ಯೋಗೇಶ್ವರ್ ಕಾರಿಗೆ ಮೊಟ್ಟೆ, ಕಲ್ಲು ಎಸೆತ; ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು
ರಾಮನಗರ, ಅ.03: ಜೆಡಿಎಸ್ ಕಾರ್ಯಕರ್ತರ ವಿರೋಧದ ನಡುವೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಿದ ಘಟನೆಯ ಹಿನ್ನೆಲೆಯಲ್ಲಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಅವರ ಕಾರಿನ ಚಾಲಕ ವೆಂಕಟೇಶ ಚನ್ನಪಟ್ಟಣ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ 14 ಮಂದಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ.
ಚನ್ನಪಟ್ಟಣ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಆಹ್ವಾನ ನೀಡದೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಶನಿವಾರ ಜೆಡಿಎಸ್ ಬೆಂಬಲಿಗರು ಸಿ. ಪಿ. ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಹಾಗೂ ಕಲ್ಲಿನಿಂದ ದಾಳಿ ಮಾಡಿದ್ದರು.
'ಸಿ. ಪಿ. ಯೋಗೇಶ್ವರ್ ಅವರು ಅವರ ಆಪ್ತಸಹಾಯಕರು ಸೇರಿ ನಾನು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಈ ವೇಳೆ ಯೋಗೇಶ್ವರ್ ವಿರುದ್ಧ ಘೋಷಣೆ ಕೂಗಿ, ಕಲ್ಲಿನಿಂದ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನಮಗೆ ಪ್ರಾಣ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮವಹಿಸಿಸಬೇಕು' ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮ ರದ್ದು ಮಾಡಿದ್ದರೂ, ಯೋಗೇಶ್ವರ್ ಪೂಜೆ ಮಾಡಿದ್ದಾರೆ
"ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಅಧಿಕಾರಿಗಳು ರದ್ದು ಮಾಡಿದ್ದರು. ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಪೊಲೀಸರನ್ನು ಬಳಸಿಕೊಂಡು ಕಾಮಗಾರಿಗೆ ಪೂಜೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಯೋಗೇಶ್ವರ್ ಅವರನ್ನು ಮೆಚ್ಚಿಸಲು ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಪೊಲೀಸ್ ದರ್ಪಕ್ಕೆ, ತೀವ್ರ ಗಾಯಗಳಿಂದ ಬಳಲುತ್ತಿರುವ ವ್ಯಕ್ತಿಗಳ ಮೇಲೆ ಕೇಸ್ ದಾಖಲು ಮಾಡಿ ತಮ್ಮ ಮೇಲಿನ ಆರೋಪ ಮುಚ್ಚಿಕೊಳ್ಳಲು ಹುನ್ನಾರ ನಡೆಸಿದ್ದಾರೆ" ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ. ನರಸಿಂಹಮೂರ್ತಿ ಆರೋಪಿಸಿದ್ದಾರೆ.

ಶಾಮತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಲಾಠಿಚಾರ್ಜ್
ಮುಖ್ಯಮಂತ್ರಿ ನೀಡಿದ ಅನುದಾನದ ಕಾಮಾಗಾರಿಗಳ ಭೂಮಿ ಪೂಜೆ ಕಾರ್ಯಕ್ರಮನ್ನು ಕ್ಷೇತ್ರದ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಹೊರಗಿಟ್ಟು ಅಭಿವೃದ್ಧಿ ಕ್ರೆಡಿಟ್ ಪಡೆಯಲು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಹುನ್ನಾರ ನಡೆಸಿದ್ದಾರೆ. ಇದನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ನಮ್ಮ ಮೇಲೆ ಪೋಲಿಸರು ಏಕಾಏಕಿ ಲಾಠಿ ಚಾರ್ಜ್ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ನರಸಿಂಹಮೂರ್ತಿ ಆರೋಪಿಸಿದ್ದಾರೆ.

