Tungabhadra river: ಬತ್ತಿದ ತುಂಗಭದ್ರಾ ನದಿ, ಪುಣ್ಯಸ್ನಾನದಿಂದ ವಂಚಿತರಾದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಭಕ್ತರು
ರಾಯಚೂರು, ಆಗಸ್ಟ್, 17: ತುಂಗಭದ್ರಾ ನದಿಗೆ ಈ ಬಾರಿ ನೀರು ಹರಿದು ಬಾರದೇ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಭಕ್ತರು ಆರಾಧನೆ ವೇಳೆ ಪುಣ್ಯಸ್ನಾನದ ಭಾಗ್ಯದಿಂದ ವಂಚಿತರಾಗಲಿದ್ದಾರೆ.
ಶ್ರೀಮಠದ ಪಕ್ಕದಲ್ಲಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ನಂತರ ಭಕ್ತರು ರಾಯರ ದರ್ಶನ ಪಡೆಯುವುದು ವಾಡಿಕೆ. ಕಳೆದ ಒಂದು ತಿಂಗಳಿಂದ ನದಿ ಸಂಪೂರ್ಣ ಬತ್ತಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುವಂತೆ ನೀರಾವರಿ ಅಧಿಕಾರಿಗಳಿಗೆ ಶ್ರೀ ಮಠದ ವತಿಯಿಂದ ಮನವಿ ಮಾಡಲಾಗಿದೆ. ಮತ್ತೊಂದೆಡೆ ರಾಜಲಬಂಡಾ ತಿರುವು ನಾಲಾ ಯೋಜನೆಯ ಜಲಾಶಯದಲ್ಲೂ ನೀರಿನ ಸಂಗ್ರಹ ತಳಕಂಡಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ನದಿಯಲ್ಲಿ ನೀರಿಲ್ಲದ ಕಾರಣ ಶ್ರೀಮಠದಿಂದ ನದಿ ದಂಡೆಯಲ್ಲಿ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಲು ನಿರ್ಧರಿಸಿದೆ. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಭಾಗವಾಗಿ ಆಗಸ್ಟ್ 29ರಿಂದ ಸೆಪ್ಟೆಂಬರ್ 4ರವರೆಗೆ 'ಸಪ್ತರಾತ್ರೋತ್ಸವ' ನಿಮಿತ್ತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ಶ್ರೀ ಮಠದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್ ಅವರ ವಿಶೇಷ ಉಪಸ್ಥಿತಿಯಲ್ಲಿ ವಿದ್ವಾನ್ ರಾಮ ವಿಠಲಾಚಾರ್ಯ, ವಿದ್ವಾನ್ ಗರಿಕಿಪಟ್ಟಿ ನರಸಿಂಹ ರಾವ್, ಟಾಟಾ ಸಂಸ್ಥೆಯ ಕಾರ್ಯಾಧ್ಯಕ್ಷ ಎನ್.ಚಂದ್ರಶೇಖರ ಹಾಗೂ ಪೂರ್ಣ ವಿಶ್ವವಿದ್ಯಾಲಯ ಡಾ.ವಿಶ್ವನಾಥ್ ಡಿ.ಕಾರಟ್ ಅವರಿಗೆ 'ಶ್ರೀಗುರು ರಾಘವೇಂದ್ರ ಪ್ರಶಸ್ತಿ' ಪ್ರದಾನ ಮಾಡಲಾಗುತ್ತದೆ ಎಂದರು.
ಆರಾಧನಾ ಮಹೋತ್ಸವದ ವೇಳೆ ಪ್ರತಿದಿನ ಸಂಜೆ ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 7:30ಕ್ಕೆ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧನ್ಯೋತ್ಸವ, ಋುಗ್ವೇದ ನಿತ್ಯ ನೂತನ ಉಪಕರ್ಮ ನಡೆಯಲಿವೆ. ಆಗಸ್ಟ್ 30ರಂದು ಶಾಖೋತ್ಸವ ರಜತ ಮಂಟಪೋತ್ಸವ, ಯಜುರ್ವೇದ ನಿತ್ಯ ನೂತನ ಉಪಕರ್ಮ ನಡೆಯಲಿದೆ.
ಆಗಸ್ಟ್ 31ರಂದು ಪೂರ್ವಾರಾಧನಾ ರಜತಸಿಂಹ ವನೋತ್ಸವ, ಸೆಪ್ಟೆಂಬರ್ 1ರಂದು ಮಧ್ಯಾರಾಧನಾ ಮಹಾಪಂಚಾಮೃತ ಅಭಿಷೇಕ, ಸ್ವರ್ಣ ರಥೋತ್ಸವ, ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀರಾಯರ ಮೂಲ ಬೃಂದಾವನಕ್ಕೆ ಶ್ರೀ ಶ್ರೀನಿವಾಸದೇವರ ಶೇಷವಸ್ತ್ರ ಸಮರ್ಪಿಸಲಾಗುತ್ತದೆ. ಪ್ರಾಕಾರದಲ್ಲಿ ಸುವರ್ಣ ರಥೋತ್ಸವವು ನಡೆಯಲಿದೆ ಎಂದು ವಿವರಿಸಿದರು.

ಸೆಪ್ಟೇಂಬರ್ 2ರಂದು ಉತ್ತರಾರಾಧನಾ ನಿಮಿತ್ತ ಬೆಳಗ್ಗೆ 10ಕ್ಕೆ ಶ್ರೀಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಸೆಪ್ಟೆಂಬರ್ 3ರಂದು ಶ್ರೀಸುಜ್ಞಾನೇಂದ್ರತೀರ್ಥರ ಆರಾಧನೆ ಹಾಗೂ ಸಂಜೆ ವೇಳೆ ಪ್ರಾಕಾರದಲ್ಲಿಅಶ್ವವಾಹನೋತ್ಸವವು ಜರುಗಲಿವೆ. ಸೆಪ್ಟೆಂಬರ್ 4ರಂದು ಸಂಜೆ ಶ್ರೀಮಠದ ಪ್ರಾಕಾರದಲ್ಲಿ ಸರ್ವಸಮರ್ಪಣೋತ್ಸವ ಹಾಗೂ ಆರಾಧನಾ ಸಪ್ತರಾತ್ರೋತ್ಸವದ ಸಮಾರೋಪ ನಡೆಯಲಿದೆ.
ಶ್ರೀಮಠದ ಪ್ರಾಕಾರದಲ್ಲಿ ನಿರ್ಮಿಸಿರುವ ನರಹರಿತೀರ್ಥ ವಸತಿ ಗೃಹ, ಶ್ರೀಮೂಲರಾಮ ವಸತಿ ಗೃಹ, ಮ್ಯೂಸಿಯಂ ಲೋಕಾರ್ಪಣೆ ಮಾಡಲಾಗುವುದು. ಎಲ್ಲಭಕ್ತರಿಗೆ ತೀರ್ಥಪ್ರಸಾದ ವಿತರಣೆ ಸುಗಮಗೊಳಿಸುವ ಜೊತೆಗೆ ಹೆಚ್ಚಿನ ಪರಿಮಳ ಪ್ರಸಾದ ವಿತರಣಾ ಕೌಂಟರ್ಗಳನ್ನು ತೆರೆಯಲಾಗುವುದು. ಇನ್ನು ಆರೋಗ್ಯ ಶಾಲೆಯ ಜೊತೆಗೆ ಮಠದ ಮುಂಭಾಗದಲ್ಲಿ ತಾತ್ಕಾಲಿಕ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಶ್ರೀಗಳು ತಿಳಿಸಿದರು.
ಆರಾಧನಾ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಅಧಿತ್ಯನಾಥ ಅವರನ್ನು ಆಹ್ವಾನಿಸಲಾಗಿದ್ದು, ಅವರು ಬರುವ ನಿರೀಕ್ಷೆಯಿದೆ. ಈ ವೇಳೆ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ಹಾಗೂ ತುಂಗಭದ್ರಾ ನದಿಗೆ ನೀರು ಬಿಡಲು ನೀರಾವರಿ ಅಧಿಕಾರಿಗಳಿಗೆ ಮಠದ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.












Click it and Unblock the Notifications