ಬಂಡೆಮಠ ಶ್ರೀ ಆತ್ಮಹತ್ಯೆ; ನ. 4ರವರೆಗೆ ಆರೋಪಿಗಳು ಪೊಲೀಸ್ ವಶಕ್ಕೆ
ರಾಮನಗರ, ಅಕ್ಟೋಬರ್ 31: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಪೊಲೀಸರು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲು ಕೋರ್ಟ್ಗೆ ಮನವಿ ಮಾಡಿದ್ದರು. ಆರೋಪಿಗಳನ್ನು ಮಾಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಪೊಲೀಸರ ಮನವಿಯನ್ನು ಪುರಸ್ಕರಿಸಿದೆ.
ಬಂಡೇಮಠದ ಬಸವಂಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮಿಜಿ, ನೀಲಾಂಬಿಕೆ ಅಲಿಯಾಸ್ ಚಂದು ಹಾಗೂ ವಕೀಲ ಮಹದೇವಯ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.
ಭಾನುವಾರ ಈ ಮೂವರೂ ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಮೃತ್ಯುಂಜಯ ಸ್ವಾಮೀಜಿ ಹಾಗೂ ಮಹದೇವಯ್ಯ ಅವರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ನೀಲಾಂಬಿಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.

ಪ್ರಕರಣದ ಸಂಬಂಧ ಇನ್ನೂ ಹಲವರನ್ನು ವಿಚಾರಣೆ ಮಾಡುವ ಅಗತ್ಯವಿದೆ. ಬೇರೆ ಬೇರೆ ಭಾಗಗಳಿಂದ ಹಲವರ ವಶಕ್ಕೆ ಪಡೆಯುವ ಅಗತ್ಯ ಇದೆ. ಹೀಗಾಗಿ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪೊಲೀಸರ ಮನವಿ ಪುರಸ್ಕರಿಸಿದ ಮಾಗಡಿ ಒಂದನೇ ಜೆ. ಎಂ. ಎಫ್. ಸಿ ನ್ಯಾಯಾಲಯದ ನ್ಯಾಯಾಧೀಶೆ ಧನಲಕ್ಷ್ಮಿ ಮೂವರು ಆರೋಪಿಗಳನ್ನು ನವೆಂಬರ್ 4 ರವರೆಗೆ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.
ಯುವತಿ ಬಳಸಿಕೊಂಡು ಹನಿಟ್ರ್ಯಾಪ್; ಆತ್ಮಹತ್ಯೆ ಮಾಡಿಕೊಂಡ ಬಸವಲಿಂಗ ಸ್ವಾಮೀಜಿ ಹಾಗೂ ಎ1 ಆರೋಪಿಯಾಗಿರುವ ಮೃತ್ಯುಂಜಯ ಸ್ವಾಮೀಜಿ ದಯಾದಿಗಳು ಎಂದು ತಿಳಿದುಬಂದಿದ್ದು, ಮಠದ ಆಸ್ತಿ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಹಾಗಾಗಿ ಬಸವಲಿಂಗ ಸ್ವಾಮೀಜಿಯ ಮಾನ ಹಾನಿ ಹಾಗೂ ಬ್ಲ್ಯಾಕ್ ಮೇಲ್ ಮಾಡುವುದಕ್ಕಾಗಿ ದೊಡ್ಡಬಳ್ಳಾಪುರದ ಇಂಜಿನಿಯರ್ ವಿದ್ಯಾರ್ಥಿನಿಯನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ಎ3 ಆರೋಪಿಯಾಗಿರುವ ವಕೀಲ ಮಹದೇವಯ್ಯ ಹಾಗೂ ಈ ಮೂವರ ಜೊತೆಗೆ ಮಠದ ಒಳಗಿರುವ ಇನ್ನೂ ಕೆಲವರು ಸಹಕಾರ ನೀಡಿರುವ ಶಂಕೆ ಇದೆ.

ಬಸವಲಿಂಗ ಸ್ವಾಮೀಜಿಯನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಲು ಆರೋಪಿಗಳು ಕಳೆದ ಫೆಬ್ರವರಿಯಿಂದಲೇ ಪ್ಲಾನ್ ಮಾಡಿಕೊಂಡಿದ್ದಾರೆ. ಬಂಧವನಾಗಿರುವ ಯುವತಿ ಬಸವಲಿಂಗ ಸ್ವಾಮೀಜಿ ಜೊತೆಗೆ ವಿಡಿಯೋ ಕರೆ ಮಾಡಿ ಮಾತನಾಡುವ ವೇಳೆ ಕೆಲವು ಖಾಸಗಿ ಮಾತುಕತೆಯ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು, ಆ ವಿಡಿಯೋಗಳನ್ನು ಮೃತ್ಯುಂಜಯ ಸ್ವಾಮೀಜಿಗೆ ನೀಡಿದ್ದಾಳೆ. ಈ ವಿಡಿಯೋಗಳನ್ನು ಇಟ್ಟುಕೊಂಡು ಕಣ್ಣೂರು ಮಠ ಸ್ವಾಮೀಜಿ, ಬಸವಲಿಂಗ ಶ್ರೀಗಳನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಆರೋಪ.












Click it and Unblock the Notifications