ಏಕಾಏಕಿ ಜೆಡಿಎಸ್ ನಾಯಕರಿಂದ ಕಲ್ಲು, ಮೊಟ್ಟೆ ತೂರಾಟ
ವಿಧಾನ ಪರಿಷತ್ ಶಾಸಕರಾದ ಸಿ. ಪಿ. ಯೋಗೇಶ್ವರ್ ರವರ ಬಳಿ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ದಿನ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ಸರ್ಕಾರದಿಂದ ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮಂಜೂರಾಗಿರುವ ವಿಶೇಷ ಅನುದಾನದ ಕಾಂಕ್ರೀಟ್ ರಸ್ತೆ ಕಾಮಗಾರಿಗಳ ಭೂಮಿ ಪೂಜಾ ಕಾರ್ಯಕ್ರಮವನ್ನು ದಿ.1-10-22 ಹಮ್ಮಿಕೊಂಡಿದ್ದು ಸದರಿ ಕಾಯಕ್ರಮದಲ್ಲಿ ಪಾಲ್ಗೊಳ್ಳಲು ಮಾನ್ಯ ವಿಧಾನ ಪರಿಷತ್ ಶಾಸಕರಾದ ಸಿ. ಪಿ. ಯೋಗೇಶ್ವರ್ ಹಾಗೂ ಅವರ ಆಪ್ತ ಸಹಾಯಕರಾದ ವಿ. ತಿಮ್ಮೇಶ್ಪ್ರಭು, ಅಂಗರಕ್ಷಕರಾದ ನಾಗೇಂದ್ರ ಕೆ, ಮುಖಂಡರಾದ ಎಸ್.ಲಿಂಗೇಶ್ಕುಮಾರ್ ಅವರನ್ನು ಫ್ಯಾಷನ್ ಫೋರಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬಾಬು ಕೆಎ-51-ಎಂಆರ್-1818 ನಂಬರಿನ ಫೋರ್ಡ್ ಎಂಡೋವರ್ ಕಾರಿನಲ್ಲಿ ಬೈರಾಪಟ್ಟಣ ಗ್ರಾಮಕ್ಕೆ ಕರೆದುಕೊಂಡು ಹೋಗಿ ರಸ್ತೆ ಕಾಮಗಾರಿಯ ಭೂಮಿಪೂಜೆ ಪಾಲ್ಗೊಂಡಿದ್ದೆವು.
ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸ್ ಹಿಂದಿರುಗುತ್ತಿದ್ದಾಗ ಸುಮಾರು 11.00 ರಿಂದ 11.20 ಗಂಟೆ ಸಮಯದಲ್ಲಿ ಸದರಿ ಭೈರಾಪಟ್ಟಣ ಗ್ರಾಮದ ಬೆಂಗಳೂರು ಮೈಸೂರು ರಸ್ತೆಯ ಸರ್ವೀಸ್ ರಸ್ತೆಯಲ್ಲಿ ನಮ್ಮ ಕಾರು ಚಲಿಸುತ್ತಿದ್ದಾಗ ಏಕಾಏಕಿ ಬೆಂಗಳೂರಿನ ನಾಗರಭಾವಿಯ ನಿವಾಸಿ ರಾಜ್ಯ ಜೆಡಿಎಸ್ ವಕ್ತಾರರಾದ ವಿ. ನರಸಿಂಹಮೂರ್ತಿ, ರಾಮನಗರ ತಾಲ್ಲೂಕು ಕಾಡನಕುಪ್ಪೆ ಗ್ರಾಮದ ನವೀನ ಬಿನ್ ಸಿದ್ದೇಗೌಡ, ಹಾರೋಹಳ್ಳಿ, ತಾಲ್ಲೂಕಿನ ಕೊಳ್ಳಿಗಾನಹಳ್ಳಿ ಗ್ರಾಮದ ವಾಸಿ ಪ್ರದೀಪ, ಚನ್ನಪಟ್ಟಣ ನಗರದ ಎಲೇಕೇರಿ ವಾಸಿ ನಂದೀಶ್, ಚನ್ನಪಟ್ಟಣ ತಾಲ್ಲೂಕು ಗಂಗೆದೊಡ್ಡಿ ಗ್ರಾಮದ ಬೊರೇಗೌಡ, ಚನ್ನಪಟ್ಟಣ ತಾಲ್ಲೂಕು ಮೈಲನಾಯಕನಹಳ್ಳಿ ಗ್ರಾಮದ ಮನು, ಚನ್ನಪಟ್ಟಣ ತಾಲ್ಲೂಕು ಬಲ್ಲಾಪಟ್ಟಣ ಗ್ರಾಮದ ಬಿ.