ರಾಯಚೂರು ಜಿಟಿಜಿಟಿ ಮಳೆ: ಈರುಳ್ಳಿ ಬೆಳೆಗೆ ಕಳೆ, ಬಿತ್ತನೆ ಆರಂಭಿಸಿದ ರೈತರು
ರಾಯಚೂರು, ಆಗಸ್ಟ್ 1: ಜಿಲ್ಲೆಯಾದ್ಯಂತ ಕಳೆದ ಎಂಟು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ರೈತರು ಈರುಳ್ಳಿ ಬಿತ್ತನೆಗೆ ಖುಷಿಯಿಂದಲೇ ಅಣಿಯಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ.
ರಾಯಚೂರು, ಸಿಂಧನೂರು, ದೇವದುರ್ಗ ಹಾಗೂ ಮಾನ್ವಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ತೋಟಗಾರಿಕೆ ಇಲಾಖೆ ಪ್ರಕಾರ ಸುಮಾರು 2,500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಗುರಿ ಹೊಂದಲಾಗಿದ್ದು, ಜಿಲ್ಲೆಯ ರೈತರು ನಿರೀಕ್ಷೆ ಮೀರಿ ಬಿತ್ತನೆ ಮಾಡುವ ಲಕ್ಷಣಗಳು ಕಂಡು ಬಂದಿವೆ.

ಜಿಲ್ಲೆಯ ಕೆಲ ರೈತರು ಹೊರ ರಾಜ್ಯಗಳಿಂದ ಈರುಳ್ಳಿ ಸಸಿ ತಂದು ನಾಟಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. 2016ರಲ್ಲಿ ಕ್ವಿಂಟಾಲ್ಗೆ 12 ಸಾವಿರ ರೂಪಾಯಿ ದರ ಸಿಕ್ಕಿತ್ತು. ಆ ನಂತರ ಯಾವ ವರ್ಷವೂ ಈರುಳ್ಳಿಗೆ ಒಳ್ಳೆಯ ದರ ಸಿಕ್ಕಿಲ್ಲ. ಸಿಕ್ಕರೂ ಅಲ್ಪಸ್ಪಲ್ಪ ಮಾತ್ರ. ಹಲವು ಬಾರಿ ಮಳೆ ಇಲ್ಲದೆ ಬೆಳೆ ಕೈಗೆ ಸಿಗದೇ ಒದ್ದಾಡಿದ್ದೇವೆ. ಕಳೆದ ವರ್ಷ ಜಿಲ್ಲೆಯಲ್ಲಿ ಶೇ.10ರಷ್ಟು ಮಾತ್ರ ಈರುಳ್ಳಿ ಬೆಳೆ ಕೈಗೆಟುಕಿತ್ತು.
ಮಳೆ ಕೈ ಕೊಟ್ಟಾಗ ಬೆಳೆ ಉಳಿಸಿಕೊಳ್ಳುವ ಧಾವಂತದಲ್ಲಿ ರೈತರು ಕೊರೆಯಿಸಿದ್ದ ಬೋರ್ವೆಲ್ಗಳ ಲೆಕ್ಕವೇ ಇಲ್ಲ. ಮಾಡಿದ ಸಾಲ, ಕಟ್ಟಿದ ಬಡ್ಡ, ಸಾಲ ತೀರಿಸಲು ಆಗುತ್ತದೆಯೋ ಇಲ್ಲವೋ ಎನ್ನುವ ಆತಂಕ. ಹೀಗೆ ಸದಾ ಆತಂಕದಲ್ಲೇ ಕಾಲ ಕಳೆದಿದ್ದೇವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈರುಳ್ಳಿ ಬೆಳೆಯುವುದೆಂದರೆ ಮಗು ಸಾಕಿದಂತೆ. ಪ್ರತಿ ಹಂತದಲ್ಲೂ ಕಾಳಜಿ ವಹಿಸಬೇಕು. ಮೊದಲೆಲ್ಲ ಒಂದೆರಡು ಕಳೆ, ಒಂದು ಬಾರಿ ಔಷಧ ಸಿಂಪಡಿಸಿದರೆ ಸಾಕಾಗುತ್ತಿತ್ತು. ಈಗ ಮೂರ್ನಾಲ್ಕು ಬಾರಿ ಕಳೆ ನಿರ್ವಹಣೆ , ಔಷಧ ಸಿಂಪಡಿಸಬೇಕು. ಕೂಲಿ ಕಾರ್ಮಿಕರನ್ನು ಹೆಚ್ಚು ಅವಲಂಬಿಸಬೇಕು. ಒಂದು ಎಕರೆಗೆ 30 ರಿಂದ 40 ಸಾವಿರ ರೂಪಾಯಿ ವರೆಗೆ ಖರ್ಚಾಗುತ್ತದೆ. ಕಟಾವು ಮುಗಿದು, ಮಾರುಕಟ್ಟೆ ಸೇರಿ ಟೆಂಡರ್ ಮುಗಿಯುವವರೆಗೆ ಆತಂಕ ಇದ್ದೇ ಇರುತ್ತದೆ. ಆದರೆ ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿ ಇದ್ದೇವೆ ಎಂದು ರೈತರು ಹೇಳಿದ್ದಾರೆ.

