವೇರಿದ ಬಳಿಕ ಶಿವರಾತ್ರಿ ದಿನದಂದು ಕೋಳಿ, ಕುರಿ ನೀಡುವ ಮೂಲಕ ಹರಕೆಯನ್ನು ತೀರಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು.

ಗೌರಿ ಹಬ್ಬದಂದೂ ಮಾಂಸದೂಟ
ಮಂಗಾಡಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇವಾಲಯದಲ್ಲಿ ಕೇವಲ ಶಿವರಾತ್ರಿ ದಿನದಂದು ಮಾತ್ರವಲ್ಲ. ಗೌರಿ ಹಬ್ಬ ಸೋಮವಾರದಂದು ಬಂದರೆ ಅಂದು ಸಹ ಮಾಂಸದೂಟವನ್ನು ಮಾಡಲಾಗುತ್ತದೆ. ಈ ರೀತಿಯ ವಿಭಿನ್ನ ಆಚರಣೆಗೆ ಕೇವಲ ಮಂಗಾಡಹಳ್ಳಿ ಗ್ರಾಮದ ಭಕ್ತರು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮದ ಭಕ್ತರು ಆಗಮಿಸುತ್ತಾರೆ.

ದೇವಾಲಯದ ಅರ್ಚಕರು ಹೇಳುವುದೇನು?
"15 ವರ್ಷಗಳ ಹಿಂದೆ ಮಾಂಸದೂಟದ ಪದ್ಧತಿಯನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಚಿಂತನೆ ಮಾಡಿದರು. ಶಿವರಾತ್ರಿ ದಿನ ಸಿಹಿಯೂಟ ಮಾಡಿ ಶಿವರಾತ್ರಿಯ ಜಾಗರಣೆ ಪ್ರಾರಂಭಿಸಿದರು. ಆದರೆ, ಮಧ್ಯರಾತ್ರಿ ಸುಮಾರಿಗೆ ಭಕ್ತರು ನೀಡಿದ್ದ ಹರಕೆಯ ಕೋಳಿಗಳು ದೇವಸ್ಥಾನದ ಗರ್ಭಗುಡಿ ಒಳಗೆ ನುಗ್ಗಿದ್ದವು. ಹೀಗಾಗಿ ಮತ್ತೆ ಆಚರಣೆ ಮುಂದುವರೆಸಿಕೊಂಡು ಬಂದಿದ್ದೇವೆ" ಎನ್ನುತ್ತಾರೆ ದೇವಾಲಯದ ಅರ್ಚಕ ಬೆಟ್ಟದ್ದಪ್ಪಸ್ವಾಮಿ.












Click it and Unblock the Notifications