ರಾಮನಗರದಲ್ಲಿ ಜಲಾವೃತಗೊಂಡ ಜಿಲ್ಲಾಸ್ಪತ್ರೆ: ಜನಸಾಮಾನ್ಯರ ಅಳಲು ಕೇಳೋರಿಲ್ಲ!
ರಾಮನಗರ, ಅಕ್ಟೋಬರ್ 24: ರೇಷ್ಮೆನಗರಿ ರಾಮನಗರದಲ್ಲಿ ಮಳೆ ನಿಂತರೂ ಮಳೆಯ ಅವಾಂತರ ಮಾತ್ರ ತಪ್ಪಿಲ್ಲ ಕಳೆದ 10 ದಿನಗಳಿಂದ ಆಸ್ಪತ್ರೆ ಬಾಗಿಲು ತೆರೆಯದಂತಾಗಿದೆ. ಕನಕಪುರ ತಾಲೂಕಿನ ಹಾರೋಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ ಮಳೆಯ ನೀರಿನಿಂದ ಜಲಾವೃತ್ತವಾಗಿ 10 ದಿನಗಳಿಂದ ತೆರೆದಿಲ್ಲ.
ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿನ ಹಾರೋಹಳ್ಳಿ ಕೆರೆಯಲ್ಲಿನ ಜಾಗದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಆರೋಗ್ಯ ಕೇಂದ್ರ ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು ಆಸ್ಪತ್ರೆಗೆ ರೋಗಿಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿಗಳು ಸಹ ಕಾಲಿಡದಂತಾಗಿದೆ. ಸತತ ಮಳೆಯಿಂದ ಸಂಪೂರ್ಣವಾಗಿ ಕೆರೆ ತುಂಬಿದ್ದು ಆಸ್ಪತ್ರೆಯ ಒಳಗೆ ಮತ್ತು ಮುಂಭಾಗ ನೀರಿನಿಂದ ಜಲಾವೃತವಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಆಸ್ಪತ್ರೆ ಶಿಥಿಲವಾಗಿ ಮುರಿದು ಬೀಳುವ ಭೀತಿಯಲ್ಲಿದೆ.

ಹಾರೋಹಳ್ಳಿಯ ಸುತ್ತ ಮುತ್ತಲಿನ ಜನರಿಗೆ ಉತ್ತಮವಾದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸರ್ಕಾರ ಸುಮಾರು ರೂ.2.25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಆದೇಶ ಮಾಡಿತ್ತು. ಆದರೆ ಅಧಿಕಾರಿಗಳು ಆಸ್ಪತ್ರೆಯನ್ನು ಕೆರೆಯ ಅಂಗಳದಲ್ಲಿ ನಿರ್ಮಾಣ ಮಾಡಿ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಕಳೆದ ಕೆಲ ವರ್ಷಗಳಿಂದ ಮಳೆ ಅಭಾವದಿಂದ ಕೆರೆ ತುಂಬದ ಕಾರಣ ಆಸ್ಪತ್ರೆ ಸುಸೂತ್ರವಾಗಿ ನಡೆಯುತ್ತಿತ್ತು.
ಆದರೆ 10 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕೆರೆ ಭರ್ತಿಯಾಗಿ ಆರೋಗ್ಯ ಕೇಂದ್ರಕ್ಕೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಆಸ್ಪತ್ರೆಯ ಒಳಗೆ ಮತ್ತು ಆವರಣದಲ್ಲಿ ನಿಂತಿರುವ ನೀರನ್ನು ಹೊರ ಹಾಕುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಹಾರೋಹಳ್ಳಿಯ ಸರ್ಕಾರಿ ಶಾಲೆಯಯಲ್ಲಿ ತುರ್ತು ವೈದ್ಯಕೀಯ ಸೌಲಭ್ಯ!
ಕೆರೆಯಲ್ಲಿ ನೀರು ಕಡಿಮೆಯಾಗುವವರೆಗೂ ಬದಲಿ ವ್ಯವಸ್ಥೆ ಮಾಡುವಂತೆ ಸಂಸದ ಡಿ.ಕೆ.ಸುರೇಶ್ ಸೂಚನೆ ನೀಡಿದ ಹಿನ್ನಲೆಯಲ್ಲಿ ಹಾರೋಹಳ್ಳಿ ಸರ್ಕಾರಿ ಶಾಲೆ ಕೊಠಡಿಯಲ್ಲಿ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಂಡಿದ್ದಾರೆ. ಶಾಲಾ ಅವರಣದಲ್ಲಿ ಶೌಚಾಲಯವಿಲ್ಲದ ಕಾರಣ ಕೆಲವು ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾತ್ರ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಯ ಕೊಠಡಿಯಲ್ಲಿ ನೀಡಲಾಗುತ್ತಿರುವ ತುರ್ತು ಸೇವೆಯು ಜನಸಾಮಾನ್ಯರಿಗೆ ತೃಪ್ತಿಯನ್ನು ತಂದಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಜನಸಾಮಾನ್ಯರ ಸಂಕಷ್ಟವನ್ನು ಅರಿಯಲಿ ಎಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದರು.












Click it and Unblock the Notifications