ರಾಯಚೂರು: ಮಳೆರಾಯನ ಆರ್ಭಟದಿಂದ ಮನೆ, ರಸ್ತೆಗಳು ಜಲಾವೃತ
ರಾಯಚೂರು, ಸೆಪ್ಟೆಂಬರ್, 09: ನಗರದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಸಿಯಾತಲಾಬ್, ಜಲಾಲ ನಗರ, ಅರಬ್ ಮೊಹಲ್ಲಾದ ಬಡಾವಣೆಗಳು ಸೇರಿದಂತೆ ಅನೇಕ ತಗ್ಗು ಪ್ರದೇಶಗಳಲ್ಲಿನ ಮನೆಗಳು ಜಲಾವೃತವಾಗಿವೆ. ಮನೆಗಳಿಗೆ ಮಳೆ ನೀರು ನುಗ್ಗಿ ದವಸ ಧಾನ್ಯ, ಬಟ್ಟೆಗಳು ಸೇರಿದಂತೆ ಮುಂತಾದ ಗೃಹ ಉಪಯೋಗಿ ವಸ್ತುಗಳು ನೀರು ಪಾಲಾಗಿವೆ.
ಸುರಿದ ಭಾರಿ ಮಳೆಯಿಂದ ನಗರದ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಮನೆಗಳಲ್ಲಿ ಸಂಗ್ರಹಿಸಿದ್ದ ದವಸ, ಧಾನ್ಯ ಹಾಗೂ ಇನ್ನಿತರ ಸಾಮಗ್ರಿ ನೀರು ಪಾಲಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ಜನರು ಹರಸಾಹಸ ಪಟ್ಟಿದ್ದಾರೆ. ಒಂದೆಡೆ ಕತ್ತಲು ಕವಿದಿದ್ದರೆ, ಮತ್ತೊಂದೆಡೆ ಚರಂಡಿಗಳ ನೀರು ಮನೆಗಳಿಗೆ ನುಗ್ಗಿ ಅವಾಂತರಗಳನ್ನು ಸೃಷ್ಟಿಸಿದೆ. ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ 84 ಲಕ್ಷ ವೆಚ್ಚದಲ್ಲಿ ರಾಜಕಾಲುವೆ ಮತ್ತು ಬಡಾವಣೆ ಚರಂಡಿ ಸ್ವಚ್ಛಗೊಳಿಸಲಾಗಿತ್ತು. ನಂತರ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದು, ಇದೀಗ ಆ ಭರವಸೆಗಳು ಸುಳ್ಳಾಗಿವೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಗದಗ: ಜಿಮ್ಸ್ ಆಸ್ಪತ್ರೆಯ ಔಷಧ ಉಗ್ರಾಣ ಜಲಾವೃತ, 4 ಕೋಟಿ ನಷ್ಟ
ನಗರದ ರಸ್ತೆಗಳೆಲ್ಲ ಗುಂಡಿಮಯ
ರಾಜಕಾಲುವೆ ಮತ್ತು ಚರಂಡಿಗಳ ಸ್ವಚ್ಛತೆಯ ನಂತರವೂ ಹಿಂದಿನ ಸ್ಥಿತಿಯೇ ಮುಂದುವರೆದಿದೆ. ನಗರದ ರಸ್ತೆಗಳು ಕೆರೆಯಂತಾಗಿದ್ದು, ಸಂಚಾರಕ್ಕೆ ಅಡೆತಡೆ ಆಗಿದೆ. ವಾಹನ ಸವಾರರು ಗುಂಡಿಬಿದ್ದ ರಸ್ತೆಗಳಲ್ಲಿ ಎದ್ದು, ಬಿದ್ದು ಸಾಗುವುದು ಒಂದೆಡೆ ಆದರೆ, ಮತ್ತೊಂದೆಡೆ ಮೊಣಕಾಲಿನವರೆ ನೀರು ತುಂಬಿದ ಬಡಾವಣೆಗಳಲ್ಲಿ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಇಲ್ಲಿಯೂ ಕೂಡ ಬೆಂಗಳೂರಿನ ರೀತಿಯಲ್ಲಿ ಮಳೆ ಅವಾಂತರವನ್ನು ಸೃಷ್ಟಿಸಿದೆ. 2009ರಲ್ಲಿ ಉಂಟಾದ ಜಲಪ್ರಳಯ ಮತ್ತೆ ಮರುಕಳಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಗದಗ ಜಿಲ್ಲೆಯಲ್ಲಿ ಮನೆಗಳು ಜಲಾವೃತ: ಊಟ ಇಲ್ಲದೇ ಮಹಿಳೆಯರು, ವೃದ್ಧರು ಕಣ್ಣೀರು
ಡಬಲ್ ಇಂಜಿನ್ ಸರ್ಕಾರಕ್ಕೆ ಕ್ಲಾಸ್
ರಸ್ತೆಯ ಅಕ್ಕಪಕ್ಕದಲ್ಲಿದ್ದ ಕಸ, ಕಡ್ಡಿಗಳೆಲ್ಲ ಮಳೆ ನೀರಿನ ರಭಸಕ್ಕೆ ಜನವಸತಿ ಪ್ರದೇಶದ ಮನೆಗಳಿಗೆ ನುಗ್ಗಿದೆ. ಇದರಿಂದ ಜನರು ಮನೆಯ ಹೊಸ್ತಲಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಡಬಲ್ ಇಂಜಿನ್ ಸರ್ಕಾರ ಇದ್ದರೂ ಏನು ಪ್ರಯೋಜನ ಇಲ್ಲದಂತಾಗಿದೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಹಿಂದುಳಿದ ಮತ್ತು ಮಹಾತ್ವಕಾಂಕ್ಷಿ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಗ್ರೇಡ್-1 ನಗರಸಭೆ ಪರಿಸ್ಥಿತಿ ಹೇಳತೀರದಾಗಿದ್ದು, ಯಾವುದೇ ಜನಪ್ರತಿಧಿಗಳು ಇತ್ತ ತಲೆ ಹಾಕುತ್ತಿಲ್ಲ ಎನ್ನುವ ಆರೋಪಗಳು ಹೆಚ್ಚಾಗುತ್ತಲೇ ಇವೆ. ನಗರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದಾರೆಯೆ ಅಥವಾ ಇಲ್ಲವೆ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಪ್ರತಿ ಬಾರಿಯೂ ಮಳೆ ಬಂದಾಗಲೆಲ್ಲ ಇಲ್ಲಿನ ಪರಿಸ್ಥಿತಿ ಅಯೋಮಯವಾಗಿರುತ್ತದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಶ್ವತ ಪರಿಹಾರವನ್ನು ಒದಗಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಹೂಳು ಎತ್ತಿಸದ ಜನಪ್ರತಿನಿಧಿಗಳು
ಸಿಯಾತಲಾಬ್ ಬಡಾವಣೆಯ ಕೆಲವು ಕಡೆ ಜನರು ಕೊಳಚೆ ನೀರಿನಲ್ಲಿಯೇ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನು ಸುಖಾಣಿ ಬಡಾವಣೆ, ಅರಬ್ ಮೊಹಲ್ಲಾದ ಅಲಿನಾಯಕ ಬಡಾವಣೆಗಳಲ್ಲಿ ಎಲ್ಲಿ ನೋಡಿದರೂ ಮಳೆ ನೀರು ಸಂಗ್ರಹವಾಗಿಬಿಟ್ಟಿದೆ. ಸಮರ್ಪಕವಾದ ಚರಂಡಿಗಳ ಕೊರತೆ ಮತ್ತು ರಾಜ ಕಾಲುವೆಗಳಲ್ಲಿ ಹೂಳು ಎತ್ತದ ಕಾರಣ ಅನಾಹುತಗಳು ಸಂಭವಿಸುತ್ತಿವೆ ಎಂದು ಜನರ ಆರೋಪವಾಗಿದೆ. ಮಕ್ಕಳು, ವೃದ್ಧರನ್ನು ಕರೆದುಕೊಂಡು ಬಂದ ಬಡಾವಣೆಗಳ ಜನರು ಶಾಸಕರು, ವಿರೋಧ ಪಕ್ಷದ ಮುಖಂಡರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜನಪ್ರತಿನಿಧಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ
ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಜನರು ಎದ್ದು, ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹತ್ತಿ ಮಾರುಕಟ್ಟೆ ಬಳಿಯಿರುವ ರೈಲ್ವೇ ಬ್ರಿಡ್ಜ್ ಕೆಳ ಭಾಗದಲ್ಲಿ ರಸ್ತೆಯಲ್ಲಿ ಭಾರಿ ಪ್ರಮಾಣದ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರು ಪರಡಾಡುವಂತಾಗಿದೆ. ರಸ್ತೆಯಲ್ಲಿ ಗುಂಡಿ ಇರುವ ಬಗ್ಗೆ ಮಾಹಿತಿಯಿಲ್ಲದೆ ಸಂಚರಿಸಿದ ದ್ವಿಚಕ್ರ ವಾಹನ ಪ್ರಯಾಣಿಕರು ಬಿದ್ದಿರುವ ಉದಾಹರಣೆಗಳು ಇವೆ. ನಗರ ಪ್ರವೇಶದ ಆರಂಭದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ 167ರ ಗತಿ ಒಳ ಭಾಗದ ರಸ್ತೆಗಳ ದುಸ್ಥಿತಿಗೆ ನಿದರ್ಶನವಾಗಿದೆ. ಆರ್ಟಿಓ ವೃತ್ತದ ಬಳಿ ಇದೇ ರೀತಿಯಲ್ಲಿ ರಸ್ತೆ ಅಸ್ತವ್ಯಸ್ಥವಾಗಿರುವುದು ಜನರಿಗೆ ನಿತ್ಯ ನರಕವಾಗಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಯಾವುದು ಗುಂಡಿ, ಯಾವುದು ರಸ್ತೆ ಎಂದು ತಿಳಿಯದಂತಹ ಸ್ಥಿತಿ ನಿರ್ಮಾಣ ಆಗಿದೆ. ರೈಲ್ವೇ ಬ್ರಿಡ್ಜ್ ಕೆಳ ಭಾಗದಲ್ಲಿ ನೀರು ತುಂಬಿಕೊಂಡಿರು ವಿಡಿಯೋಗಳು ವೈರಲ್ ಮತ್ತು ವಿರೋಧ ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿದ ನಂತರ ನಗರಸಭೆ ಅಧಿಕಾರಿಗಳು ಬಂದು ನೀರು ತೆರವುಗೊಳಿಸಿದ್ದಾರೆ. ನಗರಸಭೆ ಸದಸ್ಯರಾದ ಸಣ್ಣ ನರಸರೆಡ್ಡಿ ಅವರು ರೈಲ್ವೇ ಬ್ರಿಡ್ಜ್ ರಸ್ತೆ ದುಸ್ಥಿತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.