ಬಂಡೆಮಠ ಶ್ರೀ ಆತ್ಮಹತ್ಯೆ: ಕಣ್ಣೂರು ಶ್ರೀ ಸೇರಿ 3 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ರಾಮನಗರ, ಅಕ್ಟೋಬರ್ 30: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಮೂವರು ಆರೋಪಿಗಳನ್ನು ರಾಮನಗರ ಕಾರಾಗೃಹಕ್ಕೆ ಬಿಟ್ಟಿದ್ದಾರೆ.
ವಾರದ ಹಿಂದೆ ಬಂಡೆಮಠದ ಸ್ವಾಮೀಜಿ ನೇಣಿಗೆ ಶರಣಾಗಿದ್ದರು. ಪೊಲೀಸರ ತನಿಖೆಯಲ್ಲಿ ಬಸವಲಿಂಗ ಸ್ವಾಮೀಜಿಯನ್ನು ಹನಿಟ್ರ್ಯಾಪ್ ಮಾಡಿ ಬೆದರಿಕೆಯೊಡ್ಡಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಸ್ವಾಮೀಜಿ ಬರೆದಿದ್ದ ಮೂರು ಪುಟಗಳ ಎರಡು ಡೆತ್ನೋಟ್ಗಳಲ್ಲಿಯೂ ಸ್ವಾಮೀಜಿ ಆತ್ಮಹತ್ಯೆಗೆ ಕಾರಣರಾದವರ ಹೆಸರುಗಳನ್ನು ಬರೆದಿದ್ದರು ಎನ್ನಲಾಗುತ್ತಿದೆ.
ಭಾನುವಾರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿಂತೆ ಕಣ್ಣೂರು ಮಠದ ಡಾ. ಮೃತ್ಯುಂಜಯ ಸ್ವಾಮೀಜಿಯನ್ನು ಎ1 ಆರೋಪಿಯಾಗಿ, ಎ2 ಆರೋಪಿಯಾಗಿ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಗೂ ಎ3 ಆರೋಪಿ ಮಹದೇವಯ್ಯ ಎಂಬುವವರನ್ನು ಬಂಧಿಸಿದ್ದರು. ಮೂವರಿಗೂ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಕಣ್ಣೂರು ಮಠದ ಮೃತ್ಯುಂಜಯಶ್ರೀ ಹಾಗೂ ಎ3 ಆರೋಪಿ ಮಹದೇವಯ್ಯರನ್ನು ಪೊಲೀಸರು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದರೆ, ಯುವತಿಯನ್ನು ಬೆಂಗಳೂರಿನ ಜೈಲಿಗೆ ಕಳುಹಿಸಲಾಗಿದೆ.
ಯುವತಿ ಬಳಸಿ ಹನಿಟ್ರ್ಯಾಪ್
ಆತ್ಮಹತ್ಯೆ ಮಾಡಿಕೊಂಡ ಬಸವಲಿಂಗ ಸ್ವಾಮೀಜಿ ಹಾಗೂ ಎ1 ಆರೋಪಿಯಾಗಿರುವ ಮೃತ್ಯುಂಜಯ ಸ್ವಾಮೀಜಿ ದಯಾದಿಗಳು ಎಂದು ತಿಳಿದುಬಂದಿದ್ದು, ಮಠದ ಆಸ್ತಿ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಹಾಗಾಗಿ ದೊಡ್ಡಬಳ್ಳಾಪುರದ ಇಂಜಿನಿಯರ್ ವಿದ್ಯಾರ್ಥಿನಿಯನ್ನು ದಾಳವಾಗಿ ಬಳಸಿ ಹನಿಟ್ರ್ಯಾಪ್ ಮಾಡಿದ್ದಾರೆ. ಈ ಕೃತ್ಯಕ್ಕೆ ಈ ಮೂವರ ಜೊತೆಗೆ ಮಠದ ಒಳಗಿರುವ ಇನ್ನೂ ಕೆಲವರು ಸಹಕಾರ ನೀಡಿರುವ ಸಂಶಯವಿದ್ದು, ತನಿಖೆಯಿಂದ ತಿಳಿದುಬರಬೇಕಿದೆ.
ಬಸವಲಿಂಗ ಸ್ವಾಮೀಜಿಯನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಲು ಆರೋಪಿಗಳು ಕಳೆದ ಫೆಬ್ರವರಿಯಿಂದಲೇ ಪ್ಲಾನ್ ಮಾಡಿಕೊಂಡಿದ್ದಾರೆ. ಬಂಧವನಾಗಿರುವ ಯುವತಿ ಬಸವಲಿಂಗ ಸ್ವಾಮೀಜಿ ಜೊತೆಗೆ ವಿಡಿಯೋ ಕರೆ ಮಾಡಿ ಮಾತನಾಡುವ ವೇಳೆ ಕೆಲವು ಖಾಸಗಿ ಮಾತುಕತೆಯ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು, ಆ ವಿಡಿಯೋಗಳನ್ನು ಮೃತ್ಯುಂಜಯ ಸ್ವಾಮೀಜಿಗೆ ನೀಡಿದ್ದಾಳೆ. ಈ ವಿಡಿಯೋಗಳನ್ನುಟ್ಟುಂಕೊಂಡು ಕಣ್ಣೂರು ಮಠ ಸ್ವಾಮೀಜಿ, ಬಸವಲಿಂಗ ಶ್ರೀಗಳನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ವಿಚಾರವನ್ನು ಸ್ವಾಮೀಜಿ ಡೆತ್ ನೋಟ್ನಲ್ಲಿ ನಮೂದಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications