ಕಂಚುಗಲ್ ಬಂಡೇ ಮಠದ ಶ್ರೀಗಳ ಆತ್ಮಹತ್ಯೆ: ಹನಿ ಟ್ರ್ಯಾಪ್ಗೆ ಪುಷ್ಟಿ ನೀಡಿದ ವಿಡಿಯೊ ಕಾಲ್
ರಾಮನಗರ, ಅಕ್ಟೋಬರ್ 26: ಸಾಮಾಜಿಕ ಜಾಲ ತಾಣಗಳಲ್ಲಿ ಕಂಚುಗಲ್ ಬಂಡೇ ಮಠದ ಶ್ರೀಗಳದ್ದು ಎನ್ನಲಾದ ಡೆತ್ ನೋಟ್ ಹರಿದಾಡುತ್ತಿರುವ ಬೆನ್ನಲ್ಲೇ ವಿಡಿಯೋ ಕಾಲ್ನಲ್ಲಿ ಮಹಿಳೆ ಜೊತೆ ಸ್ವಾಮಿಜಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಇದು ಕಂಚುಗಲ್ ಬಂಡೇ ಮಠದ ಶ್ರೀ ಬಸವಲಿಂಗ ಸ್ವಾಮೀಜಿಗಳನ್ನು ಹನಿಟ್ಯ್ರಾಪ್ ಮಾಡಲು ಷಡ್ಯಂತ್ರ ನಡೆದಿರಬಹುದು ಎಂಬ ಶಂಕೆಗೆ ಬಲ ತಂದುಕೊಟ್ಟಿದೆ.
ಮಾಗಡಿ ತಾಲ್ಲೂಕಿನ ಕುದೂರು ಬಳಿಯ ಕಂಚುಗಲ್ ಬಂಡೇ ಮಠದ ಬಸವಲಿಂಗ ಶ್ರೀಗಳು ವಿಡಿಯೋಕಾಲ್ನಲ್ಲಿ ಮಹಿಳೆ ಜೊತೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿ ಶ್ರೀಗಳು ಹನಿಟ್ರ್ಯಾಪ್ಗೆ ಬಲಿಯಾಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ಸ್ವಾಮೀಜಿ ಖಾಸಗಿ ವಿಡಿಯೋಕ್ಕೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ವಾಮೀಜಿಗೆ ಸೇರಿದ ಇನ್ನೂ ನಾಲ್ಕೈದು ವಿಡಿಯೋಗಳಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ.
ಬಂಡೆಮಠದ ಸ್ವಾಮೀಜಿ ಪ್ರಕರಣ: ಡೆತ್ ನೋಟ್ನಲ್ಲಿ ಹನಿಟ್ರ್ಯಾಪ್ ಸುಳಿವು
ಮತ್ತೊಂದು ಮಠದ ಪೀಠಾಧ್ಯಕ್ಷ ಮಹಿಳೆಯನ್ನು ಮುಂದಿಟ್ಟುಕೊಂಡು ಮಠದ ಚುಕ್ಕಾಣೆ ಹಿಡಿಯಲು ಪ್ಲಾನ್ ರಚಿಸಿ ಶ್ರೀಗಳ ವಿರುದ್ಧ ಮಸಲತ್ತು ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಕಷ್ಟ ಹೇಳಿಕೊಂಡು ಸ್ವಾಮೀಜಿ ಸ್ನೇಹ ಬೆಳೆಸಿದ್ದ ಬೆಂಗಳೂರು ಮೂಲದ ಆ ಮಹಿಳೆ, ಸ್ವಾಮೀಜಿಯೊಂದಿಗೆ ಅನ್ಯೋನ್ಯತೆ ಬೆಳೆಸಿದ್ದಳು. ಬಸವಲಿಂಗ ಸ್ವಾಮೀಜಿ ಮಹಿಳೆಯ ಮಾತಿಗೆ ಮರುಳಾಗಿದ್ದರು. ಹಲವು ಬಾರಿ ಸ್ವಾಮೀಜಿ ಹಾಗೂ ಮಹಿಳೆ ನಡುವೆ ವಿಡಿಯೋ ಕಾಲ್ ಸಂಭಾಷಣೆ ನಡೆದಿದೆ. ಇದೀಗ ಮಹಿಳೆ ಮಾಡಿಕೊಂಡಿದ್ದ ಒಂದು ವಿಡಿಯೋ ರೆಕಾರ್ಡಿಂಗ್ ವೈರಲ್ಗೊಂಡಿದೆ.
