ಜೆಡಿಎಸ್ ಪ್ರತಿ ಜಿಲ್ಲೆಯಲ್ಲೂ ಖಾತೆ ತೆರೆಯಲಿದೆ: ಎಚ್.ಡಿ.ಕುಮಾರಸ್ವಾಮಿ ಭವಿಷ್ಯ
ರಾಯಚೂರು, ಮೇ, 02: ದೇಶದಲ್ಲಿ ಜಿಎಸ್ಟಿ ತೆರಿಗೆ ದಾಖಲೆ ಪ್ರಮಾಣದಲ್ಲಿ ಸಂಗ್ರಹ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಜನರು ತೆರಿಗೆ ಕಟ್ಟುತ್ತಿದ್ದಾರೆ. ಈ ಹಣದಿಂದ ಬಡವರ ಬದುಕು ಕಟ್ಟಲಾಗುತ್ತಿದೆಯೋ ಅಥವಾ ಒಂದೆರಡು ಕಂಪೆನಿಗಳನ್ನು ಉದ್ದಾರ ಮಾಡಲು ಬಳಕೆಯಾಗುತ್ತಿದೆಯೋ ಎಂಬುದನ್ನು ಜನರ ಮುಂದಿಡಬೇಕು. ಹಾಗೆಯೇ ಈ ಬಾರಿ ಜೆಡಿಎಸ್ ಪ್ರತಿ ಜಿಲ್ಲೆಯಲ್ಲೂ ಖಾತೆ ತೆರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಯಚೂರಿನಲ್ಲಿ ಒತ್ತಾಯಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಅವರು ರಾಯಚೂರು ಜಿಲ್ಲೆಯ ಸಿಂಧನೂರಿಗೆ ಬರುತ್ತಿದ್ದಾರೆ. ಕರ್ನಾಟಕದ 10 ಜಿಲ್ಲೆಯಲ್ಲಿ ಬಡತನವಿದೆ ಎಂದು ಕೇಂದ್ರದ ವರದಿಯಲ್ಲಿದೆ. ರಾಯಚೂರು ಜಿಲ್ಲೆಯ ಅಪೌಷ್ಠಿಕತೆ ಸಮಸ್ಯೆಗೆ ಬಿಜೆಪಿ ಸರ್ಕಾರ ಏನು ಪರಿಹಾರ ಕಲ್ಪಿಸಿದೆ ಎನ್ನುವುದನ್ನು ಹೇಳಬೇಕು ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ಉತ್ತರ ಭಾರತದ ನಾಯಕರಿಗೆ ಕರ್ನಾಟಕದ ಮೇಲೆ ಇತ್ತೀಚೆಗೆ ಪ್ರೀತಿ ಹೆಚ್ಚಾಗಿದೆ. ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರು ರಾಜ್ಯ ಬಿಟ್ಟು ಅಲುಗಾಡುತ್ತಿಲ್ಲ. ಈ ಬಾರಿ ಕರ್ನಾಟಕದ ಜನರು ಹಣಬಲಕ್ಕಿಂತ ಜನಬಲ ಗೆಲ್ಲುತ್ತದೆ ಎಂಬುದನ್ನು ತೋರಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು 70 ಸೀಟು ಪಡೆಯಲು ಬೆವರು ಹರಿಸಬೇಕಾಗುತ್ತದೆ. ಈ ಬಾರಿ ಪ್ರತಿ ಜಿಲ್ಲೆಯಲ್ಲಿ ಜೆಡಿಎಸ್ ಖಾತೆ ತೆರೆಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿಯೇ ಕನಿಷ್ಠ 35 ಸ್ಥಾನಗಳನ್ನು ಪಡೆಯುತ್ತಿದ್ದೇವೆ. ಹಾಗೆಯೆ ದೇವೇಗೌಡರನ್ನು ಭೇಟಿ ಮಾಡಿದ ಧೂತರು ಯಾರು ಎಂಬುದು ಚುನಾವಣೆ ಬಳಿಕ ಬಹಿರಂಗವಾಗಲಿದೆ ಎಂದು ತಿಳಿಸಿದರು.