ಎನ್.ಮಹೇಶ್, ಚನ್ನಪಟ್ಟಣ ತಾಲ್ಲೂಕು ಬೇವೂರು ಗ್ರಾಮದ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಗುರುಕುಮಾರ್, ಚನ್ನಪಟ್ಟಣ ತಾಲ್ಲೂಕು ಗೆಂಡೇಕಟ್ಟೆದೊಡ್ಡಿ ವಾಸಿ ಶಿವು.ಜಿ, ಚನ್ನಪಟ್ಟಣ ತಾಲ್ಲೂಕು ಬ್ರಹ್ಮಣೀಪುರ ಗ್ರಾಮ ವಾಸಿ ಅರಸೇಗೌಡ, ಚನ್ನಪಟ್ಟಣ ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶಿಶ್, ಚನ್ನಪಟ್ಟಣ ತಾಲ್ಲೂಕು ಕೋಡಂಬಳ್ಳಿಗ್ರಾಮದ ವಾಸಿ ಡಿ.ಕುಮಾರ್, ಚನ್ನಪಟ್ಟಣ ತಾಲ್ಲೂಕು ತೂಬಿನಕೆರೆ ಗ್ರಾಮದ ವಾಸಿ ಲೋಕೇಶ್, ಚನ್ನಪಟ್ಟಣ ತಾಲ್ಲೂಕಿನ ಚಿಕ್ಕವಿಠಲೇನಹಳ್ಳಿ ಗ್ರಾಮದ ವಾಸಿ ಪ್ರದೀಪ್ ಮತ್ತು ಇತರರು ಕೂಡಿ ನಮ್ಮ ಕಾರನ್ನು ಅಡ್ಡಗಟ್ಟಿ ಕಲ್ಲು ಮತ್ತು ಮೊಟ್ಟೆಗಳಿಂದ ಕಾರನ್ನು ಜಖಂಗೊಳಿಸಿ, ಪ್ರಾಣಹಾನಿ ಮಾಡುವ ದುರುದ್ದೇಶದಿಂದ ಹಲ್ಲೆಗೆ ಯತ್ನಿಸಿದರು' ಎಂದಿದ್ದಾರೆ.

ಸಿ. ಪಿ. ಯೋಗೇಶ್ವರ್ಗೆ ಪ್ರಾಣ ಬೆದರಿಕೆ ; ಆರೋಪ
"ಹಲ್ಲೆಯಿಂದಾಗಿ ಕಾರಿನ ಹಿಂಭಾಗದ ಗಾಜು ಮತ್ತು ಕಾರಿನ ಹೊರಕವಚವನ್ನು ಜಖಂಗೊಳಿಸಿ, ನಿನ್ನನ್ನು ಹಾದಿಬೀದಿಯಲ್ಲಿ ಹುಡುಕಿ ಮುಗಿಸುತ್ತೇವೆಂದು ಮಾನ್ಯ ಶಾಸಕರಾದ ಸಿ. ಪಿ. ಯೋಗೇಶ್ವರ್ ರವರಿಗೆ ಪ್ರಾಣಬೆದರಿಕೆ ಹಾಕಿದರು. ಈ ಸಂದರ್ಭದಲ್ಲಿ ಶಾಸಕರ ಉಳಿದ ಅಂಗರಕ್ಷಕರುಗಳಾದ ಜಿತೇಂದ್ರಗೌಡ. ಜಿ.ಎಸ್, ಮತ್ತು ಚಂದ್ರಹಾಸ.ಇ ರವರು ಮತ್ತು ಬಂದೋಬಸ್ತ್ ಕರ್ತವ್ಯದಲ್ಲಿ ಕಾರ್ಯನಿರತರಾಗಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಮ್ಮ ರಕ್ಷಣೆಗೆ ಬಂದರು. ಆದ್ದರಿಂದ ಕಾರಿನಲ್ಲಿದ್ದ ನಮ್ಮಗಳ ಮೇಲೆ ಹಲ್ಲೆ ಮಾಡಲು ಯತ್ನಿಸಿ ಶಾಸಕರಿಗೆ ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡ ಕಿಡಿಗೇಡಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.












Click it and Unblock the Notifications