Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಬೈಕ್, ಆಟೋಗಳಿಗೆ ನಿರ್ಬಂಧ, ಭುಗಿಲೆದ್ದ ಜನಾಕ್ರೋಶ
ರಾಮನಗರ, ಜನವರಿ, 10: ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ. ಕಾಮಗಾರಿ ಮುಕ್ತಯಗೊಂಡ ನಂತರ ಎಕ್ಸ್ಪ್ರೆಸ್ ವೇನಲ್ಲಿ ಬೈಕ್ ಹಾಗೂ ಆಟೋಗಳಿಗೆ ನಿರ್ಬಂಧ ಹೇರಲಾಗುವುದು ಎಂದು ಇತ್ತೀಚೆಗಷ್ಟೇ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿದ್ದರು. ಇದೀಗ ಪ್ರತಾಪ್ ಸಿಂಹ ತೆಗೆದುಕೊಂಡ ನಿರ್ಧಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಗಳು ಭುಗಿಲೆದ್ದಿವೆ.
ಹೆದ್ದಾರಿಯಲ್ಲಿನ ಮಧ್ಯದ 6 ಲೇನ್ಗಳನ್ನು ಎಕ್ಸ್ಪ್ರೆಸ್ ವೇಗಂತಲೇ ಮೀಸಲಿರಿಸಲಾಗಿದೆ. ಇಲ್ಲಿ ವಾಹನಗಳ ವೇಗ ಹೆಚ್ಚಳ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೈಕ್ ಹಾಗೂ ಆಟೋ ಸೇರಿದಂತೆ ಇನ್ನಿತರ ಕೆಲವು ವಾಹನಗಳಿಗೆ ನಿರ್ಬಂಧ ಹೇರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಇದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಹ ಸಮ್ಮತಿ ಸೂಚಿಸಿದ್ದರು. ಇನ್ನು ಹೆದ್ದಾರಿಯಲ್ಲಿ ಕೆಲವೆಡೆ ಇನ್ನೂ ಸರ್ವೀಸ್ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಎಲ್ಲಾ ಕಾಮಗಾರಿಗಳು ಮುಗಿದ ನಂತರ ಈ ನಿರ್ಬಂಧ ಆದೇಶ ಜಾರಿಯಾಗಲಿದೆ. ಮಹತ್ವದ ನಿರ್ಧಾರವು ಅನುಷ್ಠಾನಕ್ಕೆ ಬಂದರೆ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ಹೆದ್ದಾರಿ ಇದಾಗಲಿದೆ ಎನ್ನುವುದಕ್ಕೆ ಸಾಕ್ಷಿಯಾಗಲಿದೆ.

ಬಡಜನರಿಗೆ ಉಪಯೋಗ ಆಗುವುದಿಲ್ಲ
ನೂತನವಾಗಿ ನಿರ್ಮಾಣವಾಗುತ್ತಿರುವ ಹೆದ್ದಾರಿಯಲ್ಲಿ ಏನಾದರೂ ಒಂದು ವೇಳೆ ದ್ವಿಚಕ್ರ ವಾಹನಗಳ ಓಡಾಟಕ್ಕೆ ನಿಷೇಧ ಹೇರಿದರೆ ಅದು ಅತಿ ಶ್ರೀಮಂತರ ಹೆದ್ದಾರಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಲಿದೆ ಎನ್ನುವುದು ಕೆಲವರ ಅಭಿಪ್ರಾಯ ಆಗಿದೆ. ಹೆದ್ದಾರಿ ಅಭಿವೃದ್ಧಿಯಿಂದ ಮಧ್ಯಮ ವರ್ಗದ ಜನರಿಗೆ ಯಾವ ಉಪಯೋಗವೂ ಆಗುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ ಆಗಿದೆ. ಹಾಗೆಯೇ ಈಗಾಗಲೇ ಹೆದ್ದಾರಿಗಾಗಿ ನಮ್ಮ ಗ್ರಾಮದಲ್ಲಿರುವ ಜಮೀನು, ರಸ್ತೆ ಬದಿಯ ಮನೆಗಳನ್ನು ಕಳೆದುಕೊಂಡಿದ್ದೇವೆ. ಹೀಗಿರುವಾಗ ಸ್ಥಳೀಯರಿಗೆ ನಮ್ಮದೇ ಊರಿನ ಎಕ್ಸ್ಪ್ರೆಸ್ ವೇನಲ್ಲಿ ಓಡಾಟಕ್ಕೆ ನಿಷೇಧ ಹೇರುವುದು ಸರಿಯಲ್ಲ. ಕೇವಲ ಶ್ರೀ ಮಂತರು-ಉದ್ಯಮಿಗಳ ಓಡಾಟಕ್ಕಾಗಿ ಜನರ ತೆರಿಗೆ ಹಣದಲ್ಲಿ ಈ ಹೆದ್ದಾರಿ ಕಟ್ಟಿಲ್ಲ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೈಕ್ಗಳ ಸಂಚಾರಕ್ಕೆ ನಿರ್ಬಂಧ ಬೇಡ
ಬೆಂಗಳೂರಿನಿಂದ ರಾಮನಗರ, ಚನ್ನಪಟ್ಟಣ, ಮಂಡ್ಯಕ್ಕೆ ಬೈಕ್ಗಳಲ್ಲಿ ತುಂಬಾ ಜನ ಅಡ್ಡಾಡುತ್ತಾರೆ. ಅಂತಹವರ ಓಡಾಟಕ್ಕೆ ಎಕ್ಸ್ಪ್ರೆಸ್ ವೇನಲ್ಲಿ ಅವಕಾಶ ನೀಡಬೇಕು. ಬೇರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವಂತೆಯೇ ಇಲ್ಲಿಯೂ ಇಂತಹ ವಾಹನಗಳಿಗೆ ಟೋಲ್ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಸರಿಯಾಗಿ ವಾಹನ ಚಲಾಯಿಸುವುದಿಲ್ಲ
ಹೆದ್ದಾರಿಗಳಲ್ಲಿ ಸಂಭವಿಸುವ ಅಪಫಾತಗಳ ಪೈಕಿ ಬೈಕ್ ಹಾಗೂ ಆಟೋಗಳದ್ದೇ ಹೆಚ್ಚಿನ ಪಾಲಿದೆ. ಈ ರೀತಿಯ ವಾಹನಗಳ ಸವಾರರು ಸರಿಯಾಗಿ ಲೇನ್ಗಳಲ್ಲಿ ಚಲಿಸುವುದಿಲ್ಲ. ದೊಡ್ಡ ಮಟ್ಟದ ವಾಹನಗಳಿಗೆ ಅಡ್ಡಬರುವುದರಿಂದ ಅಪಘಾತಗಳು ಆಗುತ್ತಿವೆ. ಇದರಿಂದ ಉಳಿದ ವಾಹನಗಳ ವೇಗವೂ ಕಡಿಮೆ ಆಗಲಿದೆ. ಹೀಗಾಗಿ ಎಕ್ಸ್ಪ್ರೆಸ್ ವೇನಲ್ಲಿ ಇವುಗಳಿಗೆ ನಿಷೇಧ ಹೇರಿ, ಸರ್ವೀಸ್ ರಸ್ತೆಗಳಲ್ಲಿ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರಾಧಿಕಾರದ ವಿರುದ್ದ ಭುಗಿಲೆದ್ದ ಆಕ್ರೋಶ
ಒಟ್ಟಿನಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಮುಗಿರುವ ಹಂತದಲ್ಲಿದ್ದರೂ ಕೂಡ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಹೆದ್ದಾರಿಯಲ್ಲಿ ಬೈಕ್ ಮತ್ತು ಆಟೋಗಳಿಗೆ ನಿರ್ಬಂಧ ಹೇರಲು ಪ್ರಾಧಿಕಾರ ಮುಂದಾಗಿದ್ದು, ಇದರ ವಿರುದ್ಧ ಆಕ್ರೋಶಗಳು ಕೂಡ ಭುಗಿಲೆದ್ದಿವೆ. ಈ ಆಕ್ರೋಶವನ್ನು ಹೆದ್ದಾರಿ ಪ್ರಾಧಿಕಾರ ಯಾವ ರೀತಿ ತಣಿಸುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications