ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ: ಕುಮಾರಸ್ವಾಮಿ ಪರ ನಿಂತ ಅಲ್ಪಸಂಖ್ಯಾತ ಮುಖಂಡರು
ರಾಮನಗರ, ಅಕ್ಟೋಬರ್ 03: ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನಲೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸ್ವಕೇತ್ರ ಬೊಂಬೆನಾಡು ಚನ್ನಪಟ್ಟಣ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ವರಿಷ್ಠರ ತಿರ್ಮಾನಕ್ಕೆ ನಾವು ಬದ್ಧ ಎನ್ನುವ ಮೂಲಕ ಕುಮಾರಸ್ವಾಮಿಗೆ ಬೆಂಬಲಕ್ಕೆ ನಿಂತಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮುಸ್ಲಿಂ ಮುಖಂಡರು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಫಾಜಿಲ್ ಮಾತನಾಡಿ, ಕುಮಾರಸ್ವಾಮಿ ಹಲಾಲ್ ಕಟ್, ಹಿಜಾಬ್ ವಿಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪರ ನಿಂತು ಹೊರಾಟ ಮಾಡಿದ್ದಾರೆ. ಅವರು ಮುಸ್ಲಿಂ ಸಮುದಾಯಕ್ಕೆ ಯಾವುದೇ ದ್ರೋಹ ಮಾಡಿಲ್ಲ ಎಂದರು.

ಜೆಡಿಎಸ್ ಪಕ್ಷ ಬಿಜೆಪಿ ಒಕ್ಕೂಟಕ್ಕೆ ಬೆಂಬಲ ನೀಡಿದೆ. ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ವಿಲೀನ ಮಾಡುತ್ತಿಲ್ಲ. ಈಗಲೂ ಜೆಡಿಎಸ್ ಪಕ್ಷದ ಅಡಿಯಲ್ಲೇ ಎಲ್ಲಾ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಎಲ್ಲಾ ಅಲ್ಪಸಂಖ್ಯಾತರು ಕಾಂಗ್ರೆಸ್ಗೆ ಹೋಗಿಲ್ಲ. ಕೆಲ ಮುಸ್ಲಿಂರು ಹೋದ ಮಾತ್ರಕ್ಕೆ ಇಡೀ ಮುಸ್ಲಿಂ ಸಮುದಾಯವೇ ಕುಮಾರಸ್ವಾಮಿ ವಿರುದ್ಧ ನಿಂತಿದೆ ಎಂಬುದು ಸುಳ್ಳು. ನಾವು ಈಗಲೂ ಕುಮಾರಸ್ವಾಮಿ ಅವರ ಜೊತೆ ಇದ್ದೇವೆ. ಅವರು ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧರಾಗಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಜಮೀರ್ ನಿಮ್ಮನ್ನು ಹುಟ್ಟಿಸಿದ್ದೇ ಜೆಡಿಎಸ್
ಜೆಡಿಎಸ್ ಬಿಜೆಪಿ ಮೈತ್ರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ಯಾಂಟ್ ಒಳಗೆ ಚಡ್ಡಿ ಹಾಕಿದ್ದಾರೆ ಎಂದು ಸಚಿವ ಜಮೀರ್ ಅಹಮ್ಮದ್ ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಮುಸ್ಲಿಂ ಮುಖಂಡರು, ಕುಮಾರಸ್ವಾಮಿ ಯವರು ಚಡ್ಡಿ ಹಾಕ್ತಾರೋ, ಲುಂಗಿ ಹಾಕ್ತಾರೋ, 2006ರ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಿ.ಟಿ.ರವಿ ಜೊತೆ ಜಮೀರ್ ಅಹ್ಮದ್ ಚಡ್ಡಿ ಹಾಕಿ ನಿಂತಿದ್ರಲ್ಲ ಎಂದು ಸಿ.ಟಿ.ರವಿಯೊಂದಿಗಿನ ಜಮೀರ್ ಪೋಟೋ ಪ್ರದರ್ಶನ ಮಾಡಿ ತಿರುಗೇಟು ನೀಡಿದರು.
ರಾಜ್ಯದಲ್ಲಿ ಹಿಂದೂ ಮುಸ್ಲಿಂರು ಅಣ್ಣ ತಮ್ಮ ರೀತಿ ಭಾವೈಕ್ಯತೆಯಿಂದ ಬದುಕುತ್ತಿದ್ದೇವೆ. ಕುಮಾರಸ್ವಾಮಿ ನಮಗೆ ಯಾವತ್ತೂ ಅನ್ಯಾಯ ಮಾಡಿಲ್ಲ. ರಾಜಕೀಯದಲ್ಲಿ ಮುಸ್ಲಿಮರ ಹೆಸರು ಹೇಳಿ ರಾಜಕೀಯ ಮಾಡುತ್ತಿರುವುದು ನೀವು. ಚಡ್ಡಿ-ಗಿಡ್ಡಿ ಅಂತೆಲ್ಲಾ ಹೇಳಬೇಡಿ ಎಂದು ಸಚಿವ ಜಮೀರ್ ಅಹ್ಮದ್ ಅವರಿಗೆ ಚನ್ನಪಟ್ಟಣ ಮುಸ್ಲಿಂ ಮುಖಂಡರು ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷ ತಾಯಿ ಇದ್ದಂತೆ. ಜಮೀರ್ ಅವರೇ ನಿಮ್ಮನ್ನು ಹುಟ್ಟಿಸಿದ್ದೇ ಜೆಡಿಎಸ್. ನಿಮ್ಮ ರಾಜಕೀಯದ ತಾಯಿ ಜೆಡಿಎಸ್. ಅಷ್ಟೇಕೆ ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯ ಅವರನ್ನು ಹುಟ್ಟಿಹಾಕಿದ್ದೂ ಕೂಡಾ ಇದೇ ಜೆಡಿಎಸ್ ಪಕ್ಷ. ಜೆಡಿಎಸ್ ಪಕ್ಷವಿಲ್ಲದಿದ್ದರೆ ರಾಜ್ಯದಲ್ಲಿ ನಿಮ್ಮನ್ನು ಯಾರು ಗುರುತಿಸುತ್ತಿರಲಿಲ್ಲ. ಜಮೀರ್ ಬಸ್ ಓಡಿಸಿಕೊಂಡು ಇಲ್ಲವೇ ಬಸ್ ಮಾಲೀಕನಾಗಿ ಇರಬೇಕಿತ್ತು ಎಂದು ವ್ಯಂಗ್ಯವಾಡಿದರು.












Click it and Unblock the Notifications