ಯಶ್-ದರ್ಶನ್ ಬಾಡಿಗೆ ಜೋಡೆತ್ತುಗಳು: ಸಚಿವ ನಾಡಗೌಡ
ರಾಯಚೂರು, ಮಾರ್ಚ್ 26: 'ಯಶ್-ದರ್ಶನ್ ಅವರು ಬಾಡಿಗೆ ಜೋಡೆತ್ತುಗಳು, ಸಿನಿಮಾದವರು ಜನರ ಕಷ್ಟಗಳಲ್ಲಿ ಎಂದೂ ಭಾಗಿಯಾಗಿಲ್ಲ' ಎಂದು ಜೆಡಿಎಸ್ ಸಚಿವ ವೆಂಕಟರಾವ್ ನಾಡಗೌಡ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಕನಗನಮರಡಿಯಲ್ಲಿ ಬಸ್ ಬಿದ್ದಾಗ ಈ ನಾಯಕರುಗಳು ಎಲ್ಲಿ ಹೋಗಿದ್ದರು ಎಂದು ಅವರು ಪ್ರಶ್ನೆ ಮಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈಗ ಚುನಾವಣೆ ಬಂದಿದೆ ಹಾಗಾಗಿ ಇವರಿಗೆ ಮಂಡ್ಯದ ನೆನಪಾಗಿದೆ, ಹಾಗಾಗಿಯೇ ಅವು ಬಾಡಿಗೆ ಜೋಡೆತ್ತುಗಳು ಎಂದ ಅವರು, ಇದು ಆಂಧ್ರ, ತಮಿಳುನಾಡು ಅಲ್ಲ ಚಿತ್ರರಂಗದವರು ಚುನಾವಣೆ ಗೆಲ್ಲಲು ಎಂದು ಅವರು ಹೇಳಿದರು.
ಸಿನಿಮಾ ನಟರನ್ನು ನೋಡಲು ಜನ ಬರ್ತಾರೆ ಅದೆಲ್ಲ ಓಟು ಹಾಕಲ್ಲ. ಸಿನಿಮಾ ನೋಡಲು ಬಂದವರೆಲ್ಲ ಓಟು ಹಾಕಲ್ಲ. ಸುಮಲತಾ ಅವರು ತಪ್ಪು ತಿಳುವಳಿಕೆಯಿಂದ ಚುನಾವಣೆಗೆ ನಿಂತಿದ್ದಾರೆ, ಮಂಡ್ಯ ಚುನಾವಣೆ ಯಾವುದೇ ರೀತಿಯ ಟಫ್ ಇಲ್ಲ, ಜೆಡಿಎಸ್ ಗೆಲ್ಲುತ್ತದೆ ಎಂದು ಸಚಿವ ವೆಂಕಟರಾವ್ ಹೇಳಿದ್ದಾರೆ.
ದರ್ಶನ್ ಅವರ ಮನೆ ಮೇಲೆ ಕಲ್ಲು ಎಸೆದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ನಾಡಗೌಡ, ರಾತ್ರಿ 3 ಗಂಟೆಗೆ ಕಲ್ಲು ಹೊಡೆದರು ಎನ್ನುತ್ತಿದ್ದಾರೆ, ಸಿಸಿಟಿವಿ ಆಫ್ ಆಗಿತ್ತು ಎನ್ನುತ್ತಿದ್ದಾರೆ, ಇದೆಲ್ಲಾ ಸಿಂಪತಿ ಕ್ರಿಯೇಟ್ ಮಾಡಿಕೊಳ್ಳಲು ಮಾಡಿರುವ ನಾಟಕ ಎಂದು ಅವರು ಹೇಳಿದರು.