ಕೃಷ್ಣಾ ನದಿ ತೀರದ ಗ್ರಾಮಗಳ ಜನರಿಗೆ ಪ್ರತಿವರ್ಷ ಪ್ರವಾಹದ ಭೀತಿ
ರಾಯಚೂರು, ಜುಲೈ 13: ರಾಯಚೂರು ಗ್ರಾಮೀಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕೃಷ್ಣಾನದಿ ಮತ್ತು ತುಂಗಭದ್ರಾನದಿಗಳ ತಟದಲ್ಲಿರುವ ಗ್ರಾಮಗಳ ಸ್ಥಳಾಂತರ ವಿಷಯ ಪ್ರವಾಹ ಬಂದಾಗ ಮಾತ್ರ ಮುನ್ನೆಲೆಗೆ ಬರುತ್ತದೆ. ಇದಾದ ನಂತರ ಮತ್ತೆ ನೆನೆಗುದಿಗೆ ಬೀಳುವುದು ಸಾಮಾನ್ಯವಾಗಿದೆ. ಪ್ರವಾಹ ಬಂದಾಗ ಮಾತ್ರ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಸ್ಥಳಾಂತರದ ಭರವಸೆ ಕೊಡುತ್ತಾರೆ.
ಅನಂತರ ಅಧಿಕಾರಿಗಳು, ಜನರು ಮರೆತು ಬಿಡುತ್ತಾರೆ. ಇದರಿಂದ ಹಲವು ವರ್ಷಗಳಾದರೂ ಈ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕೃಷ್ಣಾನದಿ ತಟದ ಗ್ರಾಮಗಳಾದ ಗುರ್ಜಾಪುರ, ಅರಷಣಿಗಿ, ಕುರ್ವಕುಲಾ, ಕುರ್ವಕುಂದಾ, ಬುರ್ದಿಪಾಡ, ಆತ್ಕೂರು, ಡಿ.ರಾಂಪುರ ಇನ್ನಿತರ ಗ್ರಾಮಗಳ ಜನರು ಪ್ರವಾಹದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಇವರ ನೋವಿಗೆ ಕೊನೆಯೇ ಇಲ್ಲದಂತೆ ಆಗಿದೆ.
ಕೃಷ್ಣಾನದಿಯಲ್ಲಿ ಪ್ರತಿವರ್ಷವೂ ಪ್ರವಾಹ ಉಂಟಾಗುತ್ತಿದೆ. ಮಳೆಗಾಲದಲ್ಲಿ ಮಹಾರಾಷ್ಟ್ರ ರಾಜ್ಯದ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗಳಿಗೆ ಬಿಡುವುದರಿಂದ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗುತ್ತದೆ. ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವುದರಿಂದ ನದಿ ಭರ್ತಿಯಾಗಿ ಅಕ್ಕಪಕ್ಕದ ಗ್ರಾಮದ ಜಮೀನುಗಳಿಗೆ ನೀರು ನುಗ್ಗುತ್ತದೆ.
ಕೃಷ್ಣಾ ಮೇಲ್ದಂಡೆ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವ ಕಾರಣ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ಸೋಮವಾರ ಸುಮಾರು 1 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ಇಂದಿಗೂ ಭರವಸೆಯಾಗೇ ಉಳಿದಿವೆ
2009ರಲ್ಲಿ ಭೀಕರ ಪ್ರವಾಹ ಬಂದಾಗ ಕೃಷ್ಣಾನದಿ ಪಾತ್ರದ ಗ್ರಾಮಗಳು ತತ್ತರಿಸಿದ್ದವು. ಆಗಲೇ ಸ್ಥಳಾಂತರ ಮಾಡುವ ಮಾತು ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಕೇಳಿ ಬಂದಿದ್ದವು. ಆದರೆ ಆ ಮಾತು ಇಂದಿಗೂ ಭರವಸೆಯಾಗೇ ಉಳಿದಿವೆ.
"2009ರ ಪ್ರವಾಹದಿಂದ ಗುರ್ಜಾಪುರ, ಕುರ್ವಕುಲಾ, ಕುರ್ವಕುಂದ ಗ್ರಾಮಗಳ ಸ್ಥಳಾಂತರ ಮಾಡಲು ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿದ್ದರು. ಆದರೆ ಈಗ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರವಾಹ ಬಂದಾಗ ಮಾತ್ರ ಸ್ಥಳಾಂತರ ನೆನಪಾಗುತ್ತದೆ. ಪ್ರವಾಹ ಕುಗ್ಗಿದಾಗ ಮರೆತು ಬಿಡುತ್ತಾರೆ. ಇದರಿಂದ ಗ್ರಾಮಗಳ ಜನರು ಭಯದ ವಾತಾವರಣದಲ್ಲಿಯೇ ಬದುಕುತ್ತಿದ್ದಾರೆ" ಎನ್ನುತ್ತಾರೆ ಧರ್ಮರೆಡ್ಡಿ ಬುರ್ದಿಪಾಡ.
ರಾಯಚೂರು: 'ಮಹಾ'ಮಳೆ, ನಾರಾಯಣಪುರ ಜಲಾಶಯ ಭಾಗದ ನಿವಾಸಿಗಳಿಗೆ ಪ್ರವಾಹ ಭೀತಿ
ಅಕ್ಕಪಕ್ಕದ ಗ್ರಾಮದ ಜಮೀನುಗಳಿಗೆ ನೀರು
"2019ರಲ್ಲಿ ಕೃಷ್ಣಾನದಿಯಲ್ಲಿ ಭೀಕರ ಪ್ರವಾಹ ಉಂಟಾಗಿ ಬಿತ್ತನೆ ಮಾಡಿದ ಬೆಳೆಯಲ್ಲ ಹಾಳಾಗಿತ್ತು. ಹತ್ತಿ, ಭತ್ತ ಬೆಳೆ ನಷ್ಟವುಂಟಾಗಿ ಸಾವಿರಾರು ರೈತರ ಸಾಲ ಮತ್ತಷ್ಟು ಹೆಚ್ಚಾಗಿತ್ತು. ನಮ್ಮ ಗ್ರಾಮಕ್ಕೆ ಪ್ರವಾಹ ಬಂದಾಗ ಮಾತ್ರ ಅಧಿಕಾರಿಗಳ ದಂಡು ಬರುತ್ತದೆ. ಕಾಳಜಿ ಕೇಂದ್ರ ಸ್ಥಾಪನೆ ಮಾಡುತ್ತಾರೆ. ಪ್ರವಾಹ ಇಳಿಮುಖವಾದಾಗ ನಾವು ಮತ್ತೆ ಊರು ಸೇರುತ್ತೇವೆ. ಮತ್ತೆ ಪ್ರವಾಹ ಬಂದಾಗ ಸರ್ಕರದವರು ಶಾಲೆಗಳಲ್ಲಿ ಕೇಂದ್ರ ತೆರೆಯುತ್ತಾರೆ. ಬರುವುದು, ತೆರಳುವುದು ಸಾಮಾನ್ಯವಾಗಿದೆ. ಪ್ರವಾಹದಲ್ಲಿ ಮನುಷ್ಯರು ಹೇಗೋ ಪಾರಾಗುತ್ತೇವೆ. ಆದರೆ ಜಾನುವಾರುಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಶಾಶ್ವತ ಕ್ರಮ ಕೈಗೊಳ್ಳಬೇಕು" ಎಂದು ಗುರ್ಜಾಪುರ ಗ್ರಾಮದ ವಿಶ್ವಾನಾಥ ಆಗ್ರಹಿಸುತ್ತಾರೆ.
ನಾರಾಯಣಪುರ ಜಲಾಶಯ
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ಸೋಮವಾರ ಸುಮಾರು 1 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. 33 ಟಿಎಂಸಿ ಅಡಿ ಸಾಮರ್ಥ್ಯದ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ಸದ್ಯ 28.53 ಟಿಎಂಸಿ ಅಡಿ (491.17ಮೀಟರ್) ನೀರಿನ ಸಂಗ್ರಹವಿದೆ. ಒಳಹರಿವು ಸದ್ಯ 4 ಸಾವಿರ ಕ್ಯೂಸೆಕ್ ಇದೆ.
ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿರುವ ಕಾರಣ ಸೋಮವಾರ ಮಧ್ಯಾಹ್ನ 12ಗಂಟೆಗೆ ಎರಡು ಗೇಟ್ಗಳ ಮೂಲಕ 1 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಕಾರಣ 123 ಟಿಎಂಸಿ (519.60ಮೀಟರ್) ಅಡಿ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಸದ್ಯ 83.85 ಟಿಎಂಸಿ ಅಡಿ (516.95 ಮೀಟರ್) ನೀರಿನ ಸಂಗ್ರಹವಿದೆ. 81,900 ಕ್ಯೂಸೆಕ್ ಒಳಹರಿವು ಇದೆ.
ಡಂಗೂರ ಸಾರುವ ಮೂಲಕ ಎಚ್ಚರಿಕೆ
ನಾರಾಯಣಪುರ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು, ಒಂದೆರಡು ದಿನಗಳಲ್ಲಿ ಸುಮಾರು 30ಸಾವಿರ ಕ್ಯೂಸೆಕ್ ನೀರು ಹೊರಬಿಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಗತ್ಯಕ್ರಮ ಕೈಗೊಂಡು ನದಿದಂಡೆ ಜನರಿಗೆ ಜಾಗೃತಿ ಮೂಡಿಸಿ ನದಿಗೆ ಇಳಿಯದಂತೆ ಡಂಗೂರ ಸಾರಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯಿತಿಯಿಂದ ನದಿದಂಡೆ ಗ್ರಾಮಗಳ ಜನರಿಗೆ ಡಂಗೂರ ಸಾರುತ್ತಿದ್ದು, ನದಿಗೆ ಇಳಿಯದಂತೆ ಎಚ್ಚರಿಕೆವಹಿಸಲಾಗಿದೆ. ಪೊಲೀಸ್ ಇಲಾಖೆ, ಕಂದಾಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ತುರ್ತು ಕ್ರಮಕೈಗೊಳ್ಳಲು ಸೂಚಿಸಲಾಗಿದೆ.