ಸಮೀಕ್ಷೆಗಳನ್ನು ಹಣ ಕೊಟ್ಟು ಮಾಡಿಸುತ್ತಾರೆ. ಈ ಮೂಲಕ ಜನರ ಭಾವನೆಗಳನ್ನು ಕದಡುವ ಯತ್ನ ಮಾಡುತ್ತಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ ಜೆಡಿಎಸ್ ಪಂಚರತ್ನ ಯೋಜನೆಗಳನ್ನೇ ಬಹುತೇಕ ನಕಲು ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಬಿಜೆಪಿಯವರ ಹೆಲಿಕಾಪ್ಟರ್ ಹಾರಿದ ನಂತರ ಬೇರೆ ಪಕ್ಷದವರ ಹೆಲಿಕಾಪ್ಟರ್ ಹಾರಲು ಅನುಮತಿ ನೀಡುತ್ತಿದ್ದಾರೆ. ಚುನಾವಣೆ ಆಯೋಗ ಈ ಬಗ್ಗೆ ಗಮನಹರಿಸಬೇಕಾಗಿತ್ತು. ಆದರೆ ಅದು ಆಗುತ್ತಿಲ್ಲ ಎಂದರು.
ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಭಾರತೀಯ ಜನತಾ ಪಕ್ಷವು (ಬಿಜೆಪಿ) ಯಾವುದೇ ಬೆಲೆ ತೆತ್ತಾದರೂ ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜನತಾದಳ ( ಜಾತ್ಯತೀತ ) ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬಾದಾಮಿಯಲ್ಲಿ ಪಕ್ಷದ ಅಭ್ಯರ್ಥಿ ಹನುಮಂತ ಮಾವಿನಮರದ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಅವರು ಈ ಹೇಳಿಕೆ ನೀಡಿದರು.
ಜನರನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, 'ನಾನು ಈ ಹಿಂದೆಯೇ ಹೇಳಿದ್ದೇನೆ. ಬಿಜೆಪಿಯವರು ಲಿಂಗಾಯತರನ್ನು ಸಿಎಂ ಮಾಡುವುದಿಲ್ಲ. ವಾಸ್ತವವಾಗಿ, ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲು ತೆರೆಮರೆಯಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದೆ' ಎಂದು ಹೇಳಿದರು.
ಜನರ ನಿಜವಾದ ಸಮಸ್ಯೆಗಳ ಬದಲಾಗಿ ವಿಷಸರ್ಪ ಮತ್ತು ವಿಷಕನ್ಯಾದಂತಹ ವಿಷಯಗಳನ್ನು ಚರ್ಚಿಸಲಾಗುತ್ತಿದೆ ಎಂದು ಜೆಡಿಎಸ್ ನಾಯಕ ತಿಳಿಸಿದರು. ರಾಜ್ಯದಲ್ಲಿನ ನಾನಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಬದಲು ವಿಷಸರ್ಪ, ವಿಷಕನ್ಯೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಇಂತಹ ರಾಜಕಾರಣದ ಅವಶ್ಯಕತೆ ಇಲ್ಲ. ಇವುಗಳಿಂದ ಜನಜೀವನ ಸುಧಾರಿಸುತ್ತದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದರು.
ಎಟಿಎಂ, ಡಬಲ್ ಇಂಜಿನ್ ಬಗ್ಗೆ ಕುಮಾರಸ್ವಾಮಿ ಉಲ್ಲೇಖಿಸಿದರು. ಆದರೆ, ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ಏಕೆ ನಿಲ್ಲಿಸಲಿಲ್ಲ ಎಂದು ನಾನು ಕೇಳಲು ಬಯಸುತ್ತೇನೆ. ಡಬಲ್ ಇಂಜಿನ್ ಸರ್ಕಾರ ರಾಜ್ಯವನ್ನು ಲೂಟಿ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು. 'ಪಿಎಂ ಮೋದಿಯವರು ಜೆಡಿಎಸ್ಗೆ ಕಾಂಗ್ರೆಸ್ನ ಬಿ ಟೀಮ್ ಎಂದು ಕರೆಯುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಅನ್ನು ಬಿಜೆಪಿ ಬಿ ಟೀಮ್ ಎಂದು ಕರೆಯುತ್ತಾರೆ. ನಾವು ದೇಶದ ಜನರ ಮತ್ತು ಕನ್ನಡಿಗರ ಟೀಮ್' ಎಂದು ಅವರು ತಿಳಿಸಿದರು.












Click it and Unblock the Notifications