ಜಿಲ್ಲೆಯಾದ್ಯಂತ ಜುಲೈ 20ರಿಂದ 27 ರವರೆಗೆ ನಿರಂತರ ಜಿಟಿಜಿಟಿ ಮಳೆಯಾಗಿದ್ದು, ದೇವದುರ್ಗ ತಾಲೂಕಿನಲ್ಲಿ 34.1 ಮಿ.ಮೀ.ಪೈಕಿ 67.8ಮಿ.ಮೀ. ಮಳೆಯಾಗಿದೆ. ಅದೇ ರೀತಿ ಲಿಂಗಸೂಗೂರಿನಲ್ಲಿ 24.4ಮಿ.ಮೀ. ಪೈಕಿ 56.1ಮಿ.ಮೀ., ಮಾನ್ವಿಯಲ್ಲಿ 23.6ಮಿ.ಮೀ. ಪೈಕಿ 55.6ಮಿ.ಮೀ. , ರಾಯಚೂರುನಲ್ಲಿ 29.4 ಮಿ.ಮೀ ಪೈಕಿ 73.4 ಮಿ.ಮೀ. ಸಿಂಧನೂರುನಲ್ಲಿ 23.4ಮಿ.ಮೀ. ಪೈಕಿ 43.7 ಮಿ.ಮೀ. ಮಸ್ಕಿಯಲ್ಲಿ 17.5ಮಿ.ಮೀ ಪೈಕಿ 49.7ಮಿ.ಮೀ ಹಾಗೂ ಸಿರವಾರದಲ್ಲಿ 23.1ಮಿ.ಮೀ ಪೈಕಿ 63.5ಮಿ.ಮೀ ಮಳೆಯಾಗಿದೆ.
ಈ ಬಾರಿ ಮುಂಗಾರು ಕೈ ಕೊಟ್ಟಿತು ಎನ್ನುವಷ್ಟರಲ್ಲಿ ಸುರಿದ ಉತ್ತಮ ಮಳೆ ರೈತರಲ್ಲಿ ಹುರುಪು ತಂದಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ನಾಟಿಗೆ ಮುಂದಾಗಿದ್ದು, ಈಗಾಗಲೇ ಸುಮಾರು 500 ಹೆಕ್ಟೇರ್ನಲ್ಲಿ ಈರುಳ್ಳಿ ನಾಟಿ ಮಾಡಿದ್ದಾರೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಹಮದ್ ಅಲಿ ಹೇಳಿದರು.
ಮುಂಗಾರು ಹಂಗಾಮಿನಲ್ಲಿ ಬೆಳೆದ ಈರುಳ್ಳಿ ಬೆಳೆಗೆ ಉತ್ತಮ ಲಾಭ ದೊರೆಯುವ ನಿರೀಕ್ಷೆಯಿದೆ. 2016ರಲ್ಲಿ ದೊರೆತ ಲಾಭ ಮತ್ತೆ ಜಿಲ್ಲೆಯ ರೈತರಿಗೆ ದೊರೆತಿಲ್ಲ. ಈ ಬಾರಿ ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ ಎಂದು ಈರುಳ್ಳಿ ಬೆಳೆಗಾರ ಹುಲಿಗೆಪ್ಪ ಹೇಳಿದ್ದಾರೆ.












Click it and Unblock the Notifications