ರಾಯಚೂರಿನಲ್ಲಿ ಮಳೆಗಾಗಿ ಜಲಾಭಿಷೇಕ ಹಮ್ಮಿಕೊಂಡ ರೈತರು
ರಾಯಚೂರು, ಜುಲೈ.02: ಮುಂಗಾರು ಆರಂಭವಾಗಿ ತಿಂಗಳು ಕಳೆಯಿತು. ಆದರೂ ರಾಯಚೂರು ಭಾಗದಲ್ಲಿ ಮಳೆರಾಯ ಕೃಪೆ ತೋರುತ್ತಿಲ್ಲ. ಹೀಗಾಗಿ ರೈತರು ದೇವರ ಮೊರೆ ಹೋಗಿದ್ದು, ರಾಯಚೂರಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜಲಾಭಿಷೇಕ ಹಮ್ಮಿಕೊಳ್ಳಲಾಗಿದೆ.
ನಾಳೆ ಬೆಳಗಿನವರೆಗೆ ಜಲಾಭಿಷೇಕ ಹಾಗೂ ಆರಾಧನೆ ಜರುಗಲಿದೆ. ಈ ವೇಳೆ ಸಾವಿರಾರು ರೈತರು, ಭಕ್ತರು ಭಾಗಿಯಾಗಲಿದ್ದಾರೆ. ನಗರದ ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಜಲಾಭಿಷೇಕಕ್ಕೆ ಚಾಲನೆ ನೀಡಿದ್ದಾರೆ.
ಮಳೆಗಾಗಿ ಬರಿಗಾಲಲ್ಲಿ ಬೆಟ್ಟ ಏರಿದ ಹಿರೀಕ್ಯಾತನಹಳ್ಳಿ ಗ್ರಾಮಸ್ಥರು
ಸೋಮವಾರಪೇಟೆ ಹಿರೇಮಠದ ಷ.ಬ್ರ. ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿಗಳವರ ಅಮೃತ ಹಸ್ತದಿಂದ ಮಂಗಳಗೊಳ್ಳುವುದು, ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿಯವರ ನೇತೃತ್ವದಲ್ಲಿ ಜಲಾಭಿಷೇಕ ಹಮ್ಮಿಕೊಳ್ಳಲಾಗಿದೆ.
ಜೂನ್ 7 ಮತ್ತು 8 ರಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ರಭಸವಾಗಿ ಮಳೆ ಸುರಿದಿತ್ತು. ಇದೇ ಮಳೆಯನ್ನು ನೆಚ್ಚಿಕೊಂಡು ರೈತರು ಹೆಸರು ಮತ್ತು ಉದ್ದು ಬಿತ್ತನೆ ಮಾಡಿದ್ದರು. ಆದರೆ ಬೀಜ ಮೊಳಕೆ ಒಡೆಯುವುದಕ್ಕೆ ಬೇಕಾದ ಅಗತ್ಯ ತೇವಾಂಶ ಇಲ್ಲದೇ ಇರುವುದರಿಂದ ಬಿತ್ತನೆ ಬೀಜವು ನಷ್ಟವಾಗುವ ಆತಂಕ ರೈತರನ್ನು ಈಗ ಕಾಡಲಾರಂಭಿಸಿದೆ.
ಈ ವರ್ಷವಾದರೂ ಮುಂಗಾರು ಸಕಾಲಕ್ಕೆ ಬಂದಿದೆ ಎಂದು ಬಿತ್ತನೆ ಮಾಡಲು ತಯಾರಿ ಮಾಡಿಕೊಂಡು ಕುಳಿತಿದ್ದ ರೈತರೆಲ್ಲ ನಿರಾಸೆಗೆ ಒಳಗಾಗಿದ್ದಾರೆ. ಮಳೆ ಸಮರ್ಪಕವಾಗಿ ಬರುತ್ತದೆಯೋ, ಇಲ್ಲವೋ ಎನ್ನುವ ದ್ವಂದ್ವ ಶುರುವಾಗಿದೆ.