ವಿಧಾನಸಭಾ ಚುನಾವಣೆ: ರಾಯಚೂರು ಕಾಂಗ್ರೆಸ್ನಲ್ಲಿ ಪೈಪೋಟಿ, 17 ಆಕಾಂಕ್ಷಿಗಳಲ್ಲಿ ಟಿಕೆಟ್ ಯಾರಿಗೆ?
ರಾಯಚೂರು ಡಿ.6: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿಯೇ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರಲ್ಲಿಯೇ ಟಿಕೆಟ್ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಸಾಮಾನ್ಯ ಮೀಸಲು ಕ್ಷೇತ್ರ ರಾಯಚೂರು ನಗರದಲ್ಲಿ 17 ಆಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ.
ರಾಯಚೂರು ನಗರದ ಕ್ಷೇತ್ರದಲ್ಲಿ ಚುನಾವಣೆ ದಿನಾಂಕ ಘೋಷಣೆ ಯಾಗುವ ಪೂರ್ವದಲ್ಲಿ ಯಾರು ಯಾರೊಂದಿಗೆ ರಾಜಿ ಮಾಡಿಕೊಂಡು ಅರ್ಜಿ ಹಿಂಪಡೆದುಕೊಳ್ಳುತ್ತಾರೆ..? ಯಾರಿಗೆ ಬೆಂಬಲಿಸುತ್ತಾರೆ..? ಮುಸ್ಲಿಂ ಆಕಾಂಕ್ಷಿಗೆ ಟಿಕೆಟ್ ನೀಡುತ್ತಾರೋ ಅಥವಾ ಹಿಂದೂ ಆಕಾಂಕ್ಷಿಗೆ ನೀಡುತ್ತಾರೊ..? ವಿರುದ್ಧ ಬಣದವರು ಟಿಕೆಟ್ ಪಡೆದವರ ಪರವಾಗಿ ಪ್ರಚಾರ ಮಾಡುತ್ತಾರೆಯೋ? ಹೀಗೆ ಹತ್ತಾರು ಪ್ರಶ್ನೆಗಳಿಗೆ ರಾಜಕೀಯ ಪ್ರಜ್ಞಾವಂತರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಆರಂಭಿಸಿದ್ದಾರೆ.
ದೇವಸೂಗೂರು: ಕರಾಟೆಯಲ್ಲಿ ಅಣ್ಣ-ತಂಗಿಯ ಅದ್ಭುತ ಸಾಧನೆ, ಹಳ್ಳಿಯಿಂದ ದಿಲ್ಲಿವರೆಗೂ ಕ್ರೀಡಾ ಪಯಣ

ಟಿಕೆಟ್ಗಾಗಿ ಜನರೊಂದಿಗೆ ಗುರುತಿಸಿಕೊಳ್ಳುತ್ತಿರುವ ನಾಯಕರು
ಚುನಾವಣೆಯಲ್ಲಿ ಗೆಲುವಿಗಾಗಿ ಸೆಣಸಾಟ ನಡೆಸುವುದು ಒಂದೆಡೆಯಾದರೆ, ಟಿಕೆಟ್ ಗಿಟ್ಟಿಸಿಕೊಳ್ಳಲು ಪಕ್ಷದೊಳಗೇ ಪೈಪೋಟಿ ನಡೆಸಿ ಜಯ ಸಾಧಿಸಲು ಆಕಾಂಕ್ಷಿಗಳೆಲ್ಲ ಈಗಾಗಲೇ ಕಾರ್ಯತಂತ್ರ ಆರಂಭಿಸಿದ್ದಾರೆ. ರಾಯಚೂರು ನಗರ ಕ್ಷೇತ್ರದಾದ್ಯಂತ ಬಹುತೇಕ ಎಲ್ಲ ನಾಯಕರು ಜನರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ವಾರ್ಡ್ ಕಾರ್ಯಕ್ರಮ, ಮನೆ ಕಾರ್ಯಕ್ರಮ, ಸಮಸ್ಯೆಗಳನ್ನು ಆಲಿಸುವುದು, ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಡುವುದು, ಗಮನ ಸೆಳೆಯುವ ಮುಖಂಡರನ್ನು ಬೆಂಬಲಿಗರನ್ನಾಗಿಸಿಕೊಳ್ಳುವುದು.. ಹೀಗೆ ನಾನಾ ವಿದಧ ತಂತ್ರಗಳಲ್ಲಿ ನಾಯಕರು ತೊಡಗಿಸಿಕೊಳ್ಳುತ್ತಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಬಣ ರಾಜಕೀಯ!
ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿರುವುದು ನಿಚ್ಚಳವಾಗಿದೆ. ಕಾಂಗ್ರೆಸ್ ಯುವಕ ಘಟಕಕ್ಕೆ ನಡೆದ ಚುನಾವಣೆಯಿಂದ ಹಿಡಿದು ನಗರಸಭೆ ಚುನಾವಣೆಗೆ ಟಿಕೆಟ್ ಹಂಚುವವರೆಗೂ ಪರಸ್ಪರ ಎರಡು ಬಣದವರು ಮುಗಿಬಿದ್ದಿರುವುದು ಗುಟ್ಟಾಗಿಲ್ಲ. ರಾಜ್ಯ ನಾಯಕರು ಬಂದಾಗಲೂ ಜಿಲ್ಲೆಯಲ್ಲಿ ಬಣ ರಾಜಕೀಯದ ಕುರಿತು ಸುದ್ದಿಗಳಾಗಿವೆ.

ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ...?
2013 ಮತ್ತು 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸತತ ಸೋಲು ಅನುಭವಿಸಿರುವ ಕಾಂಗ್ರೆಸ್, ಈ ಬಾರಿ ಗೆಲುವು ಸಾಧಿಸಲೇಬೇಕು ಎನ್ನುವ ಯೋಜನೆಯಲ್ಲಿದೆ. ಹೀಗಾಗಿ ಪರಸ್ಪರ ದೋಷಾರೋಪ ಮಾಡುವ ಎರಡೂ ಬಣಗಳನ್ನು ಹೊರತುಪಡಿಸಿ, ಈಗಷ್ಟೇ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಮಣೆ ಹಾಕಿದರೆ ಮುಜಿಬುದ್ದೀನ್ ಹಾಗೂ ಡಾ.ರಜಾಕ್ ಉಸ್ತಾದ್ ಅಂಥವರಿಗೆ ಟಿಕೆಟ್ ದೊರೆಯಲಿದೆ.
ಕಳೆದ ಎರಡೂ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಮುಸ್ಲಿಂ ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲ ಎಂದು ಲೆಕ್ಕಾಚಾರ ಮಾಡಿದರೆ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ ಅಥವಾ ರವಿ ಬೋಸರಾಜ, ಬಸವರಾಜ ಪಾಟೀಲ, ಯಂಕಣ್ಣ ಯಾದವ ಇವರಲ್ಲಿ ಯಾರಿಗಾದರೂ ಟಿಕೆಟ್ ದೊರೆಯುವ ಸಾಧ್ಯತೆ ಇದೆ.

ಟಿಕೆಟ್ ಯಾರಿಗೆ ನೀಡಿದರೂ ಪಕ್ಷಕ್ಕಾಗಿ ಒಟ್ಟಾಗಿ ಕೆಲಸ!
ಎರಡು ಚುನಾವಣೆಗಳಲ್ಲಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿರುವ ಕಾಂಗ್ರೆಸ್ ಅಭ್ಯರ್ಥಿಗೆ ಮತ್ತೊಮ್ಮೆ ಅವಕಾಶ ನೀಡಿದರೆ ಗೆಲ್ಲಬಹುದು ಎಂದು ಕಾಂಗ್ರೆಸ್ ವರಿಷ್ಠರು ಲೆಕ್ಕಾಚಾರ ಮಾಡಿದರೆ, ಸೈಯದ್ ಯಾಸೀನ್ ಅವರಿಗೆ ಟಿಕೆಟ್ ದೊರಕಬಹುದು. ಈಗಾಗಲೇ ನಗರಸಭೆ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಗೆಲುವು ಸಾಧಿಸಿ ಪಕ್ಷದಲ್ಲಿ ಸಕ್ರಿಯವಾಗಿರುವ ನಾಯಕರಿಗೆ ಮಣೆ ಹಾಕಿದರೆ, ಬಷಿರುದ್ದೀನ್, ಅಸ್ಲಂ ಪಾಷಾ, ಸಾಜಿದ್ ಸಮೀರ್, ಮೊಹ್ಮದ್ ಶಾಲಂ,ಎಂ.ಕೆ.ಬಾಬರ್ ಇವರಲ್ಲಿ ಯಾರಿಗಾದರೂ ಟಿಕೆಟ್ ಕೊಡಬಹುದು.
ಟಿಕೆಟ್ ಯಾರಿಗೇ ನೀಡಿದರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಎಲ್ಲ ಆಕಾಂಕ್ಷಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ರಾಯಚೂರು ನಗರ ಕ್ಷೇತ್ರದ ಮಟ್ಟಿಗೆ ಆ ಸೂಚನೆ ಕೆಲಸ ಮಾಡುತ್ತಿದೆಯೋ ಇಲ್ಲವೋ ಕಾದು ನೋಡಬೇಕು.
ರಾಯಚೂರು ನಗರದ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
1. ಎನ್.ಎಸ್.ಬೋಸರಾಜ
2. ರವಿ ಬೋಸರಾಜ
3. ಸೈಯದ್ ಯಾಸೀನ್
4. ಸೈಯದ್ ಸೋಹೆಲ್
5. ಬಸವರಾಜ ಪಾಟೀಲ ಇಟಗಿ
6. ಯಂಕಣ್ಣ ಯಾದವ
7. ಬಷಿರುದ್ದೀನ್
8. ಅಸ್ಲಂ ಪಾಷಾ
9. ಮುಜಿಬುದ್ದೀನ್
10. ಸಾಜಿದ್ ಸಮೀರ್
11. ಮೊಹ್ಮದ್ ಶಾಲಂ
12. ಎಂ.ಕೆ.ಬಾಬರ್
13. ಆಮ್ಜದ್ ಹಟ್ಟಿ
14. ಡಾ.ಅಬ್ದುಲ್ ರಜಾಕ್
15. ಅಬ್ದುಲ್ ಕರೀಂ
16. ಜಾವಿದ್ ಉಲ್ ಹಕ್
17. ಕೆ.ಪಂಪಾಪತಿ