ವಿಡಿಯೋ ಇರುವ ವಿಚಾರ ತಿಳಿದು ಖಿನ್ನತೆಗೆ ಒಳಗಾಗಿದ್ದ ಸ್ವಾಮೀಜಿ
ಬಂಡೆಮಠದ ಬಸವಲಿಂಗ ಶ್ರೀಗಳನ್ನ ಖೆಡ್ಡಾಗೆ ಕೆಡವಲು ಮಹಾ ಮಸಲತ್ತು ನಡೆದಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೇ ಒಂದಲ್ಲ. ಎರಡಲ್ಲ ಆರು ತಿಂಗಳಿನಿಂದ ಮಹಾ ಸಂಚು ರೂಪಿಸಿದ್ದರು. ಇನ್ನು ಮಹಿಳೆಯೊಂದಿಗೆ ಮಾತನಾಡಸಿದ್ದ ವಿಡಿಯೋ ಇರೋದನ್ನ 1ತಿಂಗಳ ಹಿಂದೆ ಶ್ರೀಗಳ ಗಮನಕ್ಕೆ ತರಲಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಬಸವಲಿಂಗ ಸ್ವಾಮೀಜಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಶ್ರೀಗಳು ಆತ್ಮಹತ್ಯೆಗೆ ಶರಣಾದ ಕೊಠಡಿಯಲ್ಲಿ ದೊರೆತ ಡೆತ್ನೋಟ್ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಅಲ್ಲದೇ ಡೆತ್ನೋಟ್ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ಆದರೆ ತನಿಖೆಯ ದೃಷ್ಟಿಯಿಂದ ಅವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ರಹಸ್ಯಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿ ಪೊಲೀಸ್
ಶ್ರೀಗಳು ಬಳಸುತ್ತಿದ್ದ 2 ಮೊಬೈಲ್ ಪೋನ್ಗಳನ್ಬು ವಶಕ್ಕೆ ಪಡೆದಿರುವ ಪೋಲಿಸರು, ಎರಡು ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಪ್ರಯೋಗಾಲಕ್ಕೆ ಕಳುಹಿಸಿದ್ದು, ಮೊಬೈಲ್ನಲ್ಲಿ ಅಡಕವಾಗಿರುವ ಇನ್ನಷ್ಟು ರಹಸ್ಯಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದಾರೆ. ಎಫ್ಎಸ್ಎಲ್ ವರದಿ ಬಂದ ನಂತರ ಎಲ್ಲಾ ಅಂತೆ ಕಂತೆಗಳಿಗೆ ಉತ್ತರ ದೊರೆಯಲಿದೆ
ಮಠದ ಆಸ್ತಿಗಾಗಿ ಒಳಸಂಚು ಶಂಕೆ
ಕಂಚುಗಲ್ ಬಂಡೆ ಮಠ ಸಾಮಾಜಿಕ ಕಾರ್ಯಗಳಿಂದ ಪ್ರಸಿದ್ಧಿ ಗಳಿಸಿತ್ತಲ್ಲದೇ, ಮಾಗಡಿ ಭಾಗದಲ್ಲಿ ದೊಡ್ಡ ಮಠವೆಂದೇ ಹೆಸರು ಗಳಿಸುವ ಜೊತೆಗೆ , ಮಠ 50 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಹಿನ್ನಲೆಯಲ್ಲಿ ಮಠದ ಆಸ್ತಿ ಮೇಲೆ ಕಣ್ಣು ಹಾಕಿದ್ದ ಮತ್ತೊಂದು ಮಠದ ಶ್ರೀಗಳು ಮಹಿಳೆಯನ್ನ ಬಳಸಿಕೊಂಡು ಬಸವಲಿಂಗ ಸ್ವಾಮೀಜಿಯನ್ನ ಪೀಠದಿಂದ ಕೆಳಗಿಳಿಸಲು ಸಂಚು ನಡೆಸಿದ್ದರು ಎಂಬ ಆರೋಪಗಳು ಸಹ ಕೇಳಿಬರುತ್ತಿವೆ.
ಡೆತ್ನೋಟ್ನಲ್ಲಿ ಫೋಟೋ ವೈರಲ್
ಈ ಬಗ್ಗೆ ಸ್ವತಃ ಬಸವಲಿಂಗ ಶ್ರೀಗಳು ತಮ್ಮ ಡೆತ್ನೋಟ್ನಲ್ಲಿ ಹಲವು ವಿಚಾರಗಳನ್ನ ಪ್ರಸ್ತಾಪ ಮಾಡಿದಲ್ಲದೇ ತೇಜೋವಧೆಗೆ ಹುನ್ನಾರ ನಡೆಸಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ವೈರಲ್ಗೊಂಡ ಡೆತ್ನೋಟ್ ನಕಲಿ ಎಂದಿರುವ ಪೊಲೀಸರು ಹ್ಯಾಂಡ್ ರೇಟಿಂಗ್ ಹಾಗೂ ಕೆಲವೊಂದು ಅಂಶಗಳಲ್ಲಿ ಸಾಮ್ಯತೆ ಇದೆ ಎಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ಇಡೀ ಪ್ರಕರಣವನ್ನ ಮುಚ್ಚಿ ಹಾಕಲು ಲಿಂಗಾಯತ ಸಮುದಾಯಕ್ಕೆ ಸೇರಿದ ಹಾಲಿ ಪ್ರಭಾವಿ ಸಚಿವರೊಬ್ಬರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ಪ್ರಕರಣ ಹಳ್ಳಹಿಡಿಯುವುದೇ ಎಂಬ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.