ಜೂ. 22ರಿಂದ ಮಂತ್ರಾಲಯಕ್ಕೆ ಭೇಟಿ ಕೊಡಿ, ಸಮಯದ ವಿವರ
ರಾಯಚೂರು, ಜೂನ್ 17; ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಿಹಿಸುದ್ದಿ. ಜೂನ್ 22ರಿಂದ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರು ಈ ಕುರಿತು ಗುರುವಾರ ಆದೇಶ ಹೊರಡಿಸಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ಭಕ್ತರು ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.
ಭಕ್ತರು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯ ತನಕ ಮತ್ತು ಸಂಜೆ 4 ರಿಂದ 9 ಗಂಟೆಯ ತನಕ ದರ್ಶನ ಪಡೆಯಲು ಅವಕಾಶವಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪತ್ರಿಕಾ ಪ್ರಕಟಣೆ ಹೇಳಿದೆ.

ಪ್ರತ್ಯಕ್ಷವಾಗಿ ಮಂತ್ರಾಲಯ ಕ್ಷೇತ್ರಕ್ಕೆ ಬರಲಾಗದವರು ಕೆಳಕಂಡ ಲಿಂಕ್ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ದರ್ಶನ ಪಡೆದು ಸೇವೆಗಳನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಲಾಗಿದೆ. www.srsmatha.org/online
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠವಿದೆ. ಕರ್ನಾಟಕದ ರಾಯಚೂರು ಮೂಲಕ ರಾಜ್ಯದ ಅಪಾರ ಭಕ್ತರು ಮಠಕ್ಕೆ ಭೇಟಿ ನೀಡಿ ರಾಯರ ದರ್ಶನವನ್ನು ಪಡೆಯುತ್ತಾರೆ.
ಕರ್ನಾಟಕದಿಂದ ಕೆಎಸ್ಆರ್ಟಿಸಿ ಮತ್ತು ಹಲವಾರು ಖಾಸಗಿ ಬಸ್ಗಳು ಮಂತ್ರಾಲಯಕ್ಕೆ ಸಂಚಾರ ನಡೆಸುತ್ತವೆ. ರಾಯಚೂರು ತನಕ ರೈಲಿನ ಮೂಲಕ ಸಾಗಿ ಅಲ್ಲಿಂದ ಮಂತ್ರಾಲಯಕ್ಕೆ ಹೋಗಲು ಸಹ ವ್ಯವಸ್ಥೆ ಇದೆ.
ಮೇ 1ರಿಂದ ಪ್ರವೇಶ ನಿಷೇಧ; ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಮೇ 1ರಿಂದ ಜಾರಿಗೆ ಬರುವಂತೆ ಮಂತ್ರಾಲಯದಲ್ಲಿ ಸ್ಥಳೀಯ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು.
ಮಂತ್ರಾಲಯ ಮಠದಲ್ಲಿ ಭಕ್ತರ ಹಿತದೃಷ್ಟಿಯಿಂದ ಸ್ಥಳೀಯ ಲಾಕ್ ಡೌನ್ ಘೋಷಣೆ ಮಾಡಿ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಭಕ್ತರ ಭೇಟಿಯನ್ನು ನಿರ್ಬಂಧಿಸಲಾಗಿತ್ತು.
ಲಾಕ್ಡೌನ್ ಅವಧಿಯಲ್ಲಿ ಭಕ್ತರಿಗೆ ಪ್ರತ್ಯಕ್ಷ ದರ್ಶನ, ತೀರ್ಥ, ಪ್ರಸಾದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಮುಂದಿನ ಸೂಚನೆ ತನಕ ಭಕ್ತರು ಮಂತ್ರಾಲಯಕ್ಕೆ ಬರಬಾರದು ಎಂದು ಮನವಿ ಮಾಡಲಾಗಿತ್ತು.












Click it and Unblock the Notifications