ತುರ್ತು ಪರಿಸ್ಥಿತಿಗೆ 45 ವರ್ಷಗಳು: ಬಿಜೆಪಿಯಿಂದ ಕರಾಳ ದಿನಾಚರಣೆ
ರಾಮನಗರ, ಜೂನ್ 25: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೆ ತರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದರ ಕರಾಳ ದಿನಗಳು ಗತಿಸಿ 45 ವರ್ಷಗಳಾಗಿದ್ದು, ಇಂದಿಗೂ ಆಚರಿಸುತ್ತಾ ಬಂದಿರುವುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ ತಿಳಿಸಿದರು.
Recommended Video
ರಾಮನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತುರ್ತುಪರಿಸ್ಥಿತಿ ಕರಾಳ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಅಲಹಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಜಾರಿಗೆ ತಂದ ಎಮೆರ್ಜೆನ್ಸಿ ಪತ್ರಿಕಾ ಸ್ವಾತಂತ್ರ್ಯ ಹರಣದ ಜೊತೆಗೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು ಎಂದು ವಾಗ್ದಾಳಿ ನಡೆಸಿದರು.
1975 ರಂದು ಇಂದಿರಾ ಗಾಂಧಿ ಅವರು ರಾತ್ರೋರಾತ್ರಿ ತುರ್ತುಪರಿಸ್ಥಿತಿ ಹೇರಿ ಅಕ್ರಮವಾಗಿ ಚುನಾವಣೆ ಗೆಲುವು ಪಡೆದಿದ್ದರು, ಅಲ್ಲದೆ ಅವರ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಅಂದಿನಿಂದ ಇಂದಿನವರೆಗೂ ಕರಾಳದಿನ ಆಚರಿಸುತ್ತಿದ್ದೇವೆ ಎಂದರು.

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಸಂಬಂಧ ಮಾತನಾಡಿದ ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ್, ಪರೀಕ್ಷೆಗಳು ಮುಗಿದ ಬಳಿಕ ರಾಜ್ಯ ಅಥವಾ ಪ್ರಾಂತ್ಯದ ರೂಪದಲ್ಲಿ ಮಾಡಬೇಕಾ ಎನ್ನುವ ವಿಚಾರವನ್ನು ರಾಜ್ಯ ಸರ್ಕಾರ ಸೂಕ್ತ ಚಿಂತನೆ ಮಾಡಿ ತೀರ್ಮಾನಿಸುತ್ತದೆ ಎಂದು ಹೇಳಿದರು.
ಕ್ವಾರಂಟೈನ್ ನಲ್ಲಿ ಸ್ವಲ್ಪ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸುತ್ತಿದ್ದು, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಕ್ವಾರಂಟೈನ್ ನಲ್ಲಿರುವವರಿಗೆ ವೈದ್ಯರ ಸಲಹೆ ಮೇರೆಗೆ ಆಹಾರ ನೀಡಲಾಗುತ್ತಿದೆ. ಎರಡು ತಿಂಗಳ ಹಿಂದೆ ನನ್ನ ಮಗಳು ಚೆನ್ನೈನಲ್ಲಿ ಕ್ವಾರಂಟೈನ್ ನಲ್ಲಿದ್ದರು. ಮಗಳು ಈಗ ಸೌಖ್ಯವಾಗಿದ್ದಾರೆ ಎಂದರು.
ರಾಮನಗರ ಜಿಲ್ಲಾ ಬಿಜೆಪಿಯಲ್ಲಿ ಅಧ್ಯಕ್ಷ ಗಾದಿಗೆ ಪೈಪೋಟಿ ಇಲ್ಲ, ಹಿಂದೆ ಕೂಡ ನಾನು ಜಿಲ್ಲಾಧ್ಯಕ್ಷ ಆಗಿದ್ದೆ, ನಮ್ಮಲ್ಲಿ ಹೈಕಮಾಂಡ್ ಆದೇಶದಂತೆ ಪಕ್ಷ ಸಂಘಟನೆ ಮಾಡುತ್ತೇವೆ. ಯಾರೇ ಅಧ್ಯಕ್ಷರಾದರೂ ಪಕ್ಷ ಬೆಳೆಸೋದಷ್ಟೇ ಗುರಿ. ಯಾವ ಗೊಂದಲವೂ ಇಲ್ಲವೆಂದರು.
ಕಳೆದ ಚುನಾವಣೆ ವೇಳೆ ಅವಕಾಶ ಬಿಟ್ಟುಕೊಡಿ ಎಂದಿದ್ದರು ಬಿಟ್ಟುಕೊಟ್ಟಿದ್ದೆ, ಜವಾಬ್ದಾರಿ ಈಗ ಕೊಟ್ಟಿದ್ದಾರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನೂತನವಾಗಿ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಹುಲಿವಾಡಿ ದೇವರಾಜ್ ತಿಳಿಸಿದರು.












Click it and Unblock the Notifications