ಸರಕಾರದ ಅಭಿವೃದ್ಧಿಪರ ಬದ್ಧತೆಗೆ ಬಜೆಟ್ ಸಾಕ್ಷಿ: ಸಚಿವ ಡಾ.ಸಿಎನ್.ಅಶ್ವಥ್ ನಾರಾಯಣ್
ರಾಮನಗರ, ಮಾ.4: ಮೇಕೆದಾಟು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಜಾರಿಗೆ ಬರಲಿರುವ ನಾನಾ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನ ಹರಿಸಿ, ಹಣ ನಿಗದಿ ಮಾಡಿರುವುದರಿಂದ ಜಿಲ್ಲೆಯ ಜನತೆಗೆ ಪ್ರಯೋಜನವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಶುಕ್ರವಾರ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ಮೀಸಲು ಇಟ್ಟಿರುವುದು ಮತ್ತು ಅರ್ಚಕರಹಳ್ಳಿ ಬಳಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ 600 ಕೋಟಿ ರೂ. ನೀಡಿರುವುದು ನಮ್ಮ ಸರಕಾರದ ಅಭಿವೃದ್ಧಿಪರ ಬದ್ಧತೆಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ದೃಡ ನಿರ್ಧಾರದಿಂದ ರಾಮನಗರವನ್ನು ಹೆಲ್ತ್ ಸಿಟಿಯಾಗಿ ಬೆಳೆಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಂತಾಗಿದೆ. ಕಳೆದ 14 ವರ್ಷಗಳಿಂದ ನನೆಗುದಿಗೆ ಬಿದ್ದಿದ ಯೋಜನೆಯ ಅನುಷ್ಠಾನದಿಂದ ಜಿಲ್ಲೆಯ ಜನರಿಗೆ ಉತ್ತಮ ದರ್ಜೆಯ ಚಿಕಿತ್ಸೆ ದೊರೆಯಲಿದೆ. ಹಾಗಾಗಿ ಮುಖ್ಯಮಂತ್ರಿಗಳ ದೂರದೃಷ್ಟಿ ಅಭಿನಂದನೆಗೆ ಅರ್ಹವಾದದ್ದು ಎಂದರು.
ಇನ್ನೂ ಬೊಂಬೆ ನಗರಿ ಚನ್ನಪಟ್ಟಣವನ್ನು ಆಟಿಕೆಗಳ ತಯಾರಿಕೆಯ ಮೈಕ್ರೋ ಕ್ಲಸ್ಟರ್ ಎಂದು ಘೋಷಿಸಿರುವುದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದ್ದು, ಸಂಕಷ್ಟದಲ್ಲಿರುವ ಕುಶಲಕರ್ಮಿಗಳ ಬದುಕು ಅಸನಾಗುವುದಲ್ಲದೇ , ಚನ್ನಪಟ್ಟಣದ ಬೊಂಬೆಗಳಿಗೆ ಉತ್ತಮ ಮಾರುಕಟ್ಟೆ ಸಿಗಲಿದೆ. ಇದೊಂದು ರಚನಾತ್ಮಕ ಉಪಕ್ರಮವಾಗಿದೆ ಎಂದು ಸಚಿವರು ಬಣ್ಣಿಸಿದರು.

ಮಾಗಡಿ ಜಿಟಿಟಿಸಿಯಲ್ಲಿ ತರಬೇತಿದಾರರನ್ನು ಸಜ್ಜುಗೊಳಿಸುವ ತರಬೇತಿ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರ ಕೂಡ ಸಕಾರಾತ್ಮಕ ಹೆಜ್ಜೆಯಾಗಿದೆ. ಮಿಕ್ಕಂತೆ, ರಸ್ತೆ ಯೋಜನೆಗಳು, ಸ್ವಸಹಾಯ ಸಂಘಗಳಿಗೆ ಘೋಷಿಸಿರುವ ಏಕಗವಾಕ್ಷಿ ಸಾಲದ ವ್ಯವಸ್ಥೆಗಳಿಂದಲೂ ಜಿಲ್ಲೆಯ ಜನತೆಗೆ ಪ್ರಯೋಜನವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.
ಸರ್ಕಾರ ಬಂಡಲ್, ಬೋಗಸ್ ಬಜೆಟ್ ಮಂಡಿಸಿದೆ ಎಂದ ಸಂಸದ ಡಿ.ಕೆ.ಸುರೇಶ್ :
'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಬಂಡಲ್, ಬೋಗಸ್ ಬಜೆಟ್ ಮಂಡಿಸಿದ್ದಾರೆ. ರಾಜ್ಯ ಬಜೆಟ್ ಮಂಡಿಸಬೇಕಾದ ಮುಖ್ಯಮಂತ್ರಿಗಳು ಕೇಂದ್ರದ ಬಜೆಟ್ ಮಂಡಿಸಿದ್ದಾರೆ' ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಟೀಕಿಸಿದರು.
ಬಜೆಟ್ ನಲ್ಲಿ ಹಣದ ಕೊರತೆ ನೀಗಿಸಲು ಇವರ ಬಳಿ ಹಣ ಇಲ್ಲ, ಕಳೆದ ಬಾರಿಯ ಬಜೆಟ್ ಸಮಯದಲ್ಲೂ ಸಾಲ ಮಾಡಿದ್ದರು, ಈ ಬಾರಿಯೂ ಸಾಲ ಮಾಡುತ್ತಾರೆ. ಕೇಂದ್ರದಿಂದ ಬರಬೇಕಾದ 18 ಸಾವಿರ ಕೋಟಿ ಮೇಲೆ ಸಾಲ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇರುವ ಹಣಕ್ಕಿಂತ ಹೆಚ್ಚು ಬಜೆಟ್ ತೋರಿಸಿ ಸಾಲ ಮಾಡಲು ಮುಂದಾಗಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.
ಬಜೆಟ್ ನಲ್ಲಿ ರೈತರಿಗೆ ಅನುಕೂಲ ಆಗುವ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಮೇಕೆದಾಟು, ಎತ್ತಿನ ಹೊಳೆ ಹಾಗೂ ಕಳಸ ಬಂಡೂರಿಗೆ ಹಣ ಇಟ್ಟಿದ್ದಾರೆ. ಆದರೆ ಕಳೆದ ಬಾರಿ ಮೇಕೆದಾಟು ಹೊರತುಪಡಿಸಿ ಬಜೆಟ್ನಲ್ಲಿ ಇಟ್ಟ ಹಣ ಬಿಡುಗಡೆ ಮಾಡಿಲ್ಲ ಇದೊಂದು ದಾರಿ ತಪ್ಪಿಸುವಂತ ಬಜೆಟ್
ನಮ್ಮ ಪಕ್ಷದ ನೇತೃತ್ವದಲ್ಲಿ ಪಾದಯಾತ್ರೆ ಮಾಡಿದ್ದಕ್ಕೆ ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ಇಟ್ಟಿದ್ದಾರೆ. ನಾವು ಪಾದಯಾತ್ರೆ ಮಾಡಿದ್ದು ಕೇಂದ್ರಕ್ಕೆ ಹೋಗಿ ಪರಿಸರ ಇಲಾಖೆ ಅನುಮತಿಯನ್ನು ತನ್ನಿ ಎಂದು ಆದರೆ ಇವರು ಇಟ್ಟ ಹಣ ಒಂದು ನಯಾ ಪೈಸೆ ಖರ್ಚು ಆಗೋದಿಲ್ಲ, ಇದು ಬೋಗಸ್ ಹಾಗೂ ಸುಳ್ಳು ಹೇಳುವ ಬಜೆಟ್ ಎಂದು ಸಂಸದ ಡಿ.ಕೆ.ಸುರೇಶ್ ಸರ್ಕಾರದ ವಿರುದ್ಧ ಗುಡುಗಿದರು.
ಸಮಗ್ರ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ -ಸಿ.ಪಿ.ಯೋಗೇಶ್ವರ್ :
ಜಿಲ್ಲೆಯ ಸಮಗ್ರ ಅಭಿವೃದ್ಧಿಯು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂಬ ಅಂಶ ಈ ಬಜೆಟ್ನಿಂದ ಮತ್ತೊಮ್ಮೆ ಸಾಭೀತಾಗಿದೆ. ಜಿಲ್ಲೆಗೆ ಹಲವು ಯೋಜನೆಗಳನ್ನು ಕೊಡುಗೆಯಾಗಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜಿಲ್ಲೆಯ ಜನತೆಯ ಪರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅಭಿನಂದಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ " ನವರಾಮನಗರ" ಎಂಬ ಪರಿಕಲ್ಪನೆಯಡಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳ ಬಗ್ಗೆ ಪ್ರಣಾಳಿಕೆ ಹೊರಡಿಸಿದ್ದೆವು. ಅದರಂತೆ ನಾವು ಬಜೆಟ್ನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಬಿಜೆಪಿ ಕೊಟ್ಟ ಮಾತು ತಪ್ಪುವುದಿಲ್ಲ ಎಂಬುದನ್ನು ಈ ಬಜೆಟ್ ಮೂಲಕ ಮತ್ತೊಮ್ಮೆ ನಿರೂಪಿಸಿದ್ದೇವೆ ಎಂದು ಸಿಪಿವೈ ಹೆಮ್ಮೆ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆಯ ವಿಚಾರದಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಯೋಜನೆಗೆ ಸಂಬಂಧಿಸಿದಂತೆ ಪ್ರಾಮಾಣಿಕ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂಬುದು ಈ ಬಜೆಟ್ನಲ್ಲಿ ಸಾಭೀತಾಗಿದೆ. ಯೋಜನೆಯ ಅನುಷ್ಟಾನಕ್ಕೆ ಒಂದುಸಾವಿರ ಕೋಟಿ ರೂ. ಮೀಸಲಿರಿಸುವ ಮೂಲಕ ಮಹಾತ್ವಾಕಾಂಕ್ಷಿ ಯೋಜನೆಯ ಅನುಷ್ಟಾನದಲ್ಲಿ ರಾಜ್ಯ ಸರ್ಕಾರ ದೃಢ ಹೆಜ್ಜೆ ಇರಿಸಿದೆ.
ಎತ್ತಿನಹೊಳೆ ಯೋಜನೆಯಡಿಯಲ್ಲಿ ರಾಮನಗರ-ಟಿ.ಜಿ.ಹಳ್ಳಿ ಫೀಡರ್ ಪೂರ್ಣಗೊಳಿಸುವುದು ಸೇರಿದಂತೆ ಜಿಲ್ಲೆಗೆ ನೀರಾವರಿ ಯೋಜನೆಗಳಿಗೆ ಬಜೆಟ್ನಲ್ಲಿ ಹಣ ನೀಡಲಾಗಿದೆ. ಜಿಲ್ಲೆಯ ನೀರಾವರಿ ಯೋಜನೆಯ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೊಂದಿರುವ ಬದ್ದತೆ ಮತ್ತು ಕಾಳಜಿಗೆ ಈ ಎಲ್ಲಾ ಯೋಜನೆಗಳು ಸಾಕ್ಷಿಯಾಗಿವೆ.
ರಾಮನಗರದ ರಾಜೀವ್ಗಾಂಧಿ ಆರೋಗ್ಯ ವಿವಿ, ಚನ್ನಪಟ್ಟಣದಲ್ಲಿ ಆಟಿಕೆಗಳ ಮೈಕ್ರೋ ಕ್ಲಸ್ಟರ್ ನಿರ್ಮಾಣ, ಹೈಸ್ಪೀಡ್ ರೈಲು ಯೋಜನೆಗೆ ಸಹಕಾರ, ಜಲಸಾಹಸ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆ ಮೊದಲಾದ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿವೆ.
ಜಿಲ್ಲೆಯ ರೈತರ ಪ್ರಮುಖ ಕಸುಬಾದ ರೇಷ್ಮೆ ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡಲು ಸಾಕಷ್ಟು ಕಾರ್ಯಕ್ರಮ ಆಯೋಜಿಸಿರುವುದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಮಗ್ರ ಹಾಗೂ ಪ್ರಗತಿಪರ ಬಜೆಟ್ಅನ್ನು ಮಂಡಿಸಿದ್ದಾರೆ. ಎಲ್ಲಾಕ್ಷೇತ್ರ ಹಾಗೂ ರಾಜ್ಯದ ಎಲ್ಲಾ ಪ್ರದೇಶಗಳಿಗೆ ನ್ಯಾಯಹೊದಗಿಸಿರುವ ಈ ಬಜೆಟ್ ಪ್ರಗತಿಯ ಮುನ್ನುಡಿಯಾಗಿದೆ.












Click it and Unblock the Notifications