Leopard Attack: ಶೌಚಕ್ಕೆ ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ..!
ರಾಯಚೂರು ಜುಲೈ 07 : ಶೌಚಕ್ಕೆ ಹೋಗಿದ್ದ ವ್ಯಕ್ತಿ ಮೇಲೆ ಚಿರತೆಯೊಂದು ದಾಳಿ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ದೇವದುರ್ಗ ತಾಲ್ಲೂಕಿನ ಕರಡಿಗುಡ್ಡ ಗ್ರಾಮದ ಹೊರವಲಯದಲ್ಲಿ ಗ್ರಾಮದ ಮೂವರ ಮೇಲೆ ಚಿರತೆ ದಾಳಿ ನಡೆಸಿದ್ದು ಓರ್ವ ಗಂಭೀರ ಗಾಯಗೊಂಡಿದ್ದು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಗ್ರಾಮದ ರಂಗಪ್ಪ ಎಂಬ 10ನೇ ತರಗತಿ ಯುವಕ ಬೆಳಗಿನ ಜಾವ 8 ಗಂಟೆ ಸುಮಾರಿಗೆ ಬಯಲು ಶೌಚಕ್ಕೆ ತೆರಳು ವೇಳೆ ಪ್ರತ್ಯಕ್ಷವಾಗಿ ನೋಡಿದ್ದಾನೆ. ಓಡಿ ಬಂದ ಯುವಕ ಮನೆಯಲ್ಲಿ ಸುದ್ದಿ ತಿಳಿಸಿದ್ದಾನೆ.
ಗ್ರಾಮದ ಜನರು ಚಿರತೆಯನ್ನು ಎದರಿಸಲು ಶಿಳ್ಳೆ ಹಾಕಿ ಶಬ್ದ ಮಾಡುವ ವೇಳೆ ಚಿರತೆ ಗ್ರಾಮದ ರಮೇಶ (35) ಮೇಲೆ ದಾಳಿ ಮಾಡಿ ಬಲಗೈ ಹಿಡಿದು ಗಾಯಗೊಳಿಸಿದೆ. ಬಿಡಿಸಲು ಹೋದ ಮಲ್ಲಣ್ಣ (42), ರಂಗನಾಥ (29) ಮೇಲೆ ದಾಳಿ ಮಾಡಿದೆ. ಮೂವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸ್ಥಳಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಚಿರತೆ ಪ್ರತ್ಯಕ್ಷವಾಗುತ್ತಿದ್ದರು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೇ 18 ರಂದು ವಾಚನಾಯಕ ತಾಂಡದಲ್ಲಿ ಆಕಳು ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಜರಗಿತ್ತು.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾಲಹಳ್ಳಿ, ಬಿ ಗಣೇಕಲ್, ಎನ್ ಗಣೇಕಲ್, ಆಲ್ಕೋಡ ಮತ್ತು ಅರಕೇರಾ ಸುತ್ತಲೂ ಚಿರತೆ ಪ್ರತ್ಯಕ್ಷ ಹೆಜ್ಜೆ ಗುರುತು ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲ್ಲೂಕು ಆಡಳಿತ ಮತ್ತು ಅರಣ್ಯ ಇಲಾಖೆ ಚಿರತೆ ದಾಳಿಯನ್ನು ಗಂಭೀರವಾಗಿ ಪರಿಗಣಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಚಿರತೆ ಪ್ರತ್ಯಕ್ಷಗೊಂಡ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಡಿ ಕರಡಿಗುಡ್ಡ ಗ್ರಾಮಸ್ಥರು ಒತ್ತಾಯಿಸಿದರು.












Click it and Unblock the Notifications