ಬೆಂಬಲಿಗರಿಗೆ ಟಿಕೆಟ್: ನಾಮಪತ್ರ ಸಲ್ಲಿಸಿದ ಸಿ.ಪಿ.ಯೋಗೇಶ್ವರ್
ರಾಮನಗರ ಏಪ್ರಿಲ್ 23: ಮಂಡ್ಯ, ಮದ್ದೂರು ಮತ್ತು ಮಳವಳ್ಳಿ ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡದ ಹಿನ್ನಲೆಯಲ್ಲಿ ಬಿಜೆಪಿ ವರಿಷ್ಠರ ವಿರುದ್ಧ ಮುನಿಸಿಕೊಂಡು ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಸಿ.ಪಿ.ಯೋಗೇಶ್ವರ್ ಇಂದು (ಸೋಮವಾರ) ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಗೆ ಸಲ್ಲಿಸಿದರು.
ಕಳೆದ ರಾತ್ರಿ ಸಿಪಿವೈ ಬೇಡಿಕೆಗೆ ಒಪ್ಪಿದ ಬಿಜೆಪಿ ವರಿಷ್ಠರು ಮಂಡ್ಯದಿಂದ ಚಂದಗಾಲು ಶಿವಣ್ಣ, ಮದ್ದೂರಿನಿಂದ ಲಕ್ಷ್ಮಣಗೌಡ ಮತ್ತು ಮಳವಳ್ಳಿಯಿಂದ ಕೆ.ಶಿವರಾಮ್ ಅವರಿಗೆ ಟಿಕೆಟ್ ಖಾತ್ರಿಯಾದ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಕೆಎಸ್ಐಸಿ ಮಿಲ್ ಬಳಿಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೃಹತ್ ಜಾಥದಲ್ಲಿ ತಾಲೂಕು ಕಚೇರಿಗೆ ತೆರಳಿದ ಯೋಗೇಶ್ವರ್ ಚುನಾವಣಾಧಿಕಾರಿ ಗುಣವಂತ್ ಗೆ ನಾಮಪತ್ರ ಸಲ್ಲಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಆನಂದ, ಮುಖಂಡರಾದ ಮಲವೇಗೌಡ, ರಾಜಣ್ಣ, ಶಾಸಕರ ಅಪ್ತ ಕಾರ್ಯದರ್ಶಿ ತಿಮ್ಮೇಶ್ ಪ್ರಭು ಸಿಪಿವೈಗೆ ಸಾಥ್ ನೀಡಿದರು.

ವದಂತಿ ಅಲ್ಲಗಳೆದ ಸಿಪಿವೈ
ಪಕ್ಷದಲ್ಲಿ ಯಾವುದೇ ವೈಮನಸ್ಯ ಇಲ್ಲ. ನಾನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಚಿಂತಿಸಿರಲಿಲ್ಲ. ಅದೆಲ್ಲ ಕೇವಲ ಮಾಧ್ಯಮಗಳ ಸೃಷ್ಠಿ. ಬಿಜೆಪಿ ಅಭ್ಯರ್ಥಿಯಾಗಲು ಟಿಕೆಟ್ ನೀಡಿದೆ. ಅದರಂತೆ ಇಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ನಾನು ಯಾವುದೇ ಅಭ್ಯರ್ಥಿಯ ಬಗ್ಗೆ ಮಾತನಾಡುವುದಿಲ್ಲ. ಚುನಾವಣೆಯಲ್ಲಿ ಗೆದ್ದು ನನ್ನ ಶಕ್ತಿ ಸಾಬೀತು ಮಾಡುತ್ತೇನೆ ಎಂದರು.
ಜೆಡಿಎಸ್ ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಅಂತೆಯೇ ಕಾಂಗ್ರೆಸ್ ನಿಂದ ಸಾರಿಗೆ ಸಚಿವ ಎಚ್. ಎಂ.ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಎರಡು ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.












Click it and Unblock the Notifications