ರಾಯಚೂರು: 'ಮಹಾ'ಮಳೆ, ನಾರಾಯಣಪುರ ಜಲಾಶಯ ಭಾಗದ ನಿವಾಸಿಗಳಿಗೆ ಪ್ರವಾಹ ಭೀತಿ
ರಾಯಚೂರು, ಜುಲೈ 8: ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆಯಿಂದಾಗಿ ನಾರಾಯಣಪುರ ಜಲಾಶಯದ ಕೆಳ ಭಾಗದ ನಿವಾಸಿಗಳು ಮತ್ತೇ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರದ ಪುಣೆ, ಸತಾರಾ ಮತ್ತು ಕೊಲ್ಹಾಪುರದಲ್ಲಿ ಮುಂದಿನ ಮೂರು ದಿನಗಳವರೆಗೆ ರೆಡ್ ಅಲರ್ಟ್ ನೀಡಲಾಗಿದೆ. ಕಳೆದ ಎರಡು, ಮೂರು ದಿನಗಳಿಂದ ನಾರಾಯಣಪುರ, ಆಲಮಟ್ಟಿ ಮೇಲ್ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ.
ಮಳೆಯ ಆರ್ಭಟ ಜೋರು; ಆರೋಗ್ಯ ರಕ್ಷಣೆಗೆ ಸಲಹೆಗಳು
ಇದರಿಂದಾಗಿ ಕೃಷ್ಣಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಹರಿವಿನ ಹೆಚ್ಚಳವಾಗಿದ್ದು, ನಾರಾಯಣಪುರ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. 492 ಮೀ. ಎತ್ತರದ ನಾರಾಯಣಪುರ ಜಲಾಶಯ ಪ್ರಸ್ತುತ 491 ಮೀ.ಗಳಷ್ಟು ತುಂಬಿಕೊಂಡಿದೆ. ಪೂರ್ಣ ಪ್ರಮಾಣದ ಭರ್ತಿಗೆ ಕೇವಲ 1 ಮೀ. ಮಾತ್ರ ಬಾಕಿಯಿದ್ದು, ಮೇಲ್ಭಾಗದಲ್ಲಿ ಮಳೆ ಪ್ರಮಾಣ ಮತ್ತಷ್ಟು ಮುಂದುವರೆಯಲಿರುವುದರಿಂದ ಯಾವುದೇ ಕ್ಷಣದಲ್ಲಿ ನಾರಾಯಣಪುರ ಜಲಾಶಯದ ಗೇಟ್ ತೆರೆದು, ಭಾರೀ ಪ್ರಮಾಣದ ನೀರು ಹೊರ ಬಿಡುವ ಸಾಧ್ಯತೆಗಳಿವೆ.
ಪ್ರತಿ ವರ್ಷವೂ ಕೃಷ್ಣಾ ನದಿ ಪ್ರವಾಹ
ಜಲಾಶಯದ ನೀರು ಹೊರಬರುವುದರಿಂದ ಲಿಂಗಸೂಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ಪಾತ್ರದ ಜನರು ತೀವ್ರ ಆತಂಕಕ್ಕೆ ಗುರಿಯಾಗುವಂತೆ ಮಾಡಿದೆ. ಲಿಂಗಸೂಗೂರು ಮತ್ತು ರಾಯಚೂರು ತಾಲೂಕಿನ 5 ನಡುಗಡ್ಡೆಗಳಲ್ಲಿ ಜನರು ವಾಸವಾಗಿದ್ದಾರೆ. ಪ್ರತಿ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಈ ನಿವಾಸಿಗಳ ಸಂಪರ್ಕ ಕಡಿತ ಮತ್ತು ತೀವ್ರ ಆತಂಕದ ಪರಿಸ್ಥಿತಿ ಸರ್ವಸಾಮಾನ್ಯದಂತಾಗಿದೆ. ಈ ಬಾರಿಯೂ ಅಂತಹದ್ದೆ ಪರಿಸ್ಥಿತಿಯಿಂದ ನದಿ ಪಾತ್ರ ಹಾಗೂ ನಡುಗಡ್ಡೆ ಜನ ತಳಮಳಕ್ಕೆ ಗುರಿಯಾಗಿದ್ದಾರೆ.
Breaking; ಕಬಿನಿ ಭರ್ತಿಗೆ ಕ್ಷಣಗಣನೆ, ನದಿ ಪಾತ್ರದ ಜನರಿಗೆ ಎಚ್ಚರಿಕೆ
15 ಹಳ್ಳಿಗಳ ಜನರು ವಸತಿ ಹೀನರಾಗುವ ಸಾಧ್ಯತೆ
ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಸೇತುವೆಗಳು ಮುಳಿಗಿದಂತಹ ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಇದೇ ರೀತಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಮೂರು ತಾಲೂಕುಗಳಲ್ಲಿ ಸುಮಾರು 50 ಕ್ಕೂ ಅಧಿಕ ಗ್ರಾಮಗಳು ನದಿ ಪಾತ್ರದಲ್ಲಿವೆ. ಸುಮಾರು 15 ರಿಂದ 20 ಗ್ರಾಮಗಳು ನದಿಯ ಪ್ರವಾಹದಿಂದ ಪ್ರಭಾವಕ್ಕೆ ಗುರಿಯಾಗುವ ಪರಿಸ್ಥಿತಿಯಲ್ಲಿವೆ. ಕೃಷ್ಣಾ ನದಿಯಲ್ಲಿ 2 ರಿಂದ 3 ಲಕ್ಷ ಕ್ಯೂಸೆಕ್ ನೀರು ಪ್ರವಾಹ ಹೆಚ್ಚಿದರೆ, ಸುಮಾರು 15 ಹಳ್ಳಿಗಳ ಜನರು ವಸತಿ ಹೀನರಾಗುವ ಸಾಧ್ಯತೆಗಳಿವೆ. ಕಳೆದ ಎರಡು ದಶಕದಿಂದ ಕೃಷ್ಣಾ ನದಿ ಪ್ರವಾಹ ಈ ಭಾಗದಲ್ಲಿ ಈ ರೀತಿಯ ಅನುಭವಕ್ಕೆ ಕಾರಣವಾಗಿದೆ. ಈಗ ಮತ್ತೇ ಕೃಷ್ಣಾ ನದಿಯ ಪ್ರವಾಹದ ಭೀತಿಗೆ ಜನ ಆತಂಕಗೊಳ್ಳುವಂತೆ ಮಾಡಿದೆ.
ಪ್ರವಾಹದ ಬಗ್ಗೆ ಮಾಹಿತಿ
ಜಿಲ್ಲಾಡಳಿತ ಇತ್ತೀಚಿಗಷ್ಟೆ ಪ್ರವಾಹದ ಮುನ್ಸೂಚನೆ ಹಿನ್ನೆಲೆಯಲ್ಲಿ ನಡುಗಡ್ಡೆ ಸೇರಿದಂತೆ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿಯ ನಿವಾಸಿಗಳಿಗೆ ಜಾಗೃತಿ ಮೂಡಿಸುವ ಸಭೆಗಳನ್ನು ನಡೆಸಿವೆ. ಸಹಾಯಕ ಆಯುಕ್ತ ರಜನಿಕಾಂತ್ ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಕುರ್ವಕುಂದಾ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿ, ಸಭೆಗಳನ್ನು ನಡೆಸಿ ಪ್ರವಾಹದ ಬಗ್ಗೆ ಮಾಹಿತಿ ನೀಡಿದರು.
ರಕ್ಷಣೆಗೆ ಜಿಲ್ಲಾಡಳಿತ
ರಕ್ಷಣಾ ಕಾರ್ಯಕ್ಕೆ ಎನ್ಡಿಆರ್ಎಫ್ ತಂಡವೂ ಸಿದ್ಧವಾಗಿದೆ. ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ ಬೋಟ್ಗಳನ್ನು ಸಜ್ಜುಗೊಳಿಸಲಾಗಿದೆ. ಪ್ರಸ್ತುತ ಇನ್ನೂ ಜಲಾಶಯದಿಂದ ನೀರು ಬಿಡದಿರುವುದರಿಂದ ಯಾವುದೇ ಆತಂಕವಿಲ್ಲವಾದರೂ, ಜಲಾಶಯದಿಂದ ನದಿಗೆ ನೀರು ಬಿಟ್ಟ ನಂತರ ಜನ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.