ಪ್ರವಾದಿ ವಿರುದ್ಧ ಹೇಳಿಕೆ: ರಾಯಚೂರಿನಲ್ಲಿ ಗುಂಪುಗಳ ನಡುವೆ ಘರ್ಷಣೆ
ರಾಯಚೂರು, ಜುಲೈ 18: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಸಂಬಂಧ ಸಿಂಧನೂರು ತಾಲೂಕಿನ ಆರ್ಎಚ್ (ಬಂಗಾಳಿ) ಕ್ಯಾಂಪ್-2ರಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ 35 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಿಂಧನೂರಿನಲ್ಲಿ ಎರಡು ಸಮುದಾಯದ ಜನರ ನಡುವೆ ಗುಂಪು ಘರ್ಷಣೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಆತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳೆಯೊಬ್ಬರು ಶನಿವಾರ Instagram ನಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು. ಆಗ ಸಿಂಧನೂರಿನ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಗುಂಪು ಆ ಪೋಸ್ಟ್ ಮಾಡಿದ ವ್ಯಕ್ತಿಯ ಬಗ್ಗೆ ವಿಚಾರಿಸಲು ಗ್ರಾಮಕ್ಕೆ ತೆರಳಿದೆ. ಗ್ರಾಮದ ಹಿರಿಯರು ಮಹಿಳೆಗೆ ಎಚ್ಚರಿಕೆ ನೀಡಿದ ಬಳಿಕ ಸಿಂಧನೂರಿಗೆ ವಾಪಸಾಗಿದ್ದರು.
ಆದರೆ ಭಾನುವಾರ ರಾತ್ರಿ ಗ್ರಾಮಕ್ಕೆ ತೆರಳಿದ ಗುಂಪು ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಜಮಾಯಿಸಿ ಪ್ರವಾದಿ ಪರವಾಗಿ ಘೋಷಣೆಗಳನ್ನು ಕೂಗಿದರು. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ, ನಡೆದು ಜೋರಾಗಿ ಘರ್ಷಣೆ ನಡೆಯಿತು. ಆಗ ಸ್ಥಳಕ್ಕೆ ಬಂದ ಪೋಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ವೃತ್ತ ನಿರೀಕ್ಷಕ ರವಿಕುಮಾರ ಕಪ್ಪತ್ತನವರ್ ನೇತೃತ್ವದಲ್ಲಿ 110 ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ವೇಳೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡರಾದ ಕೊಲ್ಲಾ ಶೇಷಗಿರಿರಾವ್, ಮಧ್ವರಾಜ್ ಆಚಾರ್, ವಿಎಚ್ಪಿ ಮುಖಂಡ ಪ್ರಹ್ಲಾದ್ ಕೆಂಗಲ್ ಇತರರು ಗ್ರಾಮಕ್ಕೆ ಭೇಟಿ ನೀಡಿದ್ದರು.
ಏತನ್ಮಧ್ಯೆ, ಆರ್ಎಚ್ 2 ಕ್ಯಾಂಪ್ನಲ್ಲಿರುವ ದೇವಸ್ಥಾನಕ್ಕೆ ನುಗ್ಗಿ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಆರ್ಎಚ್ 1, 2, 3 ಮತ್ತು 4 ಬೆಂಗಾಳಿ ಬಡಾವಣೆ ನಿವಾಸಿಗಳು ಸೋಮವಾರ ಮಿನಿ ವಿಧಾನಸೌಧ ಕಚೇರಿ ಎದುರು ಪ್ರತಿಭಟನೆ ನಡೆಸಿದರು.












Click it and Unblock the Notifications