ರಾಮನಗರ; ಗ್ರಾ. ಪಂಚಾಯಿತಿಯಲ್ಲಿ ಭ್ರಷ್ಟಾಚಾರ, ಪ್ರತಿಭಟನೆ
ರಾಮನಗರ, ಅಕ್ಟೋಬರ್ 30; ಪಿಡಿಓ ಹಾಗೂ ದ್ವಿತೀಯ ದರ್ಜೆ ಗುಮಾಸ್ತ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕರ್ತವ್ಯಲೋಪ, ಅವ್ಯವಹಾರವನ್ನು ಖಂಡಿಸಿ ಗ್ರಾಮ ಪಂಚಾಯಿತಿ ಕೆಲವು ಸದಸ್ಯರು ಸಾಮಾನ್ಯ ಸಭೆಯಲ್ಲಿ ಗದ್ದಲ ನಡೆಸಿ, ಪ್ರತಿಭಟನೆ ನಡೆಸಿದ ಘಟನೆ ಚನ್ನಪಟ್ಟಣದ ಮಳೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ತಾಲ್ಲೂಕಿ ಮಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು 15ನೇ ಹಣಕಾಸು ಅನುದಾನ, ನರೇಗಾ ಅನುದಾನ ಸೇರಿದಂತೆ ಪಂಚಾಯಿತಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಪಂಚಾಯಿತಿ ಸದಸ್ಯ ಎಂ. ವಿ. ಮುರಳೀಧರ ಆರೋಪಿಸಿದ್ದಾರೆ.
ಗ್ರಾಮ ಲೆಕ್ಕಿಗರ ನೇಮಕಾತಿಗೆ ಒಪ್ಪಿಗೆ; ಯಾವ ಜಿಲ್ಲೆಗೆ ಎಷ್ಟು ಹುದ್ದೆ?
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮುರಳೀಧರ್ ನೇತೃತ್ವದಲ್ಲಿ ಸದಸ್ಯರಾದ ಪ್ರಕಾಶ್, ಸುಶೀಲಮ್ಮ, ವೆಂಕಟೇಶ್ ಹಾಗೂ ದೊಡ್ಡಮಳೂರು ಗ್ರಾಮಸ್ಥರು ಸಭೆಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದಂತೆ ಆಡಳಿತ ವೈಫಲ್ಯ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಕರ್ತವ್ಯಲೋಪ, ಅಧ್ಯಕ್ಷರು ಮತ್ತು ಕೆಲವು ಸದಸ್ಯರ ಅಧಿಕಾರ ದುರುಪಯೋಗ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ರಾಮನಗರ: ನಾಲ್ಕು ವರ್ಷಗಳ ಬಳಿಕ ನಲ್ಲಿಗುಡ್ಡೆ ಕೆರೆಯಲ್ಲಿ ಜಲಸಂಚಲನ
ಅಕ್ರಮ ಅವ್ಯವಹಾರ, ಭ್ರಷ್ಟಾಚಾರ ಹೆಚ್ಚಾಗಿದೆ. ಸದಸ್ಯರ ಮಾತಿಗೆ ಮನ್ನಣೆ ಇಲ್ಲದಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಮೊದಲು ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆದು ಗ್ರಾಮ ಸಭೆ ಮಾಡಿ, ತದ ನಂತರ ಸಾಮಾನ್ಯ ಸಭೆ ನಡೆಸಿ. ಅಲ್ಲಿಯವರೆಗೆ ಸಭೆ ನಡೆಸುವುದು ಬೇಡ ಎಂದು ಪಟ್ಟು ಹಿಡಿದರು. ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅಧ್ಯಕ್ಷರು ಮತ್ತು ಅಧಿಕಾರಿಗಳು ಗ್ರಾಮ ಸಭೆ ನಡೆಸಿ ಆ ನಂತರ ಸಾಮಾನ್ಯ ನಡೆಸುವುದಾಗಿ ಹೇಳಿ ಸಭೆಯನ್ನು ಮೊಟಕುಗೊಳಿಸಿದರು.
ರಾಮನಗರ; ಮಳೆಯಿಂದ ಜೀವಕಳೆ ಪಡೆದ ಜಲಾಶಯ, ಕೆರೆ-ಕಟ್ಟೆ
ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ; ಸಭೆ ಮೊಟಕುಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸದಸ್ಯ ಮುರುಳೀಧರ್, "ಪಿಡಿಒ ಸ್ವಾಮಿ ಮತ್ತು ಕಾರ್ಯದರ್ಶಿ ರಮೇಶ್, ದ್ವಿತೀಯ ದರ್ಜೆ ಸಹಾಯಕ ನಾಗರಾಜು ಮತ್ತು ಸಿಬ್ಬಂದಿ ವರ್ಗ ಮತ್ತು ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ" ಎಂದು ಆರೋಪಿಸಿದರು.
"ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆ ಅನುದಾನ ಮತ್ತು ನರೇಗಾ ಯೋಜನೆಯಡಿ ಹಣವನ್ನು ಉದ್ದೇಶಿತ ಕಾರ್ಯಗಳಿಗೆ ವಿನಿಯೋಗಿಸದೇ ಸರ್ಕಾರದ ಲಕ್ಷಾಂತರ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ" ಎಂದು ದೂರಿದರು.
"ಒಂದೇ ಕಾಮಗಾರಿಗೆ 2 ರಿಂದ 3 ಬಿಲ್ ಪಾವತಿಸಿರುವುದು, ಮಾಡದೇ ಇರುವ ಕೆಲವು ಕಾಮಗಾರಿಗಳಿಗೆ ಹಣ ಪಾವತಿಸಿ ಅವ್ಯವಹಾರ ನಡೆಸಿದ್ದಾರೆ. ತಮಗೆ ಬೇಕಾದವರಿಂದ ಜಾಬ್ ಕಾರ್ಡ್ ಹಾಕಿಸಿಕೊಂಡು ಲಕ್ಷಾಂತರ ರೂ.ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ನಿವೇಶದ 'ಇ ಖಾತೆಗೆ ಸಾರ್ವಜನಿಕರಿಂದ ಸಾವಿರಾರು ಹಣದ ಬೇಡಿಕೆ ಇಟ್ಟು ವಸೂಲಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಇಲ್ಲಿನ ಜಮೀನುಗಳಿಗೆ ಚಿನ್ನದ ಬೆಲೆಯಿದ್ದು, ಖಾತೆ ಮಾಡಿಕೊಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಳಂಕಿತ ಅಧಿಕಾರಿ ಬೇಕಿಲ್ಲ; ಈ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಾ, ಅಕ್ರಮ ಅವ್ಯವಹಾರದಲ್ಲಿ ತೊಡಗಿದ್ದ ನಾಗರಾಜು, ಸಾರ್ವಜನಿಕರ ತೆರಿಗೆ ಹಣ 5.16 ಲಕ್ಷ ರೂ. ಹಣವನ್ನು ಪಂಚಾಯಿತಿಗೆ ಕಟ್ಟದೇ, ದುರ್ಬಳಕೆ ಮಾಡಿಕೊಂಡಿದ್ದರು. ಖಾಲಿ ನಿವೇಶನ ಸ್ವತ್ತುಗಳನ್ನು ನಿಯಮಬಾಹಿರವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಸಂಬಂಧಿಕರಿಗೆ ಇತರರಿಗೆ ಖಾತೆ ಮಾಡಿಕೊಟ್ಟಿದ್ದರು. ಈತನ ಅವ್ಯವಹಾರ, ಅಕ್ರಮ, ಭ್ರಷ್ಟಾಚಾರದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.
ದೂರು ನೀಡಿದ ಮೇಲೆ ಒಂದೂವರೆ ವರ್ಷದ ನಂತರ ಹಣ ಪಾವತಿಸಿ ಇಲಾಖೆ ಶಿಸ್ತು ಕ್ರಮಕ್ಕೆ ಒಳಗಾಗಿದ್ದ ನಾಗರಾಜು ಎಂಬುವರನ್ನು ಇಲ್ಲಿಂದ ಬೇರೆಡೆಗೆ ವರ್ಗ ಮಾಡಲಾಗಿತ್ತು. ಆದರೂ, ಈತನನ್ನು ಮತ್ತೆ ಎರವಲು ಸೇವೆಯ ಮೇಲೆ ನಮ್ಮ ಪಂಚಾಯಿತಿಗೆ ನಿಯೋಜಿಸಲಾಗಿದೆ. ಈತನ ಮರು ನೇಮಕಕ್ಕೆ ತಾಲೂಕು ಪಂಚಾಯಿತಿ ಇಒ ಸಹ ಸಹಕರಿಸಿದ್ದಾರೆ. ಕಳಂಕಿತ ನಾಗರಾಜುರನ್ನು ಕೂಡಲೇ ಇಲ್ಲಿಂದ ಎತ್ತಂಗಡಿ ಮಾಡಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.