ಉಕ್ಕಿ ಹರಿದ ತುಂಗಭದ್ರೆ: ರಾಯರ ಮಂತ್ರಾಲಯ ಜಲಾವೃತ
ರಾಯಚೂರು, ಜುಲೈ 27: ರಾಯಚೂರು ಜಿಲ್ಲೆಯಲ್ಲಿ ಎರಡು ಪ್ರಮುಖ ನದಿಗಳಾದ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತವೆ. ಒಂದೆಡೆ ಕೃಷ್ಣಾ ನದಿ ಪ್ರವಾಹ ತಗ್ಗುತ್ತಿದ್ದಂತೆಯೇ, ತುಂಗಭದ್ರೆಯ ಪ್ರವಾಹ ಭೀತಿ ಆರಂಭವಾಗಿದೆ.
ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿರುವುದರಿಂದ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದ್ದು, ಗ್ರಾಮಗಳ ಜನ ಪ್ರವಾಹದ ಆತಂಕದಲ್ಲಿದ್ದಾರೆ.
ಅಲ್ಲದೇ ತುಂಗಭದ್ರಾ ನದಿಯ ಪ್ರವಾಹಕ್ಕೆ ರಾಯಚೂರಿನ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಬೃಂದಾವನ ಜಲಾವೃತವಾಗಿದ್ದು, ನೀರಿನಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರವಾಹ ಪರಿಸ್ಥಿತಿಯಿಂದ ಅಡಚಣೆಯಾಗಿದೆ.
ಇನ್ನು ರಾಯಚೂರು ಮಾನ್ವಿ ತಾಲೂಕಿನ ರಾಜೊಳ್ಳಿ ಬಂಡಾ ತಿರುವು ಯೋಜನೆ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಎಲ್ಲಾ ಗೇಟ್ಗಳ ಮೂಲಕ ನೀರನ್ನು ಕಾಲುವೆಗೆ ಹರಿಬಿಡಲಾಗುತ್ತಿದೆ. ಅಣೆಕಟ್ಟು ತುಂಬಿದ್ದರಿಂದ ತಡೆಗೋಡೆ ಮೇಲಿನಿಂದ ಧುಮ್ಮಿಕ್ಕಿ ಹರಿಯುತ್ತಿರುವ ನೀರು ಆಂಧ್ರಪ್ರದೇಶಕ್ಕೆ ಸೇರುತ್ತಿದೆ. ನೀರು ಉಕ್ಕಿ ಹರಿಯುದನ್ನು ನೋಡಲು ಜನ ತಂಡೋಪತಂಡವಾಗಿ ಇಲ್ಲಿಗೆ ಬರುತ್ತಿದ್ದಾರೆ.
ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮ ಪ್ರವಾಹ ಭೀತಿ ಎದುರಿಸುತ್ತಿದ್ದು, ಇಲ್ಲಿನ ಗುರು ರಾಘವೇಂದ್ರ ಸ್ವಾಮಿಗಳ ಜಪದ ಕಟ್ಟೆ, ಸ್ವಪ್ನ ವೃಂದಾವನ ಮುಳುಗಡೆಯಾಗಿದೆ. ಸದ್ಯ ಜಲಾಶಯಕ್ಕೆ 1,12,855 ಕ್ಯೂಸೆಕ್ಸ್ ಒಳಹರಿವು ಇದ್ದು, 68,482 ಕ್ಯೂಸೆಕ್ಸ್ ಹೊರಹರಿವು ಇದೆ.
Recommended Video