ರಾಯಚೂರಿನಲ್ಲಿ ರಸ್ತೆಗಿಳಿದ ದುರಸ್ತಿಗೆ ಬಂದಿರುವ ಬಸ್ಗಳು, ಪ್ರಯಾಣಿಕರಿಗೆ ಆತಂಕ
ರಾಯಚೂರು, ಅಕ್ಟೋಬರ್, 29: ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಹಳೇ ಹಾಗೂ ದುರಸ್ಥಿಗೆ ಬಂದಿರುವ ಬಸ್ಗಳನ್ನೇ ಓಡಿಸಲಾಗುತ್ತಿದೆ. ದೂರದ ಊರುಗಳಿಗೆ ತೆರಳುವ ಜನರು ದುರಸ್ತಿಗೆ ಬಂದಿರುವ ಬಸ್ಗಳಲ್ಲಿಯೇ ಪ್ರಯಾಣ ಮಾಡುವ ಪರಿಸ್ಥಿತಿ ಎದುರಾಗಿದ್ದು, ದಾರಿ ಮಧ್ಯೆದಲ್ಲಿ ಬಸ್ ಎಲ್ಲಿ ನಿಲ್ಲುತ್ತದೆ ಎನ್ನುವ ಆತಂಕ ಪ್ರಯಾಣಿಕರದ್ದಾಗಿದೆ.
ದುರಸ್ತಿಗೆ ಬಂದಿರುವ ಬಸ್ ರಸ್ತೆಯಲ್ಲಿ ಕೆಟ್ಟು ನಿಂತು ಸರಿಯಾದ ಸಮಯಕ್ಕೆ ಆಗಮಿಸದೇ ಇರುವ ಉದಾಹರಣೆಗಳಿವೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಕಾಲೇಜು ಮತ್ತು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪ್ರತಿನಿತ್ಯ ತೊಂದರೆ ಎದುರಿಸುವಂತಾಗಿದೆ. ಸರಿಯಾದ ಹಾಗೂ ಸುರಕ್ಷಿತ ಬಸ್ ಸಂಚಾರಕ್ಕೆ ಆದ್ಯತೆ ನೀಡುವಂತೆ ಪ್ರಯಾಣಿಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಈವರೆಗೂ ಇತ್ತ ಗಮನಹರಿಸಿಲ್ಲ. ಜಿಲ್ಲೆಯಲ್ಲಿರುವ ಎಲ್ಲ ಡಿಪೋಗಳಲ್ಲಿ ದುರಸ್ತಿಗೆ ಬಂದಿರುವ ಬಸ್ಗಳೇ ತುಂಬಿವೆ. ಡಿಪೋಕ್ಕೆ ಭೇಟಿ ನೀಡಿದರೆ ಹೊಸ ಬಸ್ಗಳು ಕಾಣುವುದೇ ಅಪರೂಪವಾಗಿದೆ. ಗುಜರಿಗೆ ಹೋಗುವ ಬಸ್ಗಳನ್ನೇ ರಿಪೇರಿ ಮಾಡಿ ಓಡಿಸಲಾಗುತ್ತದೆ. ಆದ್ದರಿಂದ ಈ ಬಸ್ಗಳು ಎಲ್ಲೆಂದರಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಇದರಿಂದ ಬೇಸತ್ತ ಪ್ರಯಾಣಿಕರು ಡಿಪೋ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ದುರಸ್ತಿಗೆ ಬಂದಿರುವ ಬಸ್ಗಳು
ನಗರದಲ್ಲಿ ಎಲ್ಲಿ ನೋಡಿದರೂ ಒಡೆದ ಗ್ಲಾಸ್, ಮುರಿದ ಕುರ್ಚಿ ಮತ್ತು ತುಕ್ಕು ಹಿಡಿದ ಬಸ್ಗಳೇ ಸಂಚರಿಸುತ್ತವೆ. ಮುಂಭಾಗ ಮತ್ತು ಹಿಂಭಾಗ ಹಾಳಾಗಿರುವ ಬಸ್ಗಳು ಕಂಡುಬರುತ್ತವೆ. ಇಂತಹ ಬಸ್ಗಳನ್ನು ಹತ್ತಿ ಊರಿಗೆ ಹೋಗಲು ಹೆದರಿಕೆ ಆಗುತ್ತದೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಒಂದೇ ಒಂದು ಹೊಸ ಬಸ್ ಖರೀದಿಸಿಲ್ಲ. ಸಾರಿಗೆ ಸಚಿವ ಶ್ರೀರಾಮುಲು ಯಾವುದೇ ಕಾರ್ಯಕ್ರಮಕ್ಕೆ ಬಂದಾಗ ಎಚ್ಕೆಆರ್ಡಿಬಿ ಅನುದಾನದ ಅಡಿ ಹೊಸ ಬಸ್ ಖರೀದಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಒಂದು ಹೊಸ ಬಸ್ ಖರೀದಿಸಿಲ್ಲ. ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಕೊರತೆಯಿದೆ. ಇದರಿಂದ ಪ್ರಸ್ತುತ ಸಿಬ್ಬಂದಿಗೆ ಹೆಚ್ಚಿನ ಕೆಲಸ ನೀಡುತ್ತಿದ್ದು, ಈ ಒತ್ತಡದಿಂದ ಅಪಘಾತಗಳು ಹೆಚ್ಚಾಗಿವೆ.

ಅಪಘಾತಕ್ಕೀಡಾಗಿದ್ದ 6 ಬಸ್ಗಳು
ಹೀಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಚಿವರು, ಹೊಸ ಬಸ್ ಹಾಗೂ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಬೇಕಾಗಿದೆ. ರಾಯಚೂರು ಜಿಲ್ಲೆಯಲ್ಲಿರುವ 7ರಲ್ಲಿ ಒಂದು ಡಿಪೋ ಬಂದ್ ಮಾಡಲಾಗಿದ್ದು, ಪ್ರಸ್ತುತ 6 ಡಿಪೋಗಳು ಕಾರ್ಯನಿರ್ವಹಿಸುತ್ತವೆ. ಒಟ್ಟು 600 ಬಸ್ಗಳಿದ್ದು, ಇದರಲ್ಲಿ 150ಕ್ಕೂ ಹೆಚ್ಚು ಬಸ್ಗಳು ದುರಸ್ತಿ ಹಂತಕ್ಕೆ ತಲುಪಿವೆ. ಜಿಲ್ಲೆಯಲ್ಲಿ ಒಟ್ಟು 600 ಬಸ್ಗಳಿದ್ದು, ಅದರಲ್ಲಿ ಶೇಕಡಾ 30ಕ್ಕೂ ಹೆಚ್ಚು ಬಸ್ಗಳು ರಸ್ತೆಯ ಮೇಲೆ ಸಂಚರಿಸಲು ಅನರ್ಹವಾಗಿವೆ ಎಂದು ಅಧಿಕಾರಿಗಳ ಮೂಲದಿಂದಲೇ ತಿಳಿದುಬಂದಿದೆ. ಅಲ್ಲದೇ ಕಳೆದ 2 ತಿಂಗಳಿನಲ್ಲಿ 6 ಬಸ್ಗಳು ಅಪಘಾತಕ್ಕೆ ಒಳಗಾಗಿದ್ದು, ಇದರಿಂದ ಜಿಲ್ಲೆಯ ಜನರು ಅತಂಕಕ್ಕೆ ಒಳಗಾಗಿದ್ದಾರೆ.












Click it and Unblock the